ಇಂಡಿಯಾ ಟುಡೇ ಸಮೀಕ್ಷೆ : ಕುಮಾರಸ್ವಾಮಿ ಸರಕಾರಕ್ಕೆ ಥಂಬ್ಸ್ ಡೌನ್!
Recommended Video

ನಾಲ್ಕು ತಿಂಗಳು ಹಾಗೂಹೀಗೂ ಸವೆಸಿರುವ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ಸರಕಾರದ ಕಾರ್ಯವೈಖರಿಯ ಬಗ್ಗೆ ಶೇ.35ರಷ್ಟು ಸಂದರ್ಶನಕ್ಕೊಳಗಾದ ಜನರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರಕಾರದ ಸಾಧನೆ ಹೇಳಿಕೊಳ್ಳುವಂತಿಲ್ಲ ಎಂದು ಥಂಬ್ಸ್ ಡೌನ್ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಇನ್ನು ಕೇಲವೇ ತಿಂಗಳುಗಳಿರುವಾಗ ಇಂಡಿಯಾ ಟುಡೇ, ಆಕ್ಸಿಸ್ - ಮೈ ಇಂಡಿಯಾದ ಪಾಲಿಟಿಕಲ್ ಸ್ಟಾಕ್ ಎಕ್ಸ್ ಚೇಂಜ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಕುಮಾರಸ್ವಾಮಿ ಸರಕಾರ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ರೈತರ ಸಾಲಮನ್ನಾ, ಮತ್ತಿತರ ಜನಪ್ರಿಯ ಯೋಜನೆಗಳನ್ನು ಘೋಷಿಸಿದರೂ ಪ್ರಯೋಜನವಾಗಿಲ್ಲ.
ಮಾಜಿ ಮುಖ್ಯಮಂತ್ರಿ ಮತ್ತು ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಯುರೋಪ್ ಟೂರಿಗೆ ಹೋಗಿರುವ ಸಂದರ್ಭದಲ್ಲಿ ಸಂಪುಟ ಸೇರುವ ಬೇಡಿಕೆ ಇಟ್ಟಿರುವ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವ ನಾಟಕದಲ್ಲಿ ತಲ್ಲೀನರಾಗಿದ್ದರು, ಯಡಿಯೂರಪ್ಪನವರು ಮತ್ತೊಂದು ಕೈ ನೋಡೇಬಿಡೋಣ ಎಂದು ಮುಂದಡಿಯಿಟ್ಟಿದ್ದರು. ಇಂಥ ಡೋಲಾಯಮಾನ ಸ್ಥಿತಿಯಲ್ಲಿಯೇ ಈ ಸಮೀಕ್ಷೆ ಹೊರಬಿದ್ದಿದೆ.

ಚೆನ್ನಾಗಿದೆ ಎಂದು ಹೇಳಿದವರು ಅತ್ಯಂತ ಕಡಿಮೆ
ಶೇ.35ರಷ್ಟು ಜನರು ಸಮ್ಮಿಶ್ರ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ, ಶೇ.28ರಷ್ಟು ಜನರು ಸರಕಾರದ ಕಾರ್ಯಸಾಧನೆ ಸಾಧಾರಣ ಎಂದಿದ್ದಾರೆ. ಇನ್ನು ಶೇ.23 ಮಂದಿ ಮಾತ್ರ ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟದ ಸರಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ಸಂಗ್ರಹಿಸಲಾದ 11,480 ಸ್ಯಾಂಪಲ್ ಗಳ ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ನರೇಂದ್ರ ಮೋದಿಯೇ ಮತ್ತೆ ಪ್ರಧಾನಿಯಾಗಲಿ
ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರ ಅಲೆ ಇಲ್ಲವೇ ಇಲ್ಲ ಎಂದು ವಿರೋಧಪಕ್ಷದವರು ಘಂಟಾಘೋಷವಾಗಿ ಸಾರುತ್ತಾರೆ. ಆದರೆ, ರಾಜ್ಯದ ಜನತೆಯ ತೀರ್ಮಾನವೇ ಬೇರೆಯಾಗಿರುತ್ತದೆ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಸಾಬೀತಾಗಿದೆ. ಈ ಸಮೀಕ್ಷೆಯಲ್ಲಿ ಕೂಡ ಶೇ.55ರಷ್ಟು ಜನರು ನರೇಂದ್ರ ಮೋದಿಯವರೇ ಭಾರತದ ಪ್ರಧಾನಿಯಾಗಬೇಕು ಎಂದು ಒಕ್ಕೊರಲ ನಿರ್ಣಯಕ್ಕೆ ಬಂದಿದ್ದಾರೆ. ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಆಗಬೇಕೆಂದು ಶೇ.42ರಷ್ಟು ಜನರು ತೀರ್ಪು ನೀಡಿದ್ದಾರೆ. ಹಿಂದಿನ ಹಲವಾರು ಸಮೀಕ್ಷೆಗಳಿಗೆ ಹೋಲಿಸಿದರೆ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಜನಮನ್ನಣೆಯನ್ನು ಗಳಿಸುತ್ತಿರುವುದು ಖಚಿತವಾಗಿದೆ. ಆದರೆ, ಅವರು ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗಲಾರರು ಎಂಬ ತೀರ್ಮಾನವೂ ಜನರದ್ದೇ.

ಸಮಸ್ಯೆಗಳಲ್ಲಿ ಕುಡಿಯುವ ನೀರಿಗೆ ಪ್ರಾಧಾನ್ಯತೆ
ಈ ಸಮೀಕ್ಷೆಯಲ್ಲಿ ಸರಕಾರದ ಸಾಧನೆ ಮತ್ತು ಜನರ ಒಲವು ಯಾವ ನಾಯಕರತ್ತ ಇದೆ ಎಂಬುದು ಮಾತ್ರವಲ್ಲ, ರಾಜ್ಯದಲ್ಲಿ ಏನೇನು ಸಮಸ್ಯೆಗಳಿವೆ, ಒದಗಿಸಲಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆಯೂ ಜನರು ತಮ್ಮ ವಸ್ತುನಿಷ್ಠ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ. ಇದರ ಪ್ರಕಾರ, ಕುಡಿಯುವ ನೀರು ಸಮಸ್ಯೆಗಳಲ್ಲಿ ಅಗ್ರ ಸ್ಥಾನ ಪಡೆದಿದ್ದರೆ, ನಂತರದ ಸ್ಥಾನ ಶೌಚ ಮತ್ತು ಕೃಷಿ ಕ್ಷೇತ್ರ ಪಡೆದುಕೊಂಡಿವೆ. ಅಲ್ಲದೆ, ಏರುತ್ತಿರುವ ಬೆಲೆ ಇಲ್ಲಿನ ಜನರನ್ನು ಕಂಗೆಡಿಸಿರುವುದು ದಿಟವಾಗಿದೆ. ರುಪಾಯಿ ಮೌಲ್ಯ ಕುಸಿಯುತ್ತಿದ್ದರೆ, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಮುಖಿಯಾಗಿವೆ. ಈ ಕಾರಣದಿಂದಾಗಿ ಉಳಿದೆಲ್ಲ ವಸ್ತುಗಳೂ ತುಟ್ಟಿಯಾಗುತ್ತಿವೆ.

ಕುಮಾರಸ್ವಾಮಿ ಕೈಗೆ ಸರಕಾರ ಕೊಟ್ಟ ಕಾಂಗ್ರೆಸ್
ಇದೇ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ 104 ಸ್ಥಾನ ಗಳಿಸಿ ಅತೀದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಭಾರತೀಯ ಜನತಾ ಪಕ್ಷ ಪಾತ್ರವಾದರೂ, ಯಡಿಯೂರಪ್ಪನವರ ವಿವೇಚನಾರಹಿತ ಮತ್ತು ದುಡುಕಿನ ನಡೆಯಿಂದಾಗಿ ಸರಕಾರ ರಚಿಸಿ ಮೂರೇ ದಿನಗಳಲ್ಲಿ ಬಿಜೆಪಿ ಸರಕಾರ ಪತನಗೊಂಡಿತು. ಇದರ ಲಾಭ ಪಡೆದ ವಿರೋಧ ಪಕ್ಷಗಳು, ಎರಡನೇ ದೊಡ್ಡ ಪಕ್ಷವಾದ ಕಾಂಗ್ರೆಸ್ (80) ಜೆಡಿಎಸ್ ಸಹಕಾರದಿಂದ ತಾನು ಸರಕಾರ ರಚಿಸಲು ಮುಂದಾಗದೆ, ಅತೀಕಡಿಮೆ ಸ್ಥಾನ ಗಳಿಸಿದ್ದ (37) ಜೆಡಿಎಸ್ ಗೆ ಸರಕಾರ ರಚಿಸಲು ಸಹಕಾರ ನೀಡಿತು. ಸರಕಾರ ರಚನೆಯಾದ ಕ್ಷಣದಿಂದಲೇ ಎರಡೂ ಪಕ್ಷಗಳಲ್ಲಿ ಅಂತಹ ಸಾಮರಸ್ಯ ಕಂಡುಬಂದಿಲ್ಲ. ಆದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹಾಗೂಹೀಗೂ ಬಂಡಿಯನ್ನು ಎಳೆದುಕೊಂಡು ಹೋಗುತ್ತಿದ್ದಾರೆ.

ಅಯ್ಯೋ ಸಿವನೆ ಅಂತಾರೆ ದೇವೇಗೌಡರು
ಎಚ್ ಡಿ ಕುಮಾರಸ್ವಾಮಿಯವರದ್ದು ಇನ್ನೂ ನಾಲ್ಕು ತಿಂಗಳ ಕೂಸು. ಇಷ್ಟು ಬೇಗ ಸರಕಾರದ ಸಾಧನೆಯ ಬಗ್ಗೆ, ಕಾರ್ಯವೈಖರಿಯ ಬಗ್ಗೆ ಇತ್ಯರ್ಥಕ್ಕೆ ಬರುವುದು ಎಷ್ಟು ಸರಿ? ಅದರಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇರುವಾಗ, ಒಬ್ಬೊಬ್ಬ ನಾಯಕ ಒಂದೊಂದು ದಿಕ್ಕಿಗೆ ಸರಕಾರವನ್ನು ಎಳೆದುಕೊಂಡು ಹೋಗುತ್ತಿರುವಾಗ, ಸಮಸ್ಯೆಗಳ ಬೆಟ್ಟವೇ ಮುಂದೆ ಇರುವಾಗ, ಮತ್ತು ಸರಕಾರವನ್ನೇ ಬೀಳಿಸಲು ಬಿಜೆಪಿ ಯತ್ನಿಸುತ್ತಿರುವಾಗ ಎಲ್ಲವನ್ನೂ ಸರಿದೂಗಿಸಿಕೊಂಡು ಸರಾಗವಾಗಿ ಸರಕಾರವನ್ನು ನಡೆಸಿಕೊಂಡು ಹೋಗುವುದು ಹೇಗೆ ಸಾಧ್ಯ? ಏನೇ ಆಗಲಿ, ಇಂಥ ಸಮೀಕ್ಷೆಯೂ ಆಗುತ್ತಿರಬೇಕು, ಜನರ ಅಭಿಪ್ರಾಯವನ್ನೂ ಸಂಗ್ರಹಿಸುತ್ತಿರಬೇಕು, ಇದರಿಂದ ಸರಕಾರವೂ ಕಲಿತು ಮುನ್ನುಗ್ಗುತ್ತಿರಬೇಕು. ಈ ಸಮೀಕ್ಷೆ ಬಗ್ಗೆ ಕೇಳಿದರೆ ಅಯ್ಯೋ ಸಿವನೆ ಅಂತಾರೆ ದೇವೇಗೌಡರು.












Click it and Unblock the Notifications