ಅಸಾಧಾರಣ ಸಂದರ್ಭದಲ್ಲಿ ಮಾತ್ರ ಗಡಿಪಾರು ಆದೇಶ ಮಾಡಬೇಕು; ಹೈಕೋರ್ಟ್
ಬೆಂಗಳೂರು, ಮಾರ್ಚ್ 30; ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಗಡಿಪಾರು ಮಾಡುವ ಮುನ್ನ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಗಡಿಪಾರು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೇ, ಗಡಿಪಾರು ಮಾಡುವುದರಿಂದ ವ್ಯಕ್ತಿ ಮೂಲಭೂತ ಹಕ್ಕಿಗೆ ತೊಂದರೆ ಆಗುವುದರಿಂದ ಆಂತಹ ಸಂದರ್ಭಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಬೇಕೆಂದು ಹೇಳಿದೆ. ತೀರಾ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಗಡಿಪಾರು ಮಾಡುವಂತಹ ನಿರ್ಧಾರಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ವ್ಯಕ್ತಿಯೊಬ್ಬರನ್ನು ಕುಣಿಗಲ್ ತಾಲೂಕಿನಿಂದ ಗಡಿಪಾರು ಮಾಡಿ ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದೆ.
ಕುಣಿಗಲ್ ತಾಲೂಕಿನ ತೋರೆಬೊಮ್ಮನಹಳ್ಳಿಯ ಟಿ. ರೂಪೇಶ್ ಕುಮಾರ್ ಎಂಬುವರು ತಮ್ಮನ್ನು ಗಡಿಪಾರು ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ 'ಗಡಿಪಾರು ಮಾಡಿ ಆದೇಶ ಮಾಡುವುದು ಸಾಮಾನ್ಯ ಪ್ರಕ್ರಿಯೆಯಲ್ಲ ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಉಲ್ಲೇಖಿಸಿದೆ. ಅಲ್ಲದೆ, ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಿತವಾಗಿ ಜಾರಿ ಮಾಬಹುದಾಗಿದೆ. ಅಲ್ಲದೇ, ಗಡಿಪಾರು ಮಾಡುವುದು ಸಂವಿಧಾನದ 19 (1) (ಡಿ) ಪ್ರಕಾರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೇ, ಅರ್ಜಿದಾರರ ವಿರುದ್ಧ ಹೊರಡಿಸಿರುವ ಆದೇಶವು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 58ಕ್ಕೆ ವಿರುದ್ಧವಾಗಿದೆ. ಇದು ನಾಗರಿಕರಿಂದ ಕಸಿದುಕೊಳ್ಳುತ್ತಿರುವುದು ಮೂಲಭೂತ ಹಕ್ಕನ್ನು ಕಸಿದುಕೊಂಡಂತಾಗಿದೆ. ಹೀಗಾಗಿ ಗಡಿಪಾರ ಆದೇಶ ರದ್ದು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ದೀಪಕ್ ಮತ್ತು ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ ಭಾರತದ ಸಂವಿಧಾನದ 19ನೇ ವಿಧಿಯ ಕಲಂ (5) ರಲ್ಲಿ ಹೇಳಿರುವಂತೆ ಗಡಿಪಾರು ಮಾಡುವ ಆದೇಶಗಳು ಸಮಂಜಸತೆಯ ಪರೀಕ್ಷೆಗೆ ನಿಲ್ಲಬೇಕು. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಗಡಿಪಾರು ಮಾಡುವಂತಹ ಯಾವುದೇ ಸಂದರ್ಭ ಎದುರಾಗಿಲ್ಲ. ಹಾಗಾಗಿ ಅರ್ಜಿದಾರರ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶವನ್ನು ರದ್ದು ಮಾಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ; ರೂಪೇಶ್ಕುಮಾರ್ ಅವರು ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 87 ಸಾರ್ವಜನಿಕವಾಗಿ ಜೂಜಾಟ. ಅದೇ ಕಾಯಿದೆಯ ಸೆಕ್ಷನ್ 87 ರ ಅಡಿಯಲ್ಲಿ ಎರಡನೇ ಪ್ರಕರಣವನ್ನು ಮತ್ತು ಮೂರನೇ ಪ್ರಕರಣವನ್ನು ಸೆಕ್ಷನ್ 341, ತಪ್ಪಾದ ಸಂಯಮ 504, ಉದ್ದೇಶಪೂರ್ವಕ ಅವಮಾನ 323 ಮತ್ತು ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು 363, ಅಪಹರಣ ಮತ್ತು ಭಾರತೀಯ ದಂಡ ಸಂಹಿತೆಯ 34 ಪಿತೂರಿ, ಕರ್ನಾಟಕ ಮೈನರ್ ಮಿನರಲ್ ಕಾನ್ಸಿಸ್ಟೆಂಟ್ ರೂಲ್ಸ್, ಮತ್ತು ಭಾರತೀಯ ಮೋಟಾರು ವಾಹನಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಆರು ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳು ಖುಲಾಸೆಗೊಂಡಿದ್ದರು. ಇನ್ನುಳಿದ ಮೂರು ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದವು.

ಆರೋಪಿಯ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ವರದಿ ಸಲ್ಲಿಸಿದ ನಂತರ ರೂಪೇಶ ಕುಮಾರ್ ಅವರನ್ನು ಗಡಿಪಾರು ಮಾಡುವಂತೆ ಮನವಿ ಮಾಡಲಾಗಿತ್ತು. ಇದರ ಆಧಾರದಲ್ಲಿ ಆರೋಪಿ ರೂಪೇಶ್ ಕುಮಾರ್ ಅವರನ್ನು 2022ರ ನವೆಂಬರ್ 24 ರಂದು ರೂಪೇಶ್ಕುಮಾರ್ಗೆ ನೋಟಿಸ್ ನೀಡಿದ್ದರು. ಅಲ್ಲದೇ, 2022ರ ಡಿಸೆಂಬರ್ 15ರಂದು ಗಡಿಪಾರು ಮಾಡಿ ಆದೇಶ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ರೂಪೇಶ್ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications