ವರುಣನ ಕೃಪೆಗಾಗಿ ಸರ್ಕಾರದಿಂದ ಹಲವು ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ
ಬೆಂಗಳೂರು, ಜೂನ್ 6: ಬರದಿಂದ ತತ್ತರಿಸಿರುವ ನಾಡಲ್ಲಿ ವರುಣ ದೇವ ಕೃಪೆ ತೋರಿ ಉತ್ತಮ ಮಳೆಯಾಗುವಂತೆ ಕೋರಿ ವಿವಿಧ ದೇವಾಲಯಗಳಲ್ಲಿ ಸರ್ಕಾರ ಇಂದು ಪರ್ಜನ್ಯ ಹೋಮ, ವಿಶೇಷ ಪೂಜೆಗಳನ್ನು ನಡೆಸಿದೆ.
ಮಳೆಗಾಗಿ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ನೆರವೇರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷ ಪೂಜೆ ಹಾಗೂ ಪರ್ಜನ್ಯ ಜಪ ನಡೆಸಲಾಯಿತು.
ಎಲ್ಲಾ ದೇವಸ್ಥಾನಗಳಲ್ಲಿಯೂ 10 ಸಾವಿರ ರೂ ಮೀರದಂತೆ ಪರ್ಜನ್ಯ ಹೋಮಕ್ಕೆ ವೆಚ್ಚ ಮಾಡಲಾಗಿತ್ತು.ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ, ಮೈಸೂರು ಅರಮನೆ ಆವರಣದಲ್ಲಿರುವ ಗಣಪತಿ, ವರಾಹ, ಗಾಯತ್ರಿ, ತ್ರಿನೇಶ್ವರ ಕೃಷ್ಣ ಮತ್ತಿತರ ದೇವಾಲಯಗಳು, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಪರ್ಜನ್ಯ ಜಪ ನೆರವೇರಿಸಲಾಯಿತು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ದೇವಾಲಯದಲ್ಲಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಪರ್ಜನ್ಯ ಪಾರಾಯಣ ಹಾಗೂ ಹೋಮ-ಹವನ ನೆರವೇರಿತು.
ಋಷ್ಯಶೃಂಗೇಶ್ವರ ಸ್ವಾಮಿ, ಶಾರದಾಂಬೆ, ಶಾಂತಾದೇವಿ ಬಳಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದೇವೆ ಎಂದರು. ಕಿಗ್ಗಾ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 5.30 ರಿಂದ 8 ಗಂಟೆವರೆಗೆ ಪೂಜಾ ಕಾರ್ಯಕ್ರಮ ನೆರವೇರಿತು. ನಂತರ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ನಮ್ಮದು.
ಇನ್ನು ಬೆಳಗಾವಿಯ ಸವದತ್ತಿ ಯೆಲ್ಲಮ್ಮ ದೇವಾಲಯದಲ್ಲೂ ಕೂಡ ವಿಶೇಷ ಪೂಜೆ ನೆರವೇರಿತು.












Click it and Unblock the Notifications