ವಿವಾದಿತ ವ್ಯಕ್ತಿಗಳೇ ಯಶಸ್ಸು ಪಡೆಯುವುದು: ಡಿ.ಕೆ. ಶಿವಕುಮಾರ್
ಬೆಂಗಳೂರು, ನವೆಂಬರ್ 6: ಬಳ್ಳಾರಿ ಉಪ ಚುನಾವಣೆಯ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿದ್ದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. 14 ವರ್ಷದಲ್ಲೇ ಮೊದಲ ಬಾರಿಗೆ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಬಳ್ಳಾರಿಗೆ ಕಾಂಗ್ರೆಸ್ ಲಗ್ಗೆ ಇಡುವಂತೆ ಮಾಡಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಶಿವಕುಮಾರ್, ಇದು ಪಕ್ಷ ತಮಗೆ ನೀಡಿದ ಕ್ಲಿಷ್ಟಕರ ಜವಾಬ್ದಾರಿಯಾಗಿತ್ತು ಎಂದಿದ್ದಾರೆ.
'ವಿವಾದಾತ್ಮಕ ವ್ಯಕ್ತಿಗಳು ಮಾತ್ರವೇ ಯಾವಾಗಲೂ ಉಪಯುಕ್ತರು. ವಿವಾದಿತ ವ್ಯಕ್ತಿಗಳೇ ಯಶಸ್ಸು ಗಳಿಸುವುದು. ನಾನು ವಿವಾದಾತ್ಮಕ ವ್ಯಕ್ತಿಯಾಗಲು ಎಂದಿಗೂ ಬಯಸಿರಲಿಲ್ಲ. ನಾನು ಇನ್ನಷ್ಟು ವಿವಾದ ಸೃಷ್ಟಿಸಲಿ ಎಂದು ಅವರು ಬಯಸುತ್ತಾರೆ.
ಹೆಚ್ಚು ಪ್ರಬಲನಾದ ನಾಯಕ ಹೆಚ್ಚು ಶತ್ರುಗಳನ್ನೂ ಹೊಂದುತ್ತಾನೆ. ಕಡಿಮೆ ಬಲವುಳ್ಳವನಿಗೆ ಕಡಿಮೆ ಶತ್ರುಗಳು. ಬಲವೇ ಇಲ್ಲದವರಿಗೆ ಶತ್ರುಗಳೂ ಇರುವುದಿಲ್ಲ' ಎಂದು ತಾವು ಪಕ್ಷದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಉಳಿದುಕೊಂಡಿರುವುದರ ಬಗ್ಗೆ ಮಾರ್ಮಿಕವಾಗಿ ಹೇಳಿದರು.
ಹುಂಬತನದ ಆ ದಿನಗಳಿಂದ ಇಲ್ಲಿಯವರೆಗೆ ಎಷ್ಟೆಲ್ಲ ಬದಲಾದರು ಡಿಕೆಶಿ!
ದಕ್ಷಿಣ ಭಾರತದಲ್ಲಿ ರಾಮಮಂದಿರ ವಿವಾದವನ್ನು ಬಿಜೆಪಿ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಸಾಮಾಜಿಕ ವಲಯ, ಆಡಳಿತ, ಆರ್ಥಿಕ ವಲಯಗಳಲ್ಲಿ ತಮಗೆ ಯಾವ ಪ್ರಯೋಜನಗಳು ಸಿಗುತ್ತವೆ ಎಂಬ ಬಗ್ಗೆಯಷ್ಟೇ ಜನರು ಚಿಂತಿಸುತ್ತಾರೆ ಎಂದರು.