ವಿಧಾನಸಭೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪೂರ್ಣ ಬಜೆಟ್ ವಿಶ್ಲೇಷಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ!
ಬೆಂಗಳೂರು, ಮಾ. 15: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಮೊಟಕುಗೊಳಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿಯೇ ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ಶುರುವಾಗಿದೆ.
ರಾಜ್ಯ ಬಜೆಟ್ ಅಧಿವೇಶನ ಶುರುವಾದ ಬಳಿಕ ಇಂದು ಮೊದಲ ಬಾರಿ ಉಭಯ ಸದನಗಳಲ್ಲಿ ಗಂಭೀರ ಚರ್ಚೆ ನಡೆಯಿತು. ಆಗಾಗ ರಾಜಕೀಯ ನಾಯಕರು ಒಬ್ಬರನ್ನೊಬ್ಬರು ಲೇವಡಿ ಮಾಡುವುದು, ಸವಾಲು ಹಾಕುವುದು, ಮಧ್ಯೆ ಮಧ್ಯೆ ಹಾಸ್ಯ ಎಲ್ಲವೂ ಇಂದಿನ ಕಲಾಪದಲ್ಲಿ ಕಂಡು ಬಂದವು. ಅದರಲ್ಲಿಯೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಜೆಟ್ ಮೇಲಿನ ಚರ್ಚೆ ಇಂದಿನ ವಿಧಾನಸಭೆ ಕಲಾಪದ ಹೈಲೈಟ್.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ 2021-22ನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿದ್ದಾರೆ. ಬಜೆಟ್ ಬಗ್ಗೆ ಸಿದ್ದರಾಮಯ್ಯ ಅವರ ಅಭಿಪ್ರಾಯ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ವಿತ್ತೀಯ ಹೊಣೆಗಾರಿಕೆ ನೀತಿ ಉಲ್ಲಂಘನೆ!
ಪಸಕ್ತ ಸಾಲಿನ ಬಜೆಟ್ ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಮಾರಕವಾಗಿದೆ. ಕಾರಣ ಈ ಸಾಲಿನಲ್ಲಿ ರಾಜಸ್ವ ಆದಾಯಕ್ಕಿಂತ ರಾಜಸ್ವ ಖರ್ಚು ಹೆಚ್ಚಾಗುವ ಮೂಲಕ ಮೊದಲನೇ ಬಾರಿಗೆ ರಾಜಸ್ವ ಖೋತಾ ಅಥವಾ ರಾಜಸ್ವ ಕೊರತೆ ಉಂಟಾಗಿದೆ. 2004 ರ ನಂತರ ವಿತ್ತೀಯ ಹೊಣೆಗಾರಿಕೆ ನೀತಿಯನ್ನು ಕರ್ನಾಟಕ ಅಳವಡಿಸಿಕೊಂಡ ನಂತರದಲ್ಲಿ ಇಂಥದ್ದೊಂದು ರಾಜಸ್ವ ಕೊರತೆಯ ಬಜೆಟ್ ಈ ವರೆಗೆ ಮಂಡನೆಯಾಗಿರಲಿಲ್ಲ ಎಂದು ಸಿದ್ದರಾಮಯ್ಯ ಅವರು 2021-22ನೇ ಸಾಲಿನ ಬಜೆಟ್ನ್ನು ವಿಶ್ಲೇಷಣೆ ಮಾಡಿದರು.
ವಿತ್ತೀಯ ಹೊಣೆಗಾರಿಕೆ ನೀತಿಯ ಅನ್ವಯ ವಿತ್ತೀಯ ಕೊರತೆ ಶೇಕಡಾ 3 ಕ್ಕಿಂತ ಕಡಿಮೆ ಇರಬೇಕು, ರಾಜಸ್ವ ಉಳಿಕೆ ಇರಬೇಕು ಹಾಗೂ ರಾಜ್ಯದ ಸಾಲ ಜಿ.ಎಸ್. ಡಿ. ಪಿ ಯ ಶೇಕಡಾ 25ಕ್ಕಿಂತ ಕಡಿಮೆ ಇರಬೇಕು. ನನ್ನ 5 ವರ್ಷಗಳ ಆಡಳಿತದಲ್ಲಿ ಯಾವತ್ತೂ ಕೂಡ ಈ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸದನಕ್ಕೆ ತಿಳಿಸಿದರು.

ರಾಜಸ್ವ ಕೊರತೆಯ ಬಜೆಟ್
2019-20 ರಲ್ಲಿ ಕರ್ನಾಟಕ 1,185 ಕೋಟಿ ರೂ. ರಾಜಸ್ವ ಉಳಿಕೆ ಹೊಂದಿತ್ತು. 2020-21 ನೇ ಸಾಲಿನಲ್ಲಿ ರೂ.143 ಕೋಟಿ ರಾಜಸ್ವ ಉಳಿಕೆ ಆಗಬಹುದೆಂಬ ಅಂದಾಜು ಮಾಡಲಾಗಿತ್ತು. ಆದರೆ ಈಗ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜಸ್ವ ಉಳಿಕೆಯ ಬದಲಿಗೆ ರೂ.19,485 ಕೋಟಿ ರೂ. ರಾಜಸ್ವ ಕೊರತೆ ಉಂಟಾಗಿದೆ. ಇಷ್ಟೇ ಅಲ್ಲದೆ 2021-22 ನೇ ಸಾಲಿನಲ್ಲಿ ರೂ.15,133 ಕೋಟಿ ರಾಜಸ್ವ ಕೊರತೆ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.
ಸರ್ಕಾರ ಸಾಲ ಮಾಡಿ ರಾಜಸ್ವ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇಂದು ಎದುರಾಗಿದೆ. ಸರ್ಕಾರ ಈ ವರ್ಷದ ಜನವರಿ ವರೆಗೆ ರೂ.70,000 ಕೋಟಿ ಸಾಲ ಮಾಡಿದೆ. ಇದು ರಾಜ್ಯದ ಜಿ.ಎಸ್.ಡಿ.ಪಿ ಯ ಶೇಕಡಾ 26.9 ಆಗಿದೆ. ಈ ಬಾರಿ ಕೇಂದ್ರ ರಾಜ್ಯಗಳಿಗೆ ಜಿ.ಎಸ್.ಡಿ.ಪಿ ಯ ಶೇಕಡಾ 25 ಮೇಲೆ ಶೇ. 2 ಹೆಚ್ಚುವರಿಯಾಗಿ ಸಾಲ ಪಡೆಯಲು ಅನುಮತಿ ನೀಡುತ್ತೇವೆ ಎಂದು ಹೇಳಿದೆ. ಹೀಗೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡುತ್ತಾ ಹೋದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ.

ಅಭಿವೃದ್ಧಿ ಯೋಜನೆಗಳು ಸ್ಥಗಿತ
ಪ್ರಸಕ್ತ ಬಜೆಟ್ನಲ್ಲಿ ಈ ಸಾಲಿನಲ್ಲಿ ರೂ.71,000 ಕೋಟಿ ಸಾಲ ಮಾಡುವುದಾಗಿ ಸರ್ಕಾರ ಹೇಳಿದೆ. ರಾಜ್ಯದ ಬದ್ಧತಾ ಖರ್ಚು ಈ ವರ್ಷ ಶೇಕಡಾ 92 ತಲುಪಿದೆ, ಇದು ಮುಂದಿನ ಸಾಲಿನಲ್ಲಿ ಶೇಕಡಾ 102 ಆಗಲಿದೆ. ಅಂದರೆ ಸರ್ಕಾರ ಸಾಲ ಮಾಡಿದ ಹಣದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಹಣ ನೀಡಬೇಕಾಗುತ್ತದೆ. ಇದರಿಂದ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳಲಿವೆ.
ಸರ್ಕಾರ ತನ್ನೆಲ್ಲಾ ಕಷ್ಟ ನಷ್ಟಗಳಿಗೆ, ಲೋಪದೋಷಗಳಿಗೆ ಕೊರೊನಾವನ್ನು ಹೊಣೆ ಮಾಡುತ್ತಿದೆ. ಕೊರೊನಾ ವ್ಯಾಪಕವಾಗಿ ಹರಡಿದ ಪರಿಣಾಮದಿಂದ ಲಾಕ್ಡೌನ್ ಘೋಷಣೆ ಮಾಡಲಾಯಿತು. ಇದರಿಂದ ಜನ ಉದ್ಯೋಗವಿಲ್ಲದೆ ಮನೆಯಲ್ಲೇ ಕೂರುವಂತಾಗಿ, ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲವಾಯಿತು. ಈ ವೇಳೆ ಸರ್ಕಾರ ರಾಜ್ಯದ 1 ಕೋಟಿ ಕುಟುಂಬಗಳಿಗೆ ತಲಾ ರೂ.10,000 ಹಣ ನೀಡಿದ್ದರೆ ಜನರಲ್ಲಿ ಕೊಳ್ಳುವ ಶಕ್ತಿಯೂ ಬರುತ್ತಿತ್ತು ಜೊತೆಗೆ ರಾಜ್ಯದ ವ್ಯಾಪಾರ ವಹಿವಾಟು ಪ್ರಕ್ರಿಯೆಗೂ ಮರುಜೀವ ಬರುತ್ತಿತ್ತು. ಈ ಬಗ್ಗೆ ನಾನು ಹಲವು ಬಾರಿ ಪತ್ರ ಬರೆದರೂ ಸರ್ಕಾರ ನಮ್ಮ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದದ್ದು ದುರದೃಷ್ಟಕರ.

ಅಮಿತ್ ಶಾ ರಾಜ್ಯಕ್ಕೆ ಬಂದಾಗ ಹೇಳಿದ್ದ ಸುಳ್ಳು!
15ನೇ ಹಣಕಾಸು ಆಯೋಗವು ನಮ್ಮ ರಾಜ್ಯಕ್ಕೆ ರೂ.5,495 ಕೋಟಿಯ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು, ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸನ್ನು ತಿರಸ್ಕರಿಸಿದರು. ಈ ವಿಚಾರವನ್ನು ನಾನು ಕಳೆದ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೆ, ಆಗ ಸರ್ಕಾರ ವಿಶೇಷ ಅನುದಾನ ಪಡೆಯಲು ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿತ್ತು, ಇಂದಿಗೂ ಸರ್ಕಾರದ ಭರವಸೆ ಭರವಸೆಯಾಗಿಯೇ ಉಳಿದಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಮೇಲೆ ಕರ್ನಾಟಕಕ್ಕೆ ಹೆಚ್ಚಿನ ತೆರಿಗೆ ಪಾಲು ನೀಡಲಾಗಿದೆ ಎಂದು ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಸುಳ್ಳು ಹೇಳಿದ್ದರು. ಕೇಂದ್ರವು ನಮ್ಮ ರಾಜ್ಯಕ್ಕೆ ತೆರಿಗೆ ಸಂಗ್ರಹದ 42% ಅನ್ನು ವಾಪಾಸು ನೀಡಬೇಕು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ರಾಜ್ಯಕ್ಕೆ ಸಂಪೂರ್ಣ ಪ್ರಮಾಣದ ತೆರಿಗೆ ಪಾಲು ಬಂದಿಲ್ಲ.

ರಾಜ್ಯಕ್ಕೆ ಪ್ರತಿ ವರ್ಷ 1.5 ಲಕ್ಷ ಕೋಟಿ ನಷ್ಟ!
2014-15 ರಲ್ಲಿ ಕೇವಲ ಶೇ. 27, 2015-16 ರಲ್ಲಿ ಶೇ. 34, 2016-17 ರಲ್ಲಿ ಶೇ. 35, 2017-18ರಲ್ಲಿ ಶೇ. 35.37, 2018-19ರಲ್ಲಿ ಶೇ. 33 ಮಾತ್ರ ರಾಜ್ಯಕ್ಕೆ ಬಂದಿದೆ. ಅಂದರೆ ಪ್ರತಿ ವರ್ಷ ಸುಮಾರು ರೂ.30,000 ಕೋಟಿಯಂತೆ 5 ವರ್ಷಗಳಿಗೆ ರೂ.1.5 ಲಕ್ಷ ಕೋಟಿ ನಷ್ಟವಾಗಿದೆ. ಇದು ರಾಜ್ಯಕ್ಕೆ ನರೇಂದ್ರ ಮೋದಿ ಅವರ ಸರ್ಕಾರ ಮಾಡಿದ ಮೋಸ ಅಂತ ಅಲ್ಲದೆ ಬೇರೇನು ಹೇಳಬೇಕು?
2022ರ ನಂತರ ರಾಜ್ಯಕ್ಕೆ ಬರುವ ಜಿ.ಎಸ್.ಟಿ ಪರಿಹಾರವೂ ನಿಲ್ಲಲಿದೆ. ಇದರಿಂದ ಈಗಿರುವ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ರಾಜ್ಯ ಸರ್ಕಾರವು ನಾಡಿನ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಿ.ಎಸ್.ಟಿ ಪರಿಹಾರವನ್ನು ಮತ್ತೆ 5 ವರ್ಷ ಮುಂದುವರೆಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬಜೆಟ್ ನಿರೀಕ್ಷಿತ ಗುರಿ ತಲುಪುವುದು ಕಷ್ಟಸಾಧ್ಯ
ಸಿಎಂ ಯಡಿಯೂರಪ್ಪ ಅವರು ರಾಜ್ಯ ಬಜೆಟ್ ಮಂಡಿಸಿದ ನಂತರದ ದಿನ ತೆರಿಗೆ ಹೊರೆಯಿಲ್ಲದ ಬಜೆಟ್ ಅಂತ ಪತ್ರಿಕೆಗಳು ವರದಿ ಮಾಡಿದವು. ನಿಜ ಹೇಳಬೇಕೆಂದರೆ ಯಡಿಯೂರಪ್ಪ ಅವರಿಗೆ ತೆರಿಗೆ ಹೆಚ್ಚಳ ಮಾಡಲು ಅವಕಾಶವೇ ಇಲ್ಲವಾಗಿದೆ, ಈಗಾಗಲೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ, ಇನ್ನುಳಿದಂತೆ ಅಬಕಾರಿ ತೆರಿಗೆ ಗರಿಷ್ಠ ಮಟ್ಟ ತಲುಪಿದೆ. ಇನ್ನು ತೆರಿಗೆ ಏರಿಕೆ ಮಾಡುವುದು ಎಲ್ಲಿಂದ ಸಾಧ್ಯ?
ಈ ಸಾಲಿನ ಬಜೆಟ್ ಗಾತ್ರ ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿದೆ, ಆದರೆ ಕೊರೊನಾ ರೋಗ ಇನ್ನೂ ಕೂಡ ಸಂಪೂರ್ಣವಾಗಿ ಹೋಗಿಲ್ಲ. ಈ ಕಾರಣದಿಂದ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹವಾಗುವುದು ಅನುಮಾನ ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆ ದರ -2.6 ಇದೆ. ಹಾಗಾಗಿ ಬಜೆಟ್ ತನ್ನ ನಿರೀಕ್ಷಿತ ಗುರಿಗಳನ್ನು ತಲುಪುವುದು ಸ್ವಲ್ಪ ಕಷ್ಟಸಾಧ್ಯ ಎಂದು ಸಿದ್ದರಾಮಯ್ಯ ವಿವರಿಸಿದರು.

ಯಾವುದು ಸರಿ? ಯಾವುದು ತಪ್ಪು?
15ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯದ ಒಟ್ಟು ಜಿ.ಎಸ್.ಡಿ.ಪಿ (ಕರ್ನಾಟಕ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ)
18,03,609 ಕೋಟಿ ರೂಪಾಯಿ. 2019-20 ರಲ್ಲಿ ಇದು 16,98,685 ರೂಪಾಯಿಯಾಗಿತ್ತು. 2021-22ರ ಆರ್ಥಿಕ ಸಮೀಕ್ಷೆಯ ವರದಿ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ರೂ.11,13,818 ಕೋಟಿ. ಅಂದರೆ ಕೇಂದ್ರದ ವರದಿಗಿಂತ ರೂ.6,89,800 ಕೋಟಿ ಕಡಿಮೆ. ಇವೆರಡು ಸರ್ಕಾರವೇ ನೀಡಿರುವ ಭಿನ್ನ ಮಾಹಿತಿಗಳು. ಇವುಗಳಲ್ಲಿ ಯಾವುದು ಸರಿ? ಯಾವುದು ತಪ್ಪು? ಎಂದು ಪ್ರಶ್ನೆ ಮಾಡಿದರು.
ಬಜೆಟ್ ಗಾತ್ರ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗಿದೆ, ಆದರೆ ವಲಯಗಳಿಗೆ ಹಂಚಿಕೆಯಾಗಿರುವ ಅನುದಾನ ಕಳೆದ ಬಾರಿಗಿಂತ ಕಡಿಮೆಯಾಗಿದೆ, ಇದು ಹೇಗೆ? ಕೃಷಿ ಸಂಬಂಧಿತ ಚಟುವಟಿಕೆಗಳು, ತೋಟಗಾರಿಕೆ, ಜಲಸಂಪನ್ಮೂಲ, ಸಹಕಾರಿ ಕ್ಷೇತ್ರ , ರೇಷ್ಮೆ ಹಾಗೂ ಪಶುಸಂಗೋಪನೆ ಇಲಾಖೆಗಳನ್ನು ಒಳಗೊಂಡ 1ನೇ ವಲಯಕ್ಕೆ ಸರ್ಕಾರ ಕಳೆದ ಬಜೆಟ್ನಲ್ಲಿ ರೂ.32,359 ಕೋಟಿ ಅನುದಾನ ನೀಡಿತ್ತು, ಈ ಬಾರಿ ಈ ವಲಯಕ್ಕೆ ರೂ. 31,028 ಕೋಟಿ ಅನುದಾನ ನೀಡಿದೆ. ಅಂದರೆ ಕಳೆದ ಬಜೆಟ್ ಅನುದಾನಕ್ಕಿಂತ ಈ ಬಾರಿ ರೂ.1,231 ಕೋಟಿ ಕಡಿಮೆಯಾಗಿದೆ ಎಂದು ಆರೋಪಿಸಿದರು.

ಕಳೆದ ಬಾರಿಗಿಂತ ಕಡಿಮೆ ಅನುದಾನ
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಉನ್ನತ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ವಸತಿ ಇಲಾಖೆ, ಕಾರ್ಮಿಕ ಇಲಾಖೆಗಳನ್ನು ಒಳಗೊಂಡ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಕಳೆದ ಬಜೆಟ್ ನಲ್ಲಿ 72,093 ಕೋಟಿ ರೂ. ಅನುದಾನ ನೀಡಲಾಗಿತ್ತು, ಈ ಬಾರಿ 62,150 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ರೂ.9,943 ಕೋಟಿ ಅನುದಾನ ಕಡಿಮೆ ಮಾಡಲಾಗಿದೆ.
ಮೂಲ ಸೌಕರ್ಯ, ಕೈಗಾರಿಕೆ, ಬಂದರು, ಗಣಿ ಹಾಗೂ ಕುಡಿಯುವ ನೀರಿನ ಪೂರೈಕೆಗಳನ್ನು ಒಳಗೊಂಡ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ಎಂಬ 3ನೇ ವಲಯಕ್ಕೆ ಕಳೆದ ಬಾರಿ ಬಜೆಟ್ ನಲ್ಲಿ 55,732 ಕೋಟಿ ರೂ. ಅನುದಾನ ನೀಡಲಾಗಿತ್ತು, ಈ ಬಾರಿ 52,529 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಂದರೆ ಈ ಬಾರಿ 3,203 ಕೋಟಿ ರೂ. ಅನುದಾನ ಕಡಿಮೆ ಮಾಡಲಾಗಿದೆ.

ಬೆಂಗಳೂರು ನಗರಾಭಿವೃದ್ಧಿಗೂ ಕಡಿಮೆ ಅನುದಾನ
ಬೆಂಗಳೂರು ನಗರಾಭಿವೃದ್ಧಿ ಎಂಬ 4ನೇ ವಲಯಕ್ಕೆ ಕಳೆದ ಬಜೆಟ್ ನಲ್ಲಿ 8,772 ಕೋಟಿ ರೂ. ಅನುದಾನ ನೀಡಲಾಗಿತ್ತು, ಈ ಬಾರಿ 7,795 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ 977 ಕೋಟಿ ರೂ. ಅನುದಾನ ಕಡಿಮೆ ಮಾಡಲಾಗಿದೆ.
5ನೇ ವಲಯವಾದ ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಸರ್ಕಾರ ಕಳೆದ ಬಜೆಟ್ ನಲ್ಲಿ 4,552 ಕೋಟಿ ರೂ. ಅನುದಾನ ನೀಡಿತ್ತು, ಈ ಬಾರಿ 2,645 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಅಂದರೆ 1,907 ಕೋಟಿ ರೂ. ಅನುದಾನ ಕಡಿಮೆ ಮಾಡಲಾಗಿದೆ.
6ನೇ ವಲಯವಾದ ಆಡಳಿತ ಸುಧಾರಣೆ ವಲಯಕ್ಕೆ ಕಳೆದ ಬಾರಿಗಿಂತ ಈ ಬಾರಿ 42,325 ಕೋಟಿ ರೂ. ಹೆಚ್ಚು ಅನುದಾನ ಘೋಷಣೆ ಮಾಡಲಾಗಿದೆಯಾದರೂ ಯಾವ ಕಾರ್ಯಕ್ರಮಗಳಿಗೆ ಅನುದಾನ ಬಳಕೆ ಮಾಡಲಾಗುತ್ತದೆ? ಯಾವ ಪ್ರಮಾಣದ ಅನುದಾನ ಬಳಕೆ ಮಾಡಲಾಗುತ್ತದೆ ಎಂಬ ಯಾವುದೇ ಮಾಹಿತಿ ನೀಡಿಲ್ಲ.

ರಾಜ್ಯವನ್ನು ದಿವಾಳಿ ಹಂತಕ್ಕೆ ತಂದ ಸರ್ಕಾರ
ಬಜೆಟ್ ಗಾತ್ರ ಹೆಚ್ಚಾದಂತೆ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಗೆ ಸರ್ಕಾರ ಮೀಸಲಿಡುವ ಅನುದಾನದ ಪ್ರಮಾಣದಲ್ಲೂ ಹೆಚ್ಚಳವಾಗಬೇಕು. ನಮ್ಮ ಸರ್ಕಾರದ ಕೊನೆಯ ಬಜೆಟ್ನಲ್ಲಿ ಈ ಯೋಜನೆಗೆ 29,000 ಕೋಟಿ ರೂ. ಅನುದಾನ ನೀಡಿದ್ದೆ. ಅಂದಿನ ಬಜೆಟ್ ಗಾತ್ರ 2,09,181 ಕೋಟಿ ರೂ. ಆಗಿತ್ತು. ಪ್ರಸಕ್ತ ಬಜೆಟ್ ಗಾತ್ರ ,46,207 ಕೋಟಿ ರೂ. ಆದರೆ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಗೆ ಮೀಸಲಿಟ್ಟಿರುವ ಅನುದಾನ 26,005 ಕೋಟಿ ರೂ. ಇದು ನಾಡಿನ ದಲಿತ, ಹಿಂದುಳಿದ ವರ್ಗದ ಜನರಿಗೆ ಎಸಗುತ್ತಿರುವ ದ್ರೋಹ. ಈ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ ಎಂದು ಹೇಗೆ ಹೇಳಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂದರೆ 2013-14ನೇ ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 1,36,000 ಕೋಟಿ ರೂ. ಇತ್ತು, ನಮ್ಮ ಸರ್ಕಾರ ಅಧಿಕಾರದಿಂದ ಕೆಳಗಿಳಿದ ವರ್ಷ ಅಂದರೆ 2018-19 ರಲ್ಲಿ ಒಟ್ಟು ಸಾಲ 2,42,000 ಕೋಟಿ ರೂ. ನಮ್ಮ 5 ವರ್ಷಗಳ ಆಡಳಿತದಲ್ಲಿ ಮಾಡಿದ ಸಾಲ 1,06,000 ಕೋಟಿ ರೂ. ಈ ಸರ್ಕಾರ ಆಡಳಿತಕ್ಕೆ ಬಂದು ಕೇವಲ 2 ವರ್ಷದಲ್ಲಿ 1,41,000 ಕೋಟಿ ರೂ. ಸಾಲ ಮಾಡುವ ಮೂಲಕ ಕರ್ನಾಟಕವನ್ನು ದಿವಾಳಿ ಹಂತಕ್ಕೆ ತಂದಿದೆ.
Recommended Video

ಪ್ರಣಾಳಿಕೆಯಲ್ಲಿ ಹೇಳಿದ್ದೇನು? ಮಾಡುತ್ತಿರುವುದು ಏನು?
ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 1 ಲಕ್ಷ ರೂ. ವರೆಗಿನ ರೈತರ ಸಹಕಾರಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು, ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 500 ಕೋಟಿ ರೂ. ವಿಶೇಷ ನಿಧಿ ಸ್ಥಾಪಿಸುವುದಾಗಿ ಹೇಳಿತ್ತು. ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿದೆ, ಈ ಭರವಸೆಗಳ ಬಗ್ಗೆ ಮಾತೇ ಆಡುತ್ತಿಲ್ಲ.
ರಾಜ್ಯದ ವಸತಿ ಯೋಜನೆಗಳಿಗೆ ಜನವರಿ ತಿಂಗಳ ಅಂತ್ಯದವರೆಗೆ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಅನುದಾನ 974 ಕೋಟಿ ರೂ.. ಈ ಕಾರ್ಯಕ್ರಮಕ್ಕೆ ಲಭ್ಯವಿರುವ ಅನುದಾನ 4,134 ಕೋಟಿ ರೂ.. ಕಳೆದ ವರ್ಷದ ಡಿಸೆಂಬರ್ ವೇಳೆಗೆ 2,394 ಕೋಟಿ ರೂ. ಅನುದಾನ ಬಳಕೆಯಾಗಬೇಕಿತ್ತು. ಬಡ ಜನರಿಗೆ ಸೂರು ನಿರ್ಮಾಣ ಮಾಡಿಕೊಡಲು ಯಾಕಿಷ್ಟು ನಿರಾಸಕ್ತಿ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ಅವಧಿಯ ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಂದಿರಾ ಕ್ಯಾಂಟೀನ್ಗೆ ಅಗತ್ಯ ಅನುದಾನ ನೀಡುತ್ತಿಲ್ಲ, ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ಇವು ಜನರ ಜೀವನಾಧಾರವಾದ ಯೋಜನೆಗಳು, ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ಸರ್ಕಾರ ನಿಲ್ಲಿಸಬಾರದು ಎಂದು ಸಿದ್ದರಾಮಯ್ಯ ಅವರು ತಮ್ಮ ಚರ್ಚೆಯಲ್ಲಿ ಸರ್ಕಾರವನ್ನು ವಿನಂತಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications