ಬಿಜೆಪಿಯ 'ಮಂಗಳೂರು ಚಲೋ' ರ್ಯಾಲಿಗೆ ಹೆಚ್ಚಿನ ಜಿಲ್ಲೆಗಳಲ್ಲಿ ನಿರ್ಬಂಧ
ಬೆಂಗಳೂರು, ಸೆಪ್ಟೆಂಬರ್ 4: ಬಿಜೆಪಿ ಯುವ ಮೋರ್ಚಾ ನಡೆಸಲುದ್ದೇಶಿಸಿದ್ದ 'ಮಂಗಳೂರು ಚಲೋ' ಬೈಕ್ ರ್ಯಾಲಿಗೆ ಇದೀಗ ಒಂದೊಂದಾಗಿ ಜಿಲ್ಲೆಗಳಲ್ಲಿ ಮತ್ತು ನಗರಗಳಲ್ಲಿ ನಿಷೇಧ ಹೇರಲಾಗಿದೆ. ಬೆಂಗಳೂರಿನಿಂದ ಆರಂಭಿಸಿ ಮಂಗಳೂರಿನವರೆಗೆ ರ್ಯಾಲಿ ಹಾದು ಹೋಗಲಿದ್ದ ಹೆಚ್ಚಿನ ಎಲ್ಲಾ ಜಿಲ್ಲೆಗಳ ಎಸ್ಪಿಗಳು ಮತ್ತು ನಗರಗಳ ಪೊಲೀಸ್ ಆಯುಕ್ತರು ರ್ಯಾಲಿಗೆ ನಿಷೇಧ ಹೇರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹಾಗೂ ಕೆಎಫ್'ಡಿ, ಎಸ್'ಡಿಪಿಐ, ಪಿಎಫ್ಐ ಸಂಘಟನೆಗಳ ನಿಷೇಧಕ್ಕೆ ಒತ್ತಾಯಿಸಿ ಇದೇ ಸೆಪ್ಟೆಂಬರ್ 5ರಿಂದ 7ರ ವರೆಗೆ ಬಿಜೆಪಿ ಯುವ ಮೋರ್ಚಾ 'ಮಂಗಳೂರು ಚಲೋ' ಬೈಕ್ ರ್ಯಾಲಿ ನಡೆಸಲು ಉದ್ದೇಶಿಸಿತ್ತು.

ಬೈಕ್ ರ್ಯಾಲಿಗೆ ನಿಷೇಧ ಹೇರಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶ ಹೊರಡಿಸಿದ್ದಾರೆ. ಸೋಮವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಭೆ ನಡೆಸುವುದಕ್ಕೂ ಅನುಮತಿ ಇಲ್ಲ ಎಂದು ತಿಳಿಸಿರುವ ಅವರು, "ಮಂಗಳೂರು ಚಲೋಗೆ ಅನುಮತಿ ನಿರಾಕರಿಸಿರುವ ಕುರಿತು ಬಿಜೆಪಿ ಯುವ ಮೋರ್ಚಾ ಮುಖಂಡರಿಗೆ ಅಧಿಕೃತವಾಗಿ ಮಾಹಿತಿ ರವಾನಿಸಲಾಗಿದೆ," ಎಂದು ಹೇಳಿದ್ದಾರೆ.
ಇದಾದ ಬೆನ್ನಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಜಿ ಸತ್ಯವತಿ ರ್ಯಾಲಿಗೆ ನಿಷೇಧ ಹೇರಿದ್ದಾರೆ. ಇದೇ ವೇಳೆ ಕೋಲಾರ ಎಸ್ಪಿ ರೋಹಿಣಿ ಕಟೋಚ್, ಚಾಮರಾಜನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಹಾಸನ ಎಸ್ಪಿ ರಾಹುಲ್ ಕುಮಾರ್ ಕೂಡಾ ರ್ಯಾಲಿಗೆ ಅನುಮತಿ ನಿರಾಕರಿಸಿದ್ದಾರೆ.
ಇನ್ನು ಕೊಡಗು ಎಸ್ಪಿ ಅನುಮತಿ ನಿರಾಕರಿಸಿಲ್ಲವಾದರೂ ರ್ಯಾಲಿಗೆ ಅನುಮತಿಯನ್ನಂತೂ ನೀಡಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲಿದ್ದ ಎಲ್ಲಾ ದಾರಿಗಳು ಮುಚ್ಚಿವೆ.
ಒಂದೆಡೆ ಮಂಗಳೂರಿನಲ್ಲಿ ರ್ಯಾಲಿಗೆ ಅನುಮತಿ ನಿರಾಕರಿಸಿದ್ದರೆ, ಇನ್ನೊಂದೆಡೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೂ 'ಮಂಗಳೂರು ಚಲೋ' ಬೈಕ್ ರ್ಯಾಲಿಗೆ ಅನುಮತಿ ನೀಡಿಲ್ಲ.
ಬೈಕ್ ರ್ಯಾಲಿ ವೇಳೆ ಕಿಡಿಗೇಡಿಗಳು ಕಾನೂನು ಸುವ್ಯವಸ್ಥೆಗೆ ದಕ್ಕೆ ಉಂಟುಮಾಡುವ ಸಾಧ್ಯತೆಗಳಿರುವುದರಿಂದ, ಜತೆಗೆ ಬೆಂಗಳೂರು ನಗರದಾದ್ಯಂತ ಸಂಚಾರ ದಟ್ಟನೆಯಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬೈಕ್ ರ್ಯಾಲಿ ನಡೆಸದಂತೆ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಮಂಗಳೂರು ಚಲೋ ಸಮಾವೇಶಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಸೆಪ್ಟೆಂಬರ್ 5 ಹಾಗೂ 6 ರಂದು ಹೊರಡಲಿದ್ದು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿತ್ತು.
ಮಂಗಳೂರು ಚಲೋ ಪ್ರತಿಭಟನಾ ಬೈಕ್ ರ್ಯಾಲಿಗೆ ಪೊಲೀಸರು ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ಹೇರಿರುವುದರಿಂದ ಬೈಕ್ ರ್ಯಾಲಿ ನಡೆಸಿರುವುದು ಅನುಮಾನವಾಗಿದೆ.












Click it and Unblock the Notifications