ಆಪರೇಷನ್ ಕಮಲ ಭೀತಿ: ಸಿದ್ದರಾಮಯ್ಯ ಘೋಷಿಸಿದ 'ಬಿ' ಅಲರ್ಟ್
ಮಕರಸಂಕ್ರಾತಿಯ ದಿನ ದೇಶದ ವಾಣಿಜ್ಯ ನಗರಿಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತೆ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ನಿದ್ದೆಗೆಡಿಸಿದೆ. ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರೂ, ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದಾರೆ.
ಆಪರೇಷನೂ ಲ್ಲಾ.. ಕಮಲಾನೂ.. ಇಲ್ಲಾ.. ಎನ್ನುತ್ತಿದ್ದ ಡಿ ಕೆ ಶಿವಕುಮಾರ್, ಮುಂಬೈನಲ್ಲಿ ಆಪರೇಷನ್ ಕಮಲ ನಡೆಯುತ್ತಿರುವುದು ಹೌದು ಎಂದು ಒಪ್ಪಿಕೊಳ್ಳುವ ಮೂಲಕ, ಮಕರ ಸಂಕ್ರಾಂತಿಯಂದು ನಡೆಯುತ್ತಿರುವ ರಾಜಕೀಯ ವಿದ್ಯಮಾನ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಏನೇ ಆದರೂ, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸಮ್ಮಿಶ್ರ ಸರಕಾರಕ್ಕೆ ಯಾವುದೇ ರೀತಿಯ ತೊಂದರೆ ಬರಬಾರದು, ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಸಿದ್ದರಾಮಯ್ಯ, ಉಪಹಾರ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಆಪರೇಷನ್ ಕಮಲಕ್ಕೆ ಬಿಜೆಪಿ ವರಿಷ್ಠ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಎಲ್ಲಾ ಬಿಜೆಪಿ ಶಾಸಕರು ಹರ್ಯಾಣದ ಗುರುಗ್ರಾಮಕ್ಕೆ ಹೋಗಲು ಸಿದ್ದರಾಗಿದ್ದಾರೆ. ಆದರೆ, ನಾವು ಯಾವುದೇ ಕಾಂಗ್ರೆಸ್ ಶಾಸಕರ ಸಂಪರ್ಕದಲ್ಲಿ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

'ಬಿ ಅಲರ್ಟ್' (ಬಿಜೆಪಿ ಅಲರ್ಟ್) ಆಗಿರಿ
ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ, ಆಯಾಯ ಜಿಲ್ಲಾ ಉಸ್ತುವಾರಿಗಳೇ ಶಾಸಕರ ಜವಾಬ್ದಾರಿಯನ್ನು ಹೊರಬೇಕು. ಯಾವ ಶಾಸಕರೂ ಬಿಜೆಪಿಯತ್ತ ಹೋಗದಂತೆ ನೋಡಿಕೊಳ್ಳಬೇಕು. ಬಿಜೆಪಿಯಿಂದ ಅಪರೇಷನ್ ಕಮಲ ಭೀತಿಯಿದೆ, ಶಾಸಕರ ರಕ್ಷಣೆ ನಿಮ್ಮ ಹೊಣೆ. 'ಬಿ ಅಲರ್ಟ್' (ಬಿಜೆಪಿ ಅಲರ್ಟ್) ಆಗಿರಿ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ನಾಗೇಂದ್ರ
ಮೂವರು ಕಾಂಗ್ರೆಸ್ ಶಾಸಕರು ಬಿಜೆಪಿಯವರ ಜೊತೆಯಲ್ಲಿ ಇರುವುದು ಹೌದು ಎಂದು ಒಪ್ಪಿಕೊಂಡಿರುವ ಡಿ ಕೆ ಶಿವಕುಮಾರ್, ಮತ್ತೆ ರಾಜಕೀಯ ಮಾಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ವಿಜಯನಗರ ಶಾಸಕ ಆನಂದ್ ಸಿಂಗ್, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಬಿಜೆಪಿ ಜೊತೆಗಿದ್ದಾರೆಂದು ಡಿಕೆಶಿ ಹೇಳಿದ್ದಾರೆ.

ನಾನು ಕೋರ್ಟ್ ಕೇಸ್ ಸಂಬಂಧ ಬ್ಯೂಸಿಯಾಗಿದ್ದೇನೆ
ಕೆಲವೊಂದು ಮೂಲಗಳ ಪ್ರಕಾರ ಕಾಂಗ್ರೆಸ್ಸಿನ ಹತ್ತು ಶಾಸಕರು ಮುಂಬೈಗೆ ಶಿಫ್ಟ್ ಆಗಿದ್ದಾರೆ. ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿಗೆ ಸೇರುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ. ಡಿಕೆಶಿ ಆರೋಪವನ್ನು ತಳ್ಳಿಹಾಕಿರುವ ಆನಂದ್ ಸಿಂಗ್, ನಾನು ಕೋರ್ಟ್ ಕೇಸ್ ಸಂಬಂಧ ಬ್ಯೂಸಿಯಾಗಿದ್ದೇನೆ. ಮುಂಬೈಗೂ ಹೋಗಿಲ್ಲ, ಡೆಲ್ಲಿಗೂ ಹೋಗಿಲ್ಲ ಎಂದಿದ್ದಾರೆ.

ಯಾರೂ ಸಮ್ಮಿಶ್ರ ಸರಕಾರದಿಂದ ಹೊರ ನಡೆಯುವುದಿಲ್ಲ
ಮುಂಬೈಗೆ ಹೋಗಿರುವ ಮೂವರು ಶಾಸಕರು ಅಲ್ಲಿಗೆ ಹೋಗುವ ಮೊದಲು, ನನ್ನ ಬಳಿ ಹೇಳಿ ಹೋಗಿದ್ದಾರೆ. ಯಾರೂ ಸಮ್ಮಿಶ್ರ ಸರಕಾರದಿಂದ ಹೊರ ನಡೆಯುವುದಿಲ್ಲ. ನಮ್ಮ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ. ಬಿಜೆಪಿ ತೆರೆಯ ಹಿಂದೆ ಏನೇನು ಮಾಡುತ್ತಿದೆ, ಏನೇನು ಆಮಿಷವೊಡ್ಡುತ್ತಿದೆ ಎನ್ನುವ ಅರಿವು ನನಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿಯ ನಿದ್ದೆಗೆಡಿಸಿದ ಸಚಿವರ ಹೇಳಿಕೆ
ಇವೆಲ್ಲದರ ನಡುವೆ, ಜೆಡಿಎಸ್ ಮುಖಂಡ ಮತ್ತು ಸಚಿವ ಬಂಡೆಪ್ಪ ಕಾಶೆಂಪುರ ನೀಡಿರುವ ಹೇಳಿಕೆ, ಬಿಜೆಪಿಯ ನಿದ್ದೆಗೆಡಿಸಿದೆ. ಕೆಲವೇ ತಿಂಗಳಲ್ಲಿ ಬಿಜೆಪಿಯ ಶಾಸಕರು ಸಮ್ಮಿಶ್ರ ಸರಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಮಾಡುತ್ತಿರುವ ಎಲ್ಲಾ ಕೆಲಸಗಳೂ ಠುಸ್ ಬಾಂಬ್ ಆಗಲಿದೆ, ಅವರ ಎಲ್ಲಾ ಪ್ರಯತ್ನ ವಿಫಲವಾಗಲಿದೆ ಎಂದು ಸಚಿವರು ಹೇಳಿದ್ದಾರೆ.











Click it and Unblock the Notifications