ಗೋವಾ : ಬೈನಾ ನಿರಾಶ್ರಿತರಿಗೆ ಶಾಶ್ವತ ಪರಿಹಾರ
ಬೆಂಗಳೂರು, ಜು. 24 : ಗೋವಾದ ಬೈನಾ ನಿರಾಶ್ರಿತರಿಗೆ ಎರಡು ತಿಂಗಳ ಬಳಿಕ ಶಾಶ್ವತ ಪುರ್ನಸತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಕರ್ನಾಟಕ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ಕರ್ನಾಟಕದ ಪ್ರತಿನಿಧಿಗಳಾದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಬುಧವಾರ ಗೋವಾ ಸಿಎಂ ಭೇಟಿ ಮಾಡಿ ನಿರಾಶ್ರಿತರ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಬುಧವಾರ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಗೋವಾದ ಬೈನಾ ನಿರಾಶ್ರಿತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ನಂತರ ಆರ್.ವಿ.ದೇಶಪಾಂಡೆ ನೇತೃತ್ವದ ನಿಯೋಗ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. [ಕನ್ನಡಿಗರ ರಕ್ಷಣೆಗೆ ಸಚಿವರ ನಿಯೋಗ]

ಕರ್ನಾಟಕದ ನಿಯೋಗದೊಂದಿಗೆ ಮಾತನಾಡಿದ ಮನೋಹರ ಪರಿಕ್ಕರ್, ಸದ್ಯ ಮಳೆಗಾಲವಾಗಿದ್ದು ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಕಷ್ಟ. ಇನ್ನೆರಡು ತಿಂಗಳ ಬಳಿಕ ಎಲ್ಲರಿಗೂ ಶಾಶ್ವತ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಬೈನಾದಲ್ಲಿ ಮನೆಗಳನ್ನು ನೆಲಸಮಗೊಳಿಸಿದ ಮೇಲೆ ನಿರಾಶ್ರಿತರಾದ ಕನ್ನಡಿಗರಿಗಾಗಿ ಸದ್ಯ ನಾಲ್ಕು ಕಡೆಗಳಲ್ಲಿ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಕರ್ನಾಟಕದ ನಿಯೋಗಕ್ಕೆ ಮಾಹಿತಿ ನೀಡಿದ್ದಾರೆ.
ಸುಮಾರು ಒಂದೂವರೆ ತಾಸು ಆರ್.ವಿ.ದೇಶಪಾಂಡೆ ನೇತೃತ್ವದ ನಿಯೋಗ ಗೋವಾ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದು, ಐದು ವರ್ಷಗಳಿಂದ ವಾಸ್ತವ್ಯ ಇರುವುದಕ್ಕೆ ದಾಖಲೆ ಒದಗಿಸಿದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಶಾಶ್ವತ ಪುನರ್ವಸತಿ ಆಗುವ ತನಕ ಸಂತ್ರಸ್ತರು ಬಾಡಿಗೆ ಮನೆಗಳಲ್ಲಿದ್ದರೆ ಅದರ ವೆಚ್ಚವನ್ನು ಗೋವಾ ಸರ್ಕಾರದಿಂದ ಭರಿಸಲು ಪರಿಶೀಲನೆ ನಡೆಸಲಾಗುವುದು ಎಂದು ಮಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. [ಕನ್ನಡಿಗರ ನೆರವಿಗೆ ಧಾವಿಸಿದ ಪೊಲೀಸರು]
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು, ಗೋವಾದ ಕನ್ನಡಿಗರು ರಾಜ್ಯಕ್ಕೆ ಮರಳಲು ನಿರ್ಧರಿಸಿದರೆ, ಅವರಿಗೆ ಸೂಕ್ತ ಪುನರ್ವಸತಿ ಹಾಗೂ ಇತರ ಸೌಲಭ್ಯ ನೀಡುವ ಕುರಿತಂತೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ತಿಳಿಸಿದರು.












Click it and Unblock the Notifications