ಟವೆಲ್ ಕೊಡವಿದ ಗೌಡ್ರು: ಭಿನ್ನಮತೀಯರಿಗೆ ಹೊಸ ಸಂದೇಶ?
ಏನೋ ಚೆಲುವಾ.. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಚೆಲುವರಾಯಸ್ವಾಮಿ ಅವರ ಗಲ್ಲ ಮುಟ್ಟಿದಾಗಲೇ, ಬಹುಷಃ ದೇವೇಗೌಡ್ರಿಗೆ ಪಕ್ಷದ 'ಭಿನ್ನಮತ' ಫುಲ್ ಸ್ಟಾಪ್ ಹಾಕಲೇ ಬೇಕಾದ ಮಟ್ಟಕ್ಕೆ ಬಂದಿದೆ ಎಂದು ಅನಿಸಿರಬಹುದು.
ರಾಜಕೀಯದಲ್ಲಿ ಕೊಟ್ಟ ಮಾತಿಗೆ ಬದ್ದರಾಗುವ ಸತ್ಯ ಹರಿಶ್ಚಂದ್ರರು ನಮ್ಮಲ್ಲಿ ಇರೋ ಉದಾಹರಣೆಗಳು ಕಮ್ಮಿ. ಇದಕ್ಕೆ ದೊಡ್ಡ ಗೌಡ್ರೂ ಹೊರತಾಗಿಲ್ಲ. ಎರಡು ದಿನದ ಹಿಂದಿನ ಗೌಡ್ರ ಹೇಳಿಕೆಗೂ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೂ ತಾಳೆಯಾಗುವುದು ಅಪರೂಪ. ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅದೆಷ್ಟು ಬಾರಿ ಹೇಳಿದ್ದಾರೋ, ನಿನ್ನೆ ಮೊನ್ನೆ ಮತ್ತೆ ಹೇಳಿದ್ದಾರೆ. (ಗೌಡ್ರ ಮೊಮ್ಮಗ ಪ್ರಜ್ವಲ್ ಜೆಡಿಎಸ್ ಸೇರ್ಪಡೆ)
ರಾಜಕೀಯ ಮತ್ತು ರಾಜಕೀಯ ಪಕ್ಷ ಎಂದ ಮೇಲೆ ಭಿನ್ನಮತ, ಅಸಮಾಧಾನ ಸಹಜ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ, ಜೆಡಿಎಸ್ ನಲ್ಲಿನ ಈಗಿನ ಭಿನ್ನಮತ ಕಂಡು ಗೌಡ್ರು ನಿದ್ದೆ ಇಲ್ಲದ ರಾತ್ರಿ ಕಂಡಿರಬಹುದು.
ಜೆಡಿಎಸ್ ನಲ್ಲಿನ ಈಗಿನ ಭಿನ್ನಮತ ಎಂದರೆ ಎದುರಿಗೆ ಕಾಣಿಸುವುದು ನಾಲ್ವರು. ಚೆಲುವರಾಯಸ್ವಾಮಿ, ಜಮೀರ್, ಬಾಲಕೃಷ್ಣ, ಅನ್ಸಾರಿ. ಆದರೆ ಇದರಿಂದ ಹೊರತಾಗಿ ಹದಿನೈದಕ್ಕೂ ಹೆಚ್ಚು ಶಾಸಕರು ಪಕ್ಷದ ಮೇಲೆ ಮುನಿಸಿಕೊಂಡಿರುವುದು ಜೆಡಿಎಸ್ ಮೂಲಕ್ಕೇ ಈಗ ಸಂಚಕಾರ ಬಂದಂತಾಗಿದೆ.
ಕುಮಾರಸ್ವಾಮಿ ಕಾರ್ಯವೈಖರಿಯಿಂದಲೇ ಜೆಡಿಎಸ್ ಭಿನ್ನಮತ ಈ ಮಟ್ಟಕ್ಕೆ ಬೆಳೆಯಲು ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಗೌಡ್ರು, ಪಕ್ಷ ಬಿಟ್ಟು ಹೋಗುವವರು ಪಕ್ಷ ಬಿಟ್ಟು ಹೋಗಲಿ ಎಂದು ನೀಡುತ್ತಿರುವ ಹೇಳಿಕೆ ಸಮಸ್ಯೆ ಇನ್ನಷ್ಟು ಜಟಿಲವಾಗಲು ಕಾರಣವಾಗಿದೆ. (ಜೆಡಿಎಸ್ ನಲ್ಲಿ ಇಪ್ಪತ್ತು ಬಂಡಾಯ ಶಾಸಕರು)
ಮೊಮ್ಮಗನ ಪಟ್ಟಾಭಿಷೇಕಕ್ಕೆ ಸಿದ್ದತೆ, ಮುಂದೆ ಓದಿ..

ಪಕ್ಷದ ಕಚೇರಿ ವಿವಾದ
ಪಕ್ಷದ ಕಚೇರಿ ವಿಚಾರವನ್ನು ಎನ್ ಕ್ಯಾಷ್ ಮಾಡಿಕೊಳ್ಳುವ ತನ್ನ ರಾಜಕೀಯ ನಡೆಗೆ ಹಿನ್ನಡೆ ಉಂಟಾಗುತ್ತಿದ್ದಂತೆಯೇ, ಗೌಡ್ರು ಹೊಸ ನಡೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಒಕ್ಕಲಿಗರ ಸಂಘದ ಕಟ್ಟಡಕ್ಕೆ ಪಕ್ಷದ ಕಚೇರಿಯನ್ನು ಸ್ಥಳಾಂತರ ಮಾಡದಿರುವ ತನ್ನ ನಿರ್ಧಾರದ ಹಿಂದೆ ಸಂಘದ ಪದಾಧಿಕಾರಿಗಳ ವಿರೋಧವೂ ಕಾರಣ ಎಂದೇ ಹೇಳಲಾಗುತ್ತಿದೆ.

ಯವಕರನ್ನು ಸೆಳೆಯುವ ಗೌಡ್ರ ತಂತ್ರ
ಯುವಕರನ್ನು ಪಕ್ಷದತ್ತ ಸೆಳೆಯಲು ಗೌಡ್ರು ಮನಸ್ಸು ಮಾಡಿದ್ದಾರೆ ಎನ್ನುವ ಸುದ್ದಿಯಿದೆ. ಈ ನಿಟ್ಟಿನಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರನ್ನು ಬಳಸಿಕೊಳ್ಳಲು ಗೌಡ್ರು ನಿರ್ಧರಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ತಾತನ ಪರವಾಗಿ ಸಂಘಟಿತ ಪ್ರಚಾರ ನಡೆಸಿದ್ದ ಮೊಮ್ಮಗನಿಗೆ ಸಂಪೂರ್ಣ ಪ್ರೋತ್ಸಾಹ ನೀಡುವ ನಿರ್ಧಾರಕ್ಕೆ ಗೌಡ್ರು ಬಂದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಯುವ ಘಟಕದ ಅಧ್ಯಕ್ಷನ ಪಟ್ಟ
ಭಿನ್ನಮತೀಯರಿಗೆ ಹೊಸ ಸಂದೇಶ ನೀಡಲು ಮುಂದಾಗಿರುವ ಗೌಡ್ರು, ಪ್ರಜ್ವಲ್ ಅವರಿಗೆ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಯಿದೆ. ಕುಟುಂಬ ರಾಜಕಾರಣದಿಂದ ಹೊರಬರಲು ಸಿದ್ದ ಎನ್ನುತ್ತಿದ್ದ ಗೌಡ್ರು, ತಮ್ಮ ನಿಲುವನ್ನು ಬದಲಿಸಿದಂತೆ ಕಾಣುತ್ತಿದೆ.

ಒಕ್ಕಲಿಗರ ಪ್ರಾಭಲ್ಯದ ಜಿಲ್ಲೆಗಳಲ್ಲಿ
ಯುವ ಘಟಕದ ಹಾಲೀ ಅಧ್ಯಕ್ಷರಾಗಿರುವ ಮಧು ಬಂಗಾರಪ್ಪ ಪಕ್ಷದ ಸಚೇತಕರಾಗಿರುವುದರಿಂದ, ಪ್ರಜ್ವಲ್ ಈ ಸ್ಥಾನಕ್ಕೆ ಏರುವುದು ಖಚಿತ ಎನ್ನಲಾಗಿದೆ. ಈಗಾಗಲೇ ಹಾಸನದಲ್ಲಿ ಪಕ್ಷದ ಹೊಣೆ ಹೊತ್ತಿರುವ ಪ್ರಜ್ವಲ್ ಗೆ ಮಂಡ್ಯ, ಮೈಸೂರಿನ ಜವಾಬ್ದಾರಿ ನೀಡುವ ಸಾಧ್ಯತೆಯಿದೆ.

ಸುಳಿವು ನೀಡಿದ್ದ ಗೌಡ್ರು
ಇಂಜಿನಿಯರಿಂಗ್ ಪದವೀಧರರಾಗಿರುವ ಪ್ರಜ್ವಲ್ ಗೆ ರೈತರ ಕಷ್ಟ ಸುಖಗಳನ್ನು ಚಿಕ್ಕಂದಿನಿಂದ ಕಂಡಿರುವ ಅನುಭವವಿದೆ. ಯುವಕರು ಒಗ್ಗೂಡಿದರೆ ದೇಶದ ರಾಜಕೀಯ ದಿಶೆಯನ್ನೇ ಬದಲಾಯಿಸಲು ಸಾಧ್ಯ. ಸರ್ಕಾರ ಹಾಗೂ ಜನ ಸಾಮಾನ್ಯರ ನಡುವೆ ಯುವಕರು ಸೇತುವೆಯಾಗಿ ಕಾರ್ಯ ನಿರ್ವಹಿಸಿದರೆ ಸಮಸ್ಯೆಗಳು ಇನ್ನಿಲ್ಲದಂತೆ ಮಾಯವಾಗಲಿದೆ ಎಂದು, ಪ್ರಜ್ವಲ್ ರಾಜಕೀಯ ರಂಗಪ್ರವೇಶಕ್ಕೆ ದೇವೇಗೌಡ್ರು ಕೆಲವು ದಿನಗಳ ಹಿಂದೆ ಮುನ್ನುಡಿ ಬರೆದಿದ್ದರು.












Click it and Unblock the Notifications