Gandhada Gudi Trailer : ಕಾಡು, ಮಳೆ, ಬೆಟ್ಟ, ಜನ, ನದಿ, ಜಲಪಾತಗಳ ನಡುವೆ ಅಪ್ಪು; ಇದು ಗಂಧದ ಗುಡಿ
ಬೆಂಗಳೂರು, ಅ.09: ಕಾಡುವ ಕಾಡು, ಎತ್ತರದ ಬೆಟ್ಟಗಳ ಸಾಲು, ಕಣ್ಣಿಗೆ ಹಬ್ಬದೂಟ ನೀಡುವ ಪ್ರಕೃತಿ ಸೌಂದರ್ಯ, ಕಾಡು ಜನರು, ಧುಮ್ಮಿಕ್ಕುವ ಜಲಪಾತಗಳು, ಇಷ್ಟು ದಿನ ಕಣ್ಣಿಗೆ ಬೀಳದ ಕರುನಾಡಿನ ವನ್ಯಜೀವಿಗಳ ನಡುವೆ ಕರುನಾಡ ರತ್ನ ಅಪ್ಪು.
ಇದು ಕನ್ನಡಿಗರು ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಪುನೀತ್ ರಾಜ್ಕುಮಾರ್ ಅವರ 'ಗಂಧದ ಗುಡಿ' ಟ್ರೈಲರ್ನ ಅನಾವರಣ. ಬಿಡುಗಡೆಯಾದ ಒಂದು ಗಂಟೆಯೊಳಗೆ ಲಕ್ಷಗಟ್ಟಲೇ ಮಂದಿ ಅಪ್ಪು ಕನಸಿನ ಯೋಜನೆಯನ್ನು ಕಣ್ತುಂಬಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ಪೋಸ್ಟರ್ಗಳ ಮೂಲಕ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ, ಪಿಆರ್ಕೆ ಸ್ಟುಡಿಯೋ ಬಿಡುಗಡೆ ಮಾಡಿರುವ ಟ್ರೈಲರ್ಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ; ಜಂಬೂ ಸವಾರಿಯಲ್ಲಿ ಚಾಮರಾಜನಗರದಿಂದ ಅಪ್ಪು ಸ್ತಬ್ಧಚಿತ್ರ
ಪಿಆರ್ಕೆ ಯುಟ್ಯೂಬ್ ಚಾನೆಲ್ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲು ಭಾನುವಾರ (ಅ.10) ರಂದು ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ರಾಜ್ಕುಮಾರ್ ಅವರ 'ಗಂಧದ ಗುಡಿ' ಟ್ರೈಲರ್ ಪ್ರದರ್ಶನ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಟ ರಾಘವೇಂದ್ರ ರಾಜ್ಕುಮಾರ್, ಶಿವರಾಜ್ ಕುಮಾರ್, ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಸೇರಿದಂತೆ ಇಡೀ ರಾಜ್ಕುಮಾರ್ ಕುಟುಂಬವೇ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಟ್ರೈಲರ್ ಹೇಗಿದೆ...?; ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ತಾವೇ ಸ್ವತಃ ಮುತುವರ್ಜಿ ವಹಿಸಿ ಸಾಕ್ಷ್ಯಾಚಿತ್ರಕ್ಕೆ 'ಗಂಧದ ಗುಡಿ' ಎಂದು ಹೆಸರಿಟ್ಟಿದ್ದರು. ಇದರಲ್ಲಿ ಕರುನಾಡಿನ ವನ್ಯಜೀವಿ ಸಂಪತ್ತು ಮತ್ತು ಕರುನಾಡಿನ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಪಿಆರ್ಕೆ ಸಂಸ್ಥೆ ಹಣ ಹೂಡಿರುವ, ರಾಷ್ಟ್ರ ಪ್ರಶ್ಸತಿ ವಿಜೇತ ಅಮೋಘವರ್ಷ ನಿರ್ದೇಶನ ಮಾಡಿರುವ 'ಗಂಧದ ಗುಡಿ'ಗಾಗಿ ಪುನೀತ್ ರಾಜ್ಕುಮಾರ್, ಕರ್ನಾಟಕದ ಪ್ರಸಿದ್ಧ ಅರಣ್ಯಗಳನ್ನೆಲ್ಲಾ ಸುತ್ತಿದ್ದಾರೆ. ಧುಮ್ಮಿಕ್ಕುವ ಜಲಪಾತಗಳು, ಕಾಡು ಮೇಡು ಅಲೆದು, ಬೆಟ್ಟ ಗುಡ್ಡಗಳನ್ನು ಎರಿ, ಮಳೆ ಚಳಿ ಎನ್ನದೇ ಹೆಕ್ಕಿರುವ ಅದ್ಭುತ ದೃಶ್ಯಗಳು ಟ್ರೈಲರ್ನಲ್ಲಿ ತುಂಬಿಕೊಂಡಿವೆ.
ರಾಜ್ಯದ ಕಾಣದ ಹಲವು ಬೆಟ್ಟಗಳು, ನದಿಯ ಆಳದಲ್ಲಿನ ಜಲ ಸಂಪತ್ತು, ತಣ್ಣನೇಯ ಮುದ ನೀಡುವ ಹಚ್ಚ ಹಸಿರಿನ ಬೆಟ್ಟಗಳ ಸಾಲು, ತಮ್ಮದೇ ಸಂಸ್ಕೃತಿಯನ್ನು ಪ್ರಸ್ತುತ ಪಡಿಸುವ ಕಾಡಿನ ಜನರು, ಕಾಣುವಷ್ಟು ದೂರ ಹಸಿರನ್ನು ಹೊದ್ದಿರುವ ಹಚ್ಚ ಹಸಿರಿನ ಬೆಟ್ಟಗಳ ಸಾಲು, ಹಲ್ಲುಗಾವಲು, ಮಳೆ, ಜಲಪಾತ ಎಲ್ಲವನ್ನೂ ತೋರಿಸಲಾಗಿದೆ. ದೃಶ್ಯಗಳ ಚಿತ್ರೀಕರಣದಲ್ಲಿ ಎಲ್ಲೂ ರಾಜಿಯಾಗಿಲ್ಲ ಎಂಬುದು ವಿಶ್ವಾಸವನ್ನು ಟ್ರೈಲರ್ ನೀಡಿದೆ.
ಅಪ್ಪು ಮಾತಿನಿಂದ ಆರಂಭವಾಗುವ 2.39 ಗಳ ಟ್ರೈಲರ್ ನೋಡುಗರನ್ನು ಕಣ್ಣು ಮಿಟುಕಿಸದಂತೆ ಮಾಡುತ್ತದೆ. ಇನ್ನು ಗಂಧದ ಗುಡಿಯನ್ನು ಅಕ್ಟೋಬರ್ 28 ರಂದು ಚಿತ್ರಮಂದಿರಗಳಲ್ಲಿ ಕಣ್ಣು ತುಂಬಿಕೊಳ್ಳಬಹುದು.
ಅಪ್ಪು ದೈಹಿಕವಾಗಿ ನಮ್ಮನ್ನಗಲಿ ಒಂದು ವರ್ಷವಾದರೂ ಇಂದಿಗೂ ಅವರ ಅಗಲಿಕೆಯನ್ನು ಒಪ್ಪದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ದೊಡ್ಡ ಪರದೆಯ ಮೇಲೆ ಕಣ್ಣು ತುಂಬಿಕೊಳ್ಳಬಹುದು. ಇಂದಿಗೂ ಬೆಂಗಳೂರಿನ ಬೀದಿ ಬೀದಿ, ಅಂಗಡಿಗಳಲ್ಲಿ ಅಪ್ಪು ಕಾಣಸಿಗುತ್ತಾರೆ. ದೇವರ ಫೋಟೋಗಳ ಮಧ್ಯೆ ಪುನೀತ್ ರಾಜ್ಕುಮಾರ್ ಫೋಟೋ ಸಾಮಾನ್ಯವಾಗಿದೆ.
ಟ್ರೈಲರ್ ಬಿಡುಗಡೆಯಾದ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ರೈಲರ್ ಕುರಿತು ಅಶ್ವಿನಿ ಪುನೀತ್ ರಾಜ್ಕುಮಾರ್ ತಿಳಿಸಿದ್ದಾರೆ.
"ನಮಸ್ತೆ ನರೇಂದ್ರ ಮೋದಿ ಅವರೇ, ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಪ್ರಾಜೆಕ್ಟ್ ಗಂಧದಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವ ನಮಗೆ ಇಂದು ಭಾವನಾತ್ಮಕ ದಿನ. ಅಪ್ಪು ಯಾವಾಗಲೂ ನಿಮ್ಮ ಜೊತೆಗಿನ ಮಾತುಕತೆಯನ್ನು ಆನಂದಿಸುತ್ತಿದ್ದರು. ನಿಮ್ಮೊಂದಿಗೆ ವೈಯಕ್ತಿಕವಾಗಿ ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು" ಎಂದು ಟ್ವೀಟ್ ಮಾಡಿದ್ದಾರೆ.