ಕುಶಾಲನಗರ: ತಾತ ಮೊಮ್ಮಗನ ಕೊಲೆಗೈದವರ ಬಂಧನ
ಕೊಡಗು, ಫೆಬ್ರವರಿ,18: ತಾತ, ಮೊಮ್ಮಗನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳ ಕಾರ್ಯಾಚರಣೆ ಬಳಿಕ ಮೂವರು ಹಂತಕರನ್ನು ಕುಶಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಲೇನಹಳ್ಳಿ ಗ್ರಾಮದ ನಿವಾಸಿಗಳಾದ ಮೆಕ್ಯಾನಿಕ್ ಕೆಲಸ ಮಾಡುವ ಹೆಚ್.ಎಸ್.ಶಿವಕುಮಾರ (22), ಟಿ.ಇ. ಶಿವಕುಮಾರ(20) ಮತ್ತು ಕುಮಾರ(20) ಬಂಧಿತ ಹಂತಕರು. ಇವರು ತಾತ ಮತ್ತು ಮೊಮ್ಮಗನನ್ನು ಫೆಬ್ರವರಿ 11ರ ಗುರುವಾರದಂದು ಕುಶಾಲನಗರ ಸಮೀಪದ ಮೊದಲಾಪುರ ಬಳಿ ಕೊಲೆ ಮಾಡಿದ್ದರು.[ಕುಶಾಲನಗರದಲ್ಲಿ ಗಾಂಜಾಕ್ಕಾಗಿ ತಾತ ಮೊಮ್ಮಗನ ಕಗ್ಗೊಲೆ]

ಮಡಿಕೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ವರ್ತಿಕಾ ಕಟಿಯಾರ್, ಹಣದ ವಿಚಾರವಾಗಿ ಕೊಚುಣ್ಣಿ ಅಲಿಯಾಸ್ ಕುಜಿಲಿ (75) ಮತ್ತು ಮೊಮ್ಮಗ ಕುಶಾಲನಗರದ ಜ್ಞಾನೋದಯ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಮೃತ್ (16)ನನ್ನು ಈ ಮೂವರು ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.[ಕನಕಪುರ ತೋಟದಲ್ಲಿ 3 ಬರ್ಬರ ಹತ್ಯೆ]
ಮೃತ ಕುಜಿಲಿ ಅವರ ಬಳಿ ಇದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಲು ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕುಜಿಲಿ ಅವರು ತಮ್ಮಲ್ಲಿರುವುದೆಲ್ಲವನ್ನು ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದರಿಂದ ಆರೋಪಿಗಳಿಗೆ ಯಾವುದೇ ವಸ್ತುಗಳು ದೊರಕಿಲ್ಲ.
ಈ ಕೊಲೆಯ ಜಾಡನ್ನು ಹಿಡಿದ ಕುಶಾಲನಗರ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್, ಕತ್ತಿ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಮಾಹಿತಿ ನೀಡಿದ್ದಾರೆ.['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ]
ಎಸ್ಪಿ ವರ್ತಿಕಾ ಕಟಿಯಾರ್ ಅವರ ಮಾರ್ಗದರ್ಶನಲ್ಲಿ ಸೋಮವಾರಪೇಟೆ ತಾಲೂಕು ಡಿವೈಎಸ್ಪಿ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸಂದೇಶ್ ಕುಮಾರ್, ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ಪೂಣಚ್ಚ ಮತ್ತು ಠಾಣಾಧಿಕಾರಿ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿಗಳಾದ ಎಎಸೈ ಪಾರ್ಥ, ಸಂಪತ್, ಗೋಪಾಲ, ಲೋಕೇಶ್ ಹರೀಶ್, ಸಜಿ, ಅಜಿದ್ ಪಾಲ್ಗೊಂಡಿದ್ದರು.












Click it and Unblock the Notifications