ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಸೆರೆ
ಚಿಕ್ಕಮಗಳೂರು, ಜನವರಿ 11: ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಪೊಲೀಸರು ಗುರುವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸಂತೋಷ್ (20) ಎಂಬಾತನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದು, ಸಂತೋಶ್, ಧನುಶ್ರೀ ಆತ್ಮಹತ್ಯೆ ಮಾಡಿಕೊಂಡ ದಿನವೇ ಪರಾರಿಯಾಗಿದ್ದ. ಸಂತೋಷ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಡಗಜೇಕಾರ್ ನಿವಾಸಿಯಾಗಿದ್ದಾನೆ.
ಧನುಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಚಿಕ್ಕಮಗಳೂರು ಪೊಲೀಸರು ಒಟ್ಟು 5 ಜನರ ಮೇಲೆ ಕೇಸು ದಾಖಲಿಸಿದ್ದರು, ಮೊದಲನೇ ಆರೋಪಿಯಾಗಿ ಬಿಜೆಪಿ ಯುವಮೋರ್ಚಾದ ಮುಖಂಡ ಅನಿಲ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಈಗ ಬಂಧನಕ್ಕೊಳಗಾಗಿರುವ ಸಂತೋಶ್, ಧನ್ಯಶ್ರೀ ಅನ್ಯಕೋಮಿನ ಹುಡುಗನೊಂದಿಗೆ ಸಲುಗೆಯಿಂದಿರುವ ಬಗ್ಗೆ ಪ್ರಶ್ನೆ ಮಾಡಿದ್ದ, ಆತನ ಬಳಿ ವಾಟ್ಸ್ಆಪ್ನಲ್ಲಿ ಸಂಭಾಷಣೆ ನಡೆಸಿದ್ದ ಧನ್ಯಶ್ರೀ 'ನನಗೆ ಮುಸ್ಲಿಂ ರು ಇಷ್ಟವಾಗುತ್ತಾರೆ' ಎಂದು ಹೇಳಿದ್ದಳು. ಆಗ ಸಂತೋಶ್ ಈ ವಿಷಯವನ್ನು ಹಿಂದೂ ಸಂಘಟನೆಗಳಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದ. ಇವರಿಬ್ಬರ ನಡುವಿನ ವಾಟ್ಸ್ಆಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಆ ನಂತರ ಬಿಜೆಪಿ ಯುವಮೋರ್ಚಾ ಮುಖಂಡ ಅನಿಲ್ ರಾಜ್ ನೊಂದಿಗೆ, ಸಂತೋಶ್ ಹಾಗೂ ಇನ್ನಿತರೆ ಆರೋಪಿಗಳು ಧನ್ಯಶ್ರೀ ಮನೆಗೆ ಹೋಗಿ ಆಕೆಗೆ ಬೈದು, ಆಕೆಯ ತಾಯಿಗೂ ಬೈದಿದ್ದರು ಇದರಿಂದ ಮನನೊಂದು ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಳು.
5 ಜನ ಆರೋಪಿಗಳ ಪೈಕಿ ಈಗ 2 ಸೆರೆಯಾಗಿದ್ದು ಉಳಿದ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications