ಸಿದ್ದು, ರಾಹುಲ್ ನಿದ್ದೆ ಮಾಡೋ 'ಜೋಡಿ ಎತ್ತುಗಳು' : ಆರ್ ಅಶೋಕ್ ಲೇವಡಿ
Recommended Video
ಬೆಂಗಳೂರು, ಡಿ 11: ನಮ್ಮ ಹತ್ತಿರ ಎರಡು ಜೋಡಿ ಎತ್ತುಗಳಿವೆ, ಒಂದು ನರೇಂದ್ರ ಮೋದಿ ಮತ್ತು ಯಡಿಯೂರಪ್ಪ. ಕಾಂಗ್ರೆಸ್ ಪಕ್ಷದಲ್ಲೂ ಜೋಡಿ ಎತ್ತುಗಳಿವೆ, ಆದರೆ ಅವು ನಿದ್ದೆ ಮಾಡುವ ಜೋಡಿ ಎತ್ತುಗಳು ಎಂದು ಮಾಜಿ ಡಿಸಿಎಂ ಮತ್ತು ಬಿಜೆಪಿ ಮುಖಂಡ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಪರಿವರ್ತನಾಯಾತ್ರೆಯ 39ನೆಯ ದಿನವಾದ ಭಾನುವಾರ (ಡಿ 10) ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅಶೋಕ್, ನಮ್ಮ ಎತ್ತುಗಳಿಗೂ ಕಾಂಗ್ರೆಸ್ ಎತ್ತುಗಳಿಗೂ ಇರುವ ವ್ಯತ್ಯಾಸ ಏನಂದರೆ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಿದ್ದೆ ಮಾಡುವ ಜೋಡಿ ಎತ್ತುಗಳು ಎಂದು ವ್ಯಂಗ್ಯವಾಡಿದ್ದಾರೆ.
ಒಬ್ಬರು ಪಾಪು ರಾಹುಲ್,ಇನ್ನೊಬ್ಬರು ನಿದ್ದೆ ಸಿದ್ದರಾಮಯ್ಯ ಎಂದು ಹೇಳಿರುವ ಅಶೋಕ್, ಗುಜರಾತ್ ಚುನಾವಣೆಯ ನಂತರ ರಾಹುಲ್ ಗಾಂಧಿ ಮತ್ತು ಸಿದ್ದಣ್ಣ ಗಂಟುಮೂಟೆ ಕಟ್ಟೋದು ನಿಶ್ಚಿತ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.
ಪರಿವರ್ತನಾಯಾತ್ರೆಯ 39ನೆಯ ದಿನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಬೃಹತ್ ಯಾತ್ರೆ ನಡೆಸಿತು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದರು.
ನಮ್ಮ ಸರಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿ ಏಳು ಲಕ್ಷ ಉದ್ಯೋಗ ಸೃಷ್ಟಿಸಲಾಗಿತ್ತು. ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರದ ಖ್ಯಾತಿ ಹೆಚ್ಚಿಸಲಾಗಿತ್ತು ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು. ಅಶೋಕ್ ಹೇಳಿದ ಜೋಡಿ ಎತ್ತಿನ ಕಥೆ, ಮುಂದೆ ಓದಿ..
ಹೊಲ ಹೂಳಬೇಕೂಂತಾ ಎರಡು ಜೋಡಿ ಎತ್ತುಗಳನ್ನು ತರುತ್ತೇನೆ
ಹೊಲ ಊಳಬೇಕೂಂತಾ ಎರಡು ಜೋಡಿ ಎತ್ತುಗಳನ್ನು ತರುತ್ತೇನೆ, ನಮ್ಮ ಕಡೆ ಎರಡು ಜೋಡಿ ಎತ್ತು, ಕಾಂಗ್ರೆಸ್ ಕಡೆ ಎರಡು. ಅವು ಯಾರೂಂತಾ ಗೊತ್ತಾ, ಒಂದು ಮಾತಾಡಿದರೆ ಎಡವಟ್ಟು ಮಾಡಿಕೊಳ್ಳುವ ಪಾಪು ರಾಹುಲ್ ಗಾಂಧಿ, ಇನ್ನೊಂದು ಕತ್ತಿನ ಮೇಲೆ ನೊಗ ಬಿದ್ದರೆ ಸಾಕು, ಹಂಗೇ ಮಲ್ಕೊಂಡು ಬಿಡುವ ಸಿದ್ದರಾಮಯ್ಯ - ಆರ್ ಆಶೋಕ್ ವ್ಯಂಗ್ಯ.
ಒಂದು ನರೇಂದ್ರ ಮೋದಿ, ಇನ್ನೊಂದು ಯಡಿಯೂರಪ್ಪ
ಈ ಎರಡು ಎತ್ತುಗಳನ್ನು ಇಟ್ಟುಕೊಂಡು ಹೊಲ ಊಳೋಕಾಗುತ್ತಾ , ರೈತ ಉದ್ದಾರ ಆಗುತ್ತಾನಾ? ಕರ್ನಾಟಕ ಉದ್ದಾರ ಆಗಬೇಕಾದರೆ ಎರಡು ಎತ್ತುಗಳನ್ನು ತರುತ್ತೇನೆ. ಒಂದು ನರೇಂದ್ರ ಮೋದಿ, ಇನ್ನೊಂದು ಯಡಿಯೂರಪ್ಪ, ಎರಡೂ ಸಖತ್ತಾಗಿ ಹೊಲ ಹೂಳಿ ತೋರಿಸುತ್ತೆ ಎಂದು ಆರ್ ಅಶೋಕ್ ಸಭೆಯಲ್ಲಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಅಪರಾಧಗಳ ನಗರವಾಗಿ ಮಾರ್ಪಟ್ಟಿದೆ
ಕಾಂಗ್ರೆಸ್ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಕ್ಕಿ ಬೆಂಗಳೂರು ಅಪರಾಧಗಳ ನಗರವಾಗಿ ಮಾರ್ಪಟ್ಟಿದೆ. ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಮತ್ತೆ ಬೆಂಗಳೂರಿನ ವೈಭವವನ್ನು ಮರುಕಳಿಸುವುದೇ ಬಿಜೆಪಿಯ ಧ್ಯೇಯ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಘೋಷಿಸಿದರು.
ಬೆಂಗಳೂರಿನ ಜೆಪಿ ನಗರದಲ್ಲಿ ನಡೆದ ಸಮಾವೇಶ
ಬೆಂಗಳೂರಿನಲ್ಲಿ ನಡೆದ ಪರಿವರ್ತನಾಯಾತ್ರೆಯ ಉದ್ಘಾಟನಾ ಸಮಾವೇಶವನ್ನು ಸರಿಯಾಗಿ ನಿಭಾಯಿಸಲಿಲ್ಲ ಎನ್ನುವ ಆರೋಪದ ಹಿನ್ನಲೆಯಲ್ಲಿ ಏನೋ, ಬೆಂಗಳೂರಿನ ಜೆಪಿ ನಗರದಲ್ಲಿ ನಡೆದ ಸಮಾವೇಶಕ್ಕೆ ಬೃಹತ್ ಪ್ರಮಾಣದಲ್ಲಿ ಜನರು ಬರುವಂತೆ ಮಾಡುವಲ್ಲಿ ಆರ್ ಅಶೋಕ್ ಯಶಸ್ವಿಯಾದರು.
ಜೇವರ್ಗಿ, ಶಹಾಪುರ, ಯಾದಗೀರ್
ಪರಿವರ್ತನಾ ಸಮಾವೇಶ ಸೋಮವಾರ (ಡಿ 11) ಜೇವರ್ಗಿ, ಶಹಾಪುರ, ಯಾದಗೀರ್ ನಲ್ಲಿ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ನಡೆದ ಭಾನುವಾರದ ಸಮಾವೇಶದಲ್ಲಿ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಅನಂತ್ ಕುಮಾರ್ ಹೆಗಡೆ, ಜೊತೆಗೆ, ಆರ್ ಅಶೋಕ್, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಸೋಮಣ್ಣ, ತಾರಾ, ಶೃತಿ ಮುಂತಾದವರು ಭಾಗವಹಿಸಿದ್ದರು.