ಕಾವೇರಿ ನದಿ ತೀರ ಬರಿದು ಮಾಡುತ್ತಿದ್ದ ಇಬ್ಬರ ಬಂಧನ
ಚಾಮರಾಜನಗರ, ಜನವರಿ,13: ಕೊಳ್ಳೇಗಾಲ ಕಾವೇರಿ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ಅಮರ ನಾರಾಯಣ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಮರಳು ಸಾಗಾಣಿಕೆಗೆ ತೊಡಗಿದ್ದವರೇ ಕುಣಗಳ್ಳಿ ಗ್ರಾಮದ ಪ್ರವಿಣ್ ಕುಮಾರ್ ಹಾಗೂ ರಾಜು. ತಾಲೂಕಿನ ಸತ್ತೇಗಾಲ ಹಾಗೂ ಕಾವೇರಿ ನದಿ ತೀರದ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರು ವಾಹನ ಸಹಿತ ಸಿಕ್ಕಿಬಿದ್ದಿದ್ದಾರೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಒಂದು ಟ್ರ್ಯಾಕ್ಟರ್ ಮರಳನ್ನು ಅಕ್ರಮವಾಗಿ ಮಾರಿದರೆ ಸಾವಿರಾರು ರೂಪಾಯಿ ಲಾಭ ಸಿಗುತ್ತದೆ ಎಂಬ ಆಶೆಯಲ್ಲಿ ಯುವಕರು ಅಕ್ರಮವಾಗಿ ಕಾವೇರಿ ನದಿ ತೀರವನ್ನೇ ಬಗೆಯಲು ಆರಂಭಿಸಿದ್ದಾರೆ. ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಮರಳು ದಂಧೆಕೋರರು ಚಳ್ಳೆಹಣ್ಣು ತಿನ್ನಿಸುವುದರಲ್ಲಿ ನಿಸ್ಸೀಮರಾಗಿದ್ದರು. ಇದೀಗ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.[ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು!]
ಬೇಸಿಗೆಯ ದಿನವಾದ್ದರಿಂದ ಮನೆಕಟ್ಟುವವರ ಸಂಖ್ಯೆ ಹೆಚ್ಚುತ್ತಲಿದ್ದು, ಅದಕ್ಕೆ ಅನುಗುಣವಾಗಿ ಮರಳಿನ ಬೇಡಿಕೆ ಹೆಚ್ಚುತ್ತಲೇ ಇದೆ. ಹೆಚ್ಚು ಹಣ ಮಾಡುವ ದುರುದ್ದೇಶದಿಂದ ಮರಳು ದಂಧೆಕೋರರು ಕಾವೇರಿ ನದಿ ತೀರಕ್ಕೆ ಲಗ್ಗೆ ಇಟ್ಟಿದ್ದಾರೆ.