ಎಚ್ಡಿಕೆ ವಿರುದ್ಧ ಎಫ್ಐಆರ್: ಪೊಲೀಸ್ ಕಮೀಷನರ್ ಕೊಟ್ರು ಬಿಗ್ ಅಪ್ಡೇಟ್
ಚನ್ನಪಟ್ಟಣ ಚುನಾವಣೆಗೆ 50 ಕೋಟಿ ರೂಪಾಯಿಗಾಗಿ ತನಗೆ ಬೆದರಿಕೆ ಹಾಕಿರುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರ ವಿರುದ್ಧ ಉದ್ಯಮಿ ವಿಜಯ್ ತಾತಾ ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದ್ದು, ಇದರ ಬಗ್ಗೆ ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಮಹತ್ವದ ಮಾಹಿತಿ ನೀಡಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಮೀಷನರ್ ದಯಾನಂದ್, ಈ ಬಗ್ಗೆ ಎಫ್ಐಆರ್ ದಾಖಲಾಗಿರುವುದು ನಿಜ. ಈ ಪ್ರಕರಣವನ್ನು ನಿಸ್ಪಕ್ಷಪಾತವಾಗಿ, ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಉದ್ಯಮಿ ಕೊಟ್ಟಿರುವ ದೂರಿನ ಮೇರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕುಮಾರಸ್ವಾಮಿ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರಕರಣವು ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕಮೀಷನರ್ ಕೂಡ ಹೇಳಿರುವಂತೆ ಇದರ ತನಿಖೆ ಚುರುಕಾಗಲಿದ್ದು, ಕುಮಾರಸ್ವಾಮಿ ಅವರಿಗೂ ಆಪತ್ತು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಕೇಸ್ನಲ್ಲಿ ಕುಮಾರಸ್ವಾಮಿ ಅವರು ಎ2 ಆರೋಪಿ ಎಂದು ಉಲ್ಲೇಖಿಸಲಾಗಿದೆ. A1 ಆರೋಪಿಯಾಗಿ ಜೆಡಿಎಸ್ನ ರಮೇಶ್ ಗೌಡ ಅವರನ್ನು ಹೆಸರನ್ನು ನೀಡಲಾಗಿದೆ. ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಹಲವು ಸೆಕ್ಷನ್ ಅಡಿ ಈ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲೇನಿದೆ?: 'ನಾನು 2018ರಿಂದ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದೆ. ಇದಕ್ಕಾಗಿ ನನ್ನನ್ನು ಪಕ್ಷದ ಸೋಷಿಯಲ್ ಮೀಡಿಯಾ ವಿಂಗ್ಗೆ ಉಪಾಧ್ಯಕ್ಷನಾಗಿ ಮಾಡಿದ್ದರು. 2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆ ವೇಳೆ ನಿಖಿಲ್ ಪರವಾಗಿ ಸಾಕಷ್ಟು ಅಭಿಯಾನ ಮಾಡಿದ್ದೇವೆ. ಇದಕ್ಕಾಗಿ ನಾನೇ ವೈಯಕ್ತಿಕವಾಗಿ ಕೋಟಿಗಟ್ಟಲೆ ಹಣ ಸುರಿದಿದ್ದೆ. ಇದಾದ ಬಳಿಕ ನಾನು ನನ್ನ ರಿಯಲ್ ಎಸ್ಟೇಟ್ ಉದ್ಯಮದ ಕಡೆಗೆ ಆಸಕ್ತಿ ತೋರಿದ್ದೆ. ಇದರಿಂದ ಪಕ್ಷದ ಕೆಲಸಗಳಲ್ಲಿ ನಾನು ಹೆಚ್ಚಾಗಿ ಭಾಗಿಯಾಗಲು ಆಗಲಿಲ್ಲ'.

'ಕಳೆದ ತಿಂಗಳು ಜೆಡಿಎಸ್ನ ಮಾಜಿ ಎಂಎಲ್ಸಿ ರಮೇಶ್ ಗೌಡ ಅವರು ನನ್ನನ್ನು ಪಕ್ಷದ ಕಾರ್ಯಗಳಲ್ಲಿ ಮತ್ತೆ ಸಕ್ರಿಯರಾಗುವಂತೆ ಮನವಿ ಮಾಡಿಕೊಂಡರು. ಎಚ್.ಡಿ.ಕುಮಾರಸ್ವಾಮಿ ಅವರೂ ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಹೇಳಿದರು. ಬಳಿಕ ರಮೇಶ್ ಗೌಡ ಆಗಸ್ಟ್ 24ರಂದು ರಾತ್ರಿ ಮನೆಗೆ ಬಂದು ನಮ್ಮೊಂದಿಗೆ ಊಟ ಸವಿಯುತ್ತಾ ಈಗಿನ ಚನ್ನಪಟ್ಟಣ ಬೈಎಲೆಕ್ಷನ್ ಬಗ್ಗೆ ಚರ್ಚೆ ನಡೆಸುತ್ತಿದ್ದರು'.
'ನಿಖಿಲ್ಗೆ ಚನ್ನಪಟ್ಟಣ ಟಿಕೆಟ್ ಕೊಡೋದು ಫಿಕ್ಸ್ ಆಗಿದೆ ಎಂದು ವಿವರಿಸುತ್ತಾ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಕೊಟ್ಟರು. ಅವರು ಮೊದಲಿಗೆ ಚೆನ್ನಾಗಿಯೇ ಮಾತನಾಡಿ, ನನ್ನ ಯೋಗಕ್ಷೇಮ ವಿಚಾರಿಸಿದರು. ಚನ್ನಪಟ್ಟಣ ಚುನಾವಣೆಗೆ 50 ಕೋಟಿ ರೂಪಾಯಿ ಬೇಕೆಂದು ಡಿಮ್ಯಾಂಡ್ ಮಾಡಿದರು. ನಾನು ಆಗ ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಹೇಳಿದೆ. ಇದಕ್ಕೆ ಕೋಪಗೊಂಡ ಕುಮಾರಸ್ವಾಮಿ ಅವರು, 50 ಕೋಟಿ ಕೊಡಲೇಬೇಕು, ಮೊದಲು ರೆಡಿ ಮಾಡಿದ್ರೆ ಸರಿ, ಇಲ್ಲಾಂದ್ರೆ ನಾನು ಏನು ಮಾಡ್ತೀನೋ ನನಗೇ ಗೊತ್ತಿಲ್ಲ ಎಂದು ಧಮ್ಕಿ ಹಾಕಿದರು' ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.
'ಅಲ್ಲದೇ ಬೆಂಗಳೂರಲ್ಲಿ ನೀನು ರಿಯಲ್ ಎಸ್ಟೇಟ್ ಉದ್ಯಮ ನಡೆಸೋದಿರಲಿ, ಬದುಕೋದು ಕೂಡ ಕಷ್ಟ ಎಂದು ಬೆದರಿಕೆ ಹಾಕಿದರು. ಬಳಿಕ ರಮೇಶ್ ಗೌಡ ಕೂಡ 50 ಕೋಟಿ ಸಿದ್ಧಮಾಡಿ, ದೇವಸ್ಥಾನ, ಶಾಲೆಗೂ ಒಂದೈದು ಕೋಟಿ ನೀಡಬೇಕು ಎಂದು ಜೋರು ಮಾಡಿದರು. ನೀವು ಹಣ ನೀಡದಿದ್ರೆ ನಿಮಗೆ ತೊಂದರೆ ತಪ್ಪಿದ್ದಲ್ಲ ಎಂದೂ ಧಮ್ಕಿ ಹಾಕಿದರು. ಈ ಬಗ್ಗೆ ರಮೇಶ್ಗೌಡ ವಾಟ್ಸಾಪ್ನಲ್ಲೂ ಮೆಸೇಜ್ ಕಳಿಸಿದರು. ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ನನ್ನ ಬಳಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆ' ಎಂದು ಉದ್ಯಮಿ ವಿಜಯ್ ತಾತಾ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications