ಆಟೋ ಹಿಂದೆ ರಾಜಕೀಯ ನಾಯಕರ ಪೋಸ್ಟರ್, ಚಾಲಕರಿಗೆ ದಂಡ
ಬೆಂಗಳೂರು, ಏಪ್ರಿಲ್ 05; ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು 2023ರ ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡಿದೆ. ವೇಳಾಪಟ್ಟಿ ಪ್ರಕಟವಾದ ತಕ್ಷಣ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 10ರ ಬುಧವಾರ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದಲ್ಲಿ ಆಟೋಗಳ ಹಿಂದೆ ಇರುವ ರಾಜಕೀಯ ನಾಯಕರ ಫೋಟೋ, ಬ್ಯಾನರ್ ತೆರವುಗೊಳಿಸಲಾಗುತ್ತಿದೆ. ಬ್ಯಾನರ್ ಹಾಕಿಕೊಂಡು ಹೋಗುವ ಆಟೋಗಳನ್ನು ಹಿಡಿದು ಚಾಲಕರಿಗೆ ದಂಡ ಹಾಕಲಾಗುತ್ತಿದೆ.

ಬೆಂಗಳೂರು ನಗರದ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾಜಕಾರಣಿಗಳ ಹೆಸರು, ಭಾವಚಿತ್ರ ಮತ್ತು ಪಕ್ಷಗಳ ಗುರುತುಗಳನ್ನು ಜಾಹೀರಾತಿಗಾಗಿ ಆಟೋರಿಕ್ಷಾಗಳ ಹಿಂದೆ ಬ್ಯಾನರ್ಗಳನ್ನು ಹಾಕಿಸಿಕೊಂಡಿದ್ದ ಆಟೋರಿಕ್ಷಾಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಶಕ್ಕೆ ನೀಡಲಾಗಿರುತ್ತದೆ ಎಂದು ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಆದ್ದರಿಂದ ಆಟೋಗಳ ಮೇಲೆ ರಾಜಕೀಯ ಪ್ರಚಾರ ಮಾಡುವಂತಿಲ್ಲ. ಆದ್ದರಿಂದ ಆರ್ಟಿಒಗಳ ಸಹಾಯದಿಂದ ಸಂಚಾರಿ ಪೊಲೀಸರು ಪೋಸ್ಟರ್, ಬ್ಯಾನರ್ ತೆರವು ಮಾಡುವ, ಚಾಲಕರಿಗೆ ದಂಡ ವಿಧಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದುವರೆಗೂ 450ಕ್ಕೂ ಅಧಿಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

ರಾಜಕೀಯ ನಾಯಕರ ಪೋಸ್ಟರ್, ಸರ್ಕಾರದ ಯೋಜನೆಗಳ ವಿವರ ಹಾಕಿಕೊಂಡು ಓಡಾಡುವ ಆಟೋಗಳನ್ನು ಹಿಡಿದು 5 ಸಾವಿರ ರೂ. ದಂಡವನ್ನು ಹಾಕಲಾಗುತ್ತಿದೆ. ಎರಡು ದಿನದಿಂದ ಈ ಕಾರ್ಯಾಚರಣೆ ಕೈಗೊಂಡಿದ್ದು ಸುಮಾರು 200 ಆಟೋ ಚಾಲಕರಿಗೆ ದಂಡ ಹಾಕಲಾಗಿದೆ. ನೀತಿ ಸಂಹಿತೆ ಕುರಿತು ಮಾಹಿತಿ ಇರದ ಚಾಲಕರು ದಂಡ ಪಾವತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಆಟೋಗಳ ಮೇಲೆ ಪೋಸ್ಟರ್ ಅಂಟಿಸುವಾಗ ರಾಜಕೀಯ ನಾಯಕರು ನೀತಿ ಸಂಹಿತೆ ಜಾರಿಯಾದ ಬಳಿಕ ತೆಗೆಯಬೇಕು ಎಂದು ನಮಗೆ ಮಾಹಿತಿ ನೀಡಿಲ್ಲ. ಅವರು 500 ರೂ., 1000 ರೂ. ಆಸೆಗೆ ನಾವು 5 ಸಾವಿರ ರೂ. ದಂಡ ಪಾವತಿ ಮಾಡಬೇಕಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಬರೀ ಪೋಸ್ಟರ್ಗೆ ಮಾತ್ರ ದಂಡ ಹಾಕುತ್ತಿಲ್ಲ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣವಿದ್ದರೆ ಅದಕ್ಕೂ ದಂಡ ಹಾಕುತ್ತಿದ್ದಾರೆ. ಪೋಸ್ಟರ್ ನೆಪದಲ್ಲಿ ಪೊಲೀಸರು ವಸೂಲಿ ಮಾಡುತ್ತಿದ್ದಾರೆ ಎಂದು ಚಾಲಕರು ದೂರಿದರು.
ಅನುಮತಿ ಪಡೆಯುವುದು ಕಡ್ಡಾಯವಾಗಿದೆ; ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳು, ಅಭ್ಯರ್ಥಿಗಳು ಅಥವಾ ಸ್ವತಂತ್ರ ಸ್ಪರ್ಧಿಗಳು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯ ಆಧಾರಿತ ಜಾಹೀರಾತು ಪ್ರಕಟಿಸುವವರು ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ (ಎಂಸಿಎಂಸಿ)ಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್, ಟೆಲಿಗ್ರಾಂ, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಾಧಾರಿತ ಜಾಹೀರಾತು ಪ್ರಸಾರ ಮಾಡುವ ಮೊದಲು ಪೂರ್ವಾನುಮತಿ ಪಡೆಯಬೇಕು ಎಂದು ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಇದಕ್ಕಾಗಿ ವಿವಿಧ ತಂಡಗಳನ್ನು ನೇಮಕ ಮಾಡಲಾಗಿದೆ. ಈ ತಂಡದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗಳಿದ್ದು, ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಚುನಾವಣೆಯಲ್ಲಿ ನಡೆಯುವ ಅಕ್ರಮ, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಇತರೆ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು/ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ 1950 ಸಂಖ್ಯೆಯ ಉಚಿತ ಸಹಾಯವಾಣಿಯನ್ನು ಆರಂಭಿಸಲಾಗಿದೆ.











Click it and Unblock the Notifications