'ರಾಯಣ್ಣ ಬ್ರಿಗೇಡ್' ಸಮಾವೇಶದಲ್ಲಿ ಜನರೇ ನಾಪತ್ತೆ
ಕೆ.ಎಸ್ ಈಶ್ವರಪ್ಪನವರ ಕನಸಿನ ಕೂಡಲ ಸಂಗಮ ಸಂಗೊಳ್ಳಿ 'ರಾಯಣ್ಣ ಬ್ರಿಗೇಡ್' ಸಮಾವೇಶದಿಂದ ಜನ ದೂರ ಉಳಿದಿದ್ದು, ವೇದಿಕೆ ಮುಂಭಾಗದಲ್ಲೇ ಖಾಲಿ ಕುರ್ಚಿಗಳು ಕಾಣಿಸುತ್ತಿವೆ.
ಬಾಗಲಕೋಟೆ, ಜನವರಿ 26: ಕೆ.ಎಸ್ ಈಶ್ವರಪ್ಪ ಕನಸಿನ ರಾಯಣ್ಣ ಬ್ರಿಗೇಡ್ ಸಮಾವೇಶ ಜನರಿಲ್ಲದೆ ಭಣಗುಡುತ್ತಿದೆ. ವೇದಿಕೆಯ ಮುಂಭಾಗ ಕುರ್ಚಿಗಳು ಖಾಲಿ ಬಿದ್ದಿದ್ದರೆ, ಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶದಿಂದ ದೂರ ಉಳಿದಿದ್ದಾರೆ.
ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಬಲಿದಾನದ ದಿನ ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಕೆ.ಎಸ್. ಈಶ್ವರಪ್ಪ ಹಮ್ಮಿಕೊಂಡಿದ್ದ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ನಿರೀಕ್ಷೆಯಷ್ಟು ಜನ ಬಂದಿಲ್ಲ. ಒಟ್ಟು 50 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ ವೇದಿಕೆಯ ಮುಂಭಾಗದಲ್ಲಿಯೇ ಕುರ್ಚಿಗಳು ಖಾಲಿ ಬಿದ್ದಿವೆ.[ಬಿಜೆಪಿ ಕಾರ್ಯಕಾರಿಣಿ, ಬಿಎಸ್ ವೈ ವಿರುದ್ಧ ಭುಗಿಲೆದ್ದ ಆಕ್ರೋಶ]
ಸಮಾವೇಶದಲ್ಲಿ ಮಾಜಿ ಸಂಸದ ವಿರೂಪಾಕ್ಷಪ್ಪ ಸೇರಿ ಹಲವು ಮುಖಂಡರು ಭಾಗಿಯಾಗಿದ್ದಾರೆ. ಇನ್ನು ಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶದಿಂದ ದೂರ ಉಳಿದಿದ್ದಾರೆ. ಕಾಗಿನೆಲೆಯ ನಿರಂಜನಾಪುರಿ ಸ್ವಾಮಿ ಮತ್ತು ಸಿದ್ದರಾಮನಂದಪುರಿ ಸ್ವಾಮಿಗಳು ಸಮಾವೇಶದಲ್ಲಿ ಭಾಗಿಯಾದ ಇತರ ಧಾರ್ಮಿಕ ಮುಂದಾಳುಗಳಾಗಿದ್ದಾರೆ.[ರೆಬೆಲ್ ಸ್ಟಾರ್ ಈಶ್ವರಪ್ಪ ಬಿಜೆಪಿಯಿಂದ ಕಿಕ್ ಔಟ್?]
ಕೂಡಲ ಸಂಗಮ ಸಮಾವೇಶದ ಮೂಲಕ ಈಶ್ವರಪ್ಪ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯಲು ಹೊರಟಿದ್ದರು. ಹಲವು ಸುತ್ತಿನ ತಿಕ್ಕಾಟಗಳ ಬಳಿಕವೂ 'ಹಿಂದ' ಸಮಾವೇಶ ಮಾಡಿಯೇ ತೀರುತ್ತೇನೆ ಎಂದಿದ್ದರು. ಈಗ ಜನರಿಲ್ಲದೆ ಸಮಾವೇಶ ಭಣಗುಡುತ್ತಿದೆ. ಬಹುಶಃ ಯಡಿಯೂರಪ್ಪ ಈಗ ಮುಸಿ ಮುಸಿ ನಗುತ್ತಿರಬಹುದೋ ಏನೋ.