ಮೊದಲ ದಿನ ಕಾಗೇರಿಗೆ ಕಲಾಪದ ಪಾಠ ಮಾಡಿದ ಸಿದ್ದರಾಮಯ್ಯ!
ಬೆಂಗಳೂರು, ಅಕ್ಟೋಬರ್ 10 : ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮೊದಲ ದಿನದ ಕಲಾಪದಲ್ಲಿಯೇ ಅಬ್ಬರಿಸಿ ಬೊಬ್ಬಿರಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸದನ ನಡೆಸುವ ಪಾಠ ಹೇಳಿಕೊಟ್ಟರು.
ಮೂರು ದಿನದ ವಿಧಾನಸಭೆ ಕಲಾಪದ ಮೊದಲ ದಿನವಾದ ಗುರುವಾರ ಸಿದ್ದರಾಮಯ್ಯ ಸದನದಲ್ಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾರ್ಯಸೂಚಿಯಂತೆ ಸದನ ನಡೆಸಲು ಮುಂದಾದ ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೊದಲ ದಿನದ ಕಲಾಪ: ಅಬ್ಬರಿಸಿದ ವಿಪಕ್ಷ, ಸರ್ಕಾರಕ್ಕೆ ಸಂಕಟ
ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸೋಣ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಿಲುವಳಿ ಸೂಚನೆ ಮಂಡಿಸಿದವು. ನಿಯಮ 60ರ ಅನ್ವಯ ಈ ಬಗ್ಗೆ ವಿವರವಾದ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದವು.
ಸಂತಾಪ ಸೂಚನಾ ನಿರ್ಣಯ ಪೂರ್ಣಗೊಂಡ ಬಳಿಕ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧ ಸಮಿತಿಗಳ ವರದಿ ಮಂಡನೆ ಬಳಿಕ ಚರ್ಚೆ ಮಾಡೋಣ ಎಂದು ಹೇಳಿದರು. ಇದರಿಂದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶಗೊಂಡರು.
"ಶೂನ್ಯ ವೇಳೆಯ ನಂತರ ನಿಯಮ 60ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಯಲ್ಲಿ ಅವಕಾಶವಿದೆ" ಎಂದು ಸಿದ್ದರಾಮಯ್ಯ ಹೇಳಿದರು. ನಿಲುವಳಿ ಸೂಚನೆ ಕುರಿತು ಮೊದಲು ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.
ಸುಮ್ಮನೇ ಕೊಟ್ಟಿಲ್ಲ ಪ್ರತಿಪಕ್ಷ ಅಧ್ಯಕ್ಷ ಸ್ಥಾನ, ಷರತ್ತುಗಳೂ ಅನ್ವಯ!
ಕಾಂಗ್ರೆಸ್ ಸದಸ್ಯರಾದ ಕೆ. ಆರ್. ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಎಚ್. ಕೆ. ಪಾಟೀಲ್ ಸೇರಿದಂತೆ ಹಲವರು ಸಿದ್ದರಾಮಯ್ಯ ಮಾತಿಗೆ ಧ್ವನಿ ಗೂಡಿಸಿದರು. ಇದರಿಂದಾಗಿ ಕಲಾಪದಲ್ಲಿ ಗದ್ದಲ ಉಂಟಾಯಿತು. ಸ್ಪೀಕರ್ ಪ್ರತಿಪಕ್ಷಗಳ ಬೇಡಿಕೆಗೆ ಬಗ್ಗಲಿಲ್ಲ.
ಸಭಾನಾಯಕ, ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶ ಮಾಡಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ 2017-18ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಸದನದ ಮುಂದೆ ಮಂಡಿಸಿದರು.
ವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳು
ಒಂದು ಹಂತದಲ್ಲಿ ಸಿದ್ದರಾಮಯ್ಯ "ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ" ಎಂದು ಸ್ಪೀಕರ್ ವಿರುದ್ಧ ಅಬ್ಬರಿಸಿದರು. "ಸಭಾಧ್ಯಕ್ಷರು ಸರ್ಕಾರದ ಜೊತೆ ಶಾಮೀಲಾಗಿದ್ದಾರೆ" ಎಂದು ಆರೋಪಿಸಿದರು.
ಮೂರು ದಿನದಕ್ಕೆ ಕಲಾಪ ಸೀಮಿತ ಮಾಡುವುದು ಬೇಡ ವಿಸ್ತರಣೆ ಮಾಡೋಣ ಎಂದು ಕಲಾಪದ ಅಂತ್ಯದ ವೇಳೆಗೆ ಸಿದ್ದರಾಮಯ್ಯ ಪಟ್ಟು ಹಿಡಿದಿರು. ಕಲಾಪವನ್ನು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಯಿತು.