ಹರೀಶ್ ಪೂಜಾರಿ ಕೊಲೆ: ಬಲಪಂಥೀಯ ಸಂಘಟನೆಯ ಇಬ್ಬರ ಬಂಧನ
ಮಂಗಳೂರು, ನ 19 : ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ನಡೆದ ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಭುವಿತ್ ಶೆಟ್ಟಿ (25) ಹಾಗೂ ಅಚ್ಯುತ್ ( 28) ಎಂದು ಹೆಸರಿಸಲಾಗಿದೆ. ಇಬ್ಬರೂ ಬಲಪಂಥೀಯ ಸಂಘಟನೆಯ ಸದಸ್ಯರು ಎನ್ನಲಾಗುತ್ತಿದೆ.
ಗುರುವಾರ (ನ 19) ಎಸ್ಪಿ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಶ್ಚಿಮ ವಲಯದ ಐಜಿಪಿ ಅಮೃತ್ ಪಾಲ್ , ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಐವರು ಪಾಲ್ಗೊಂಡಿರುವ ಬಗ್ಗೆ ಅನುಮಾನಗಳಿದ್ದು, ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದಿದ್ದಾರೆ. (ಟಿಪ್ಪು ಗಲಭೆಗೆ ಸಾಮಾಜಿಕ ಜಾಲ ಕಾರಣ)
ಬಂಧಿತ ಆರೋಪಿಗಳಲ್ಲಿ ಭುವಿತ್ ಶೆಟ್ಟಿ ಮೇಲೆ ಈಗಾಗಲೇ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿದೆ. ಮಾತ್ರವಲ್ಲದೇ ಈ ಹಿಂದೆ ಟ್ವಿಟ್ಟರ್ ನಲ್ಲಿ ಕಲಬುರ್ಗಿ ಹತ್ಯೆಯನ್ನು ಸಮರ್ಥಿಸಿದ ಪ್ರಕರಣದಲ್ಲಿ ಕೂಡ ಈತನನ್ನು ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿ ಅಚ್ಯುತ್ ವಿರುದ್ಧ ಈಗಾಗಲೇ ಒಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ಐಜಿಪಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ಟಿಪ್ಪು ಜಯಂತಿಯ ದಿನ ನಡೆದ ಗಲಭೆಯನ್ನು ವಿರೋಧಿಸಿ ಬಂಟ್ವಾಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಘರ್ಷಣೆಯುಂಟಾದ ಸಂದರ್ಭ ದುಷ್ಕರ್ಮಿಗಳು ಹರೀಶ್ ಪೂಜಾರಿ ಮತ್ತು ಸಮಿವುಲ್ಲ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು.
ಇಬ್ಬರು ಸ್ನೇಹಿತರಾದ ಹರೀಶ್ ಮತ್ತು ಸಮಿವುಲ್ಲ ಎಂಬವರು ವಗ್ಗದಿಂದ ಬಂಟ್ವಾಳಕ್ಕೆ ಬರುತ್ತಿದ್ದರು. ದಾರಿ ಮಧ್ಯೆ ಬೈಕ್ ನಿಲ್ಲಿಸಿ ಅಂಗಡಿಯೊಂದರ ಮುಂದೆ ಕೋಲ್ಡ್ ಡ್ರಿಂಕ್ಸ್ ಕುಡಿಯುತ್ತಿದ್ದರು. (ಟಿಪ್ಪು ವಿರುದ್ಧ ಕ್ರೈಸ್ತರ ವಿರೋಧವೇಕೆ)
ಈ ಸಂದರ್ಭ ಓಮ್ನಿ ಕಾರೊಂದರಲ್ಲಿ ಮಾರಕಾಯುಧಗಳೊಂದಿಗೆ ಬಂದ ದುಷ್ಕರ್ಮಿಗಳು ಇಬ್ಬರ ಮೇಲೂ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಹರೀಶ್ ಪೂಜಾರಿ ಮೃತಪಟ್ಟು, ಸಮೀವುಲ್ಲ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಎಎಸ್ಪಿ, ಪಿಎಸ್ಸೈ ಬಂಟ್ವಾಳ ಗ್ರಾಮಾಂತರ ಸಿಬ್ಬಂದಿ ಹಾಗೂ ಡಿಸಿಐಬಿಗಳ ವಿಶೇಷ ತಂಡಗಳ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.
ಈ ಕೊಲೆ ಪ್ರಕರಣ ಭೇದಿಸುವ ಹಿನ್ನೆಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಂಜೀವ ಶೆಟ್ಟಿ ಎಂಬವರ ಪುತ್ರ ಭುವಿತ್ ಶೆಟ್ಟಿ ಹಾಗೂ ಶೇಷಪ್ಪ ಪೂಜಾರಿ ಪುತ್ರ ಅಚ್ಯುತ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಐಜಿಪಿ ತಿಳಿಸಿದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಮುದಾಯಗಳ ಸಹಕಾರ ಅಗತ್ಯವಿದೆ. ಇಂದಿನ ಯುವ ಸಮುದಾಯ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ.
ಸಿಗರೇಟ್, ಮದ್ಯ , ಗಾಂಜಾ ಸೇವನೆಗಳಿಗೆ ದಾಸರಾಗುವುದರಿಂದ ತಮ್ಮ ಅಮೂಲ್ಯ ಸಮಯ ಹಾಗೂ ಜೀವನವನ್ನು ನಾಶ ಮಾಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗಾಳಿ ಸುದ್ಧಿ ಹರಡಿಸುವುದರಿಂದ ಜಿಲ್ಲೆಯ ಶಾಂತಿ ಕೆಡುತ್ತದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಪೊಲೀಸರಿಗೆ ಸೂಕ್ತ ರೀತಿಯಲ್ಲಿ ತಮ್ಮ ಕರ್ತವ್ಯ ನಿಭಾಯಿಸಲು ಸಹಕಾರ ನೀಡಬೇಕು ಎಂದು ಐಜಿಪಿ ಕರೆ ನೀಡಿದರು.