ಜನ ಪ್ರತಿನಿಧಿಗಳೇ ನಿಮ್ಮ ಜನ ಸೇವೆ ಓಕೆ, ಫೋಟೋ ಶೆಷನ್ ಶೋಕಿ ಯಾಕೆ: ಇದಾ ಮೋದಿ ಹೇಳಿದ ಸೋಷಿಯಲ್ ಡಿಸ್ಟೆನ್ಸ್
ಲಾಕ್ ಡೌನ್ ಘೋಷಣೆಯಾದ ನಂತರ ಲಕ್ಷಾಂತರ ಮಂದಿ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದವರು, ಟ್ರಕ್ ನಲ್ಲೋ, ನಡೆದುಕೊಂಡೋ, ಬಸ್ಸಿನಲ್ಲೋ, ಬಸ್ಸಿನ ಟಾಪಿನಲ್ಲೋ ಕೂತು, ವಾಪಸ್ ತಮ್ಮ ಊರಿಗೆ ಸೇರಿಕೊಂಡಿದ್ದಾರೆ.
Recommended Video
ರಾಜ್ಯದಲ್ಲಿ ದಿನದ ದುಡಿಮೆಯಿಂದ ಬದುಕು ನಡೆಸುತ್ತಿರುವವರು ಸಾವಿರಾರು ಮಂದಿ. ಇದಕ್ಕಿದ್ದಂತೇ, ಊರೆಲ್ಲಾ ಲಾಕ್ ಡೌನ್ ಆದರೆ, ಅವರ ಹೊಟ್ಟೆಬಟ್ಟೆಯ ಗತಿ? ಸರಕಾರ ಏನೋ, ಹಸಿದ ಹೊಟ್ಟೆಗೆ ಆಹಾರ ಕೊಡುತ್ತಿದೆಯಾದರೂ, ಎಲ್ಲರಿಗೂ, ಸರಿಯಾದ ಸಮಯಕ್ಕೆ ಆಹಾರ ಸಿಗಬೇಕಲ್ಲಾ.
ಲಾಕ್ ಡೌನ್ ಆದ ನಂತರ, ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟವನ್ನು ಸರಕಾರ ನೀಡುತ್ತಿತ್ತು. ಆದರೆ, ಹೆಣದ ಮೇಲೆ ಹಣ ಇದ್ದರೂ ಬಿಡದಂತಹ ಕ್ಯಾಟಗರಿಯ ಜನರು, ಅದರಲ್ಲೂ ದುಡ್ಡು ಮಾಡೋಕೆ ಹೋದರು. ಕೊನೆಗೆ, ಸರಕಾರ ಅದನ್ನು ನಿಲ್ಲಿಸಿತು.
ಮಾನವೀಯತೆ ತೋರಬೇಕಾದ ಈ ಸಮಯದಲ್ಲಿ ಹಲವು ಸಂಘ ಸಂಸ್ಥೆಗಳು ಉಚಿತ ಕಿಟ್, ತಿಂಡಿ, ಊಟವನ್ನು ನಿರ್ಗತಿಕರಿಗೆ, ಬಡವರಿಗೆ ನೀಡುತ್ತಿದೆ. ರಾಜ್ಯದೆಲ್ಲಡೆ ಇಂತಹ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಆದರೆ, ಇವರ ಫೋಟೋ ಶೆಷನ್ ಗೀಳು, ಪರಿಸ್ಥಿತಿಯನ್ನೇ ಅಣಕವಾಡುವಂತಿದೆ.

ತಮ್ಮ ಬೆಂಬಲಿಗರ ಜೊತೆಗೆ ಗುಂಪಾಗಿ ಬಂದು
ಮಾರಣಾಂತಿಕ ಕೊರೊನಾ ತಡೆಗಟ್ಟಲು ಮನೆಯಲ್ಲೇ ಇರುವುದರ ಜೊತೆಗೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಆದರೆ, ಜನ ಪ್ರತಿನಿಧಿಗಳು, ಸಾಮಾಜಿಕ ಕೆಲಸಗಳಲ್ಲಿ ತೊಡಗುವುದರ ಜೊತೆಗೆ, ತಮ್ಮ ಬೆಂಬಲಿಗರ ಜೊತೆಗೆ ಗುಂಪಾಗಿ ಬಂದು, ಮೋದಿ ಹೇಳಿದ ಸೋಷಿಯಲ್ ಡಿಸ್ಟೆನ್ಸ್ ಅನ್ನೇ ನಗೇಪಾಟಲಿಗೆ ಗುರಿ ಮಾಡುತ್ತಿದ್ದಾರೆ.

ಶುಚಿತ್ವವನ್ನು ಕಾಪಾಡಿಕೊಂಡು ಊಟ ವಿತರಣೆ
ಇಸ್ಕಾನ್, ಅದಮ್ಯ ಚೇತನ, ಕರ್ನಾಟಕ ಜೈನ ಸಂಘ ಸೇರಿದಂತೆ, ಹಲವು ಸಂಸ್ಥೆಗಳು ಶಿಸ್ತಿನಿಂದ ಮತ್ತು ಶುಚಿತ್ವವನ್ನು ಕಾಪಾಡಿಕೊಂಡು ಊಟ ವಿತರಣೆ ಮಾಡುತ್ತಿವೆ. ಆದರೆ, ಇದರ ಹೊರತಾಗಿ ಸಚಿವರು, ಸಂಸದರು, ಶಾಸಕರು ಸೇರಿದಂತೆ, ಇತರ ಜನಪ್ರತಿನಿಧಿಗಳು ಅನ್ನದಾನ, ಆಹಾರ ಸಾಮಗ್ರಿಗಳ ಕಿಟ್, ಮಾಸ್ಕ್ ವಿತರಣೆ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಸಮಸ್ಯೆ ಆಗುತ್ತಿರುವುದು ಇಲ್ಲೇ..

ಶಿಸ್ತನ್ನು ಕಾಪಾಡದೇ ಇರುವುದಕ್ಕೆ ಹತ್ತು ಹಲವು ನಿದರ್ಶನಗಳು
ಕಿಟ್, ಆಹಾರ ಪಡೆಯಲು ಬರುವವರನ್ನು ಸಾಮಾಜಿಕ ಅಂತರ ಕಾಪಾಡಲು ಹೇಳುವ ಜನಪ್ರತಿನಿಧಿಗಳು ಮತ್ತು ಅವರ ಹಿಂಬಾಲಕರು, ತಾವು ಮಾತ್ರ ಅದೇ ಶಿಸ್ತನ್ನು ಕಾಪಾಡದೇ ಇರುವುದಕ್ಕೆ ಹತ್ತು ಹಲವು ನಿದರ್ಶನಗಳು ಸಿಗುತ್ತವೆ. ಸಾರ್ವಜನಿಕರಿಗೆಲ್ಲಾ ನೀತಿಪಾಠ ಮಾಡುವ ರಾಜಕಾರಣಿಗಳು ತಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ.

ಎಡಗೈನಲ್ಲಿ ಮಾಡಿದ ದಾನ, ಬಲಗೈಗೆ ಗೊತ್ತಾಗಬಾರದು
ಎಡಗೈನಲ್ಲಿ ಮಾಡಿದ ದಾನ, ಬಲಗೈಗೆ ಗೊತ್ತಾಗಬಾರದು ಎನ್ನುವ ಮಾತಿದೆ. ಪಡಿತರ ಚೀಟಿ ವಿತರಣೆ, ಸರಕಾರದ ವತಿಯಿಂದ ನೀಡಲಾಗುತ್ತಿರುವ ಅಗತ್ಯ ವಸ್ತುಗಳ ಪೂರೈಕೆಯನ್ನು ಅಧಿಕಾರಿಗಳ ವರ್ಗ ಸಸೂತ್ರವಾಗಿ ಮಾಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಗುಂಪು ಕಟ್ಟಿಕೊಂಡು ಬಂದು ಗುರುತರ ಜವಾಬ್ದಾರಿ ಮರೆಯುತ್ತಿರುವುದು ಸಾಮಾಜಿಕ ತಾಣದಲ್ಲಿ ಟೀಕೆಗೆ ಗುರಿಯಾಗುತ್ತಿದೆ. ಜನರ ಸೇವೆಯೇನೋ ನೀವು ಮಾಡುತ್ತಿದ್ದೀರಾ, ಆದರೆ, ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಸಮಯ ಇದಲ್ಲ ಎನ್ನುವುದು ನಮ್ಮ ಕಿವಿಮಾತು.












Click it and Unblock the Notifications