DCM to CM: ಈವರೆಗೆ ಡಿಸಿಎಂ ಆದವರೆಷ್ಟು?; ಅದರಲ್ಲಿ ಸಿಎಂ ಹುದ್ದೆಗೆ ಏರಿದವರೆಷ್ಟು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆದ್ದು, ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರೆ, ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಡಿ.ಕೆ. ಶಿವಕುಮಾರ್ ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶನಿವಾರ, ಮೇ 20ರಂದು ಕಂಠೀರವ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 8 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ದೇಶದ ಬಿಜೆಪಿಯೇತರ ಸಿಎಂಗಳು, ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಇನ್ನು ರಾಜ್ಯದಲ್ಲಿ ಈವರೆಗೆ 11 ಜನ ಉಪ ಮುಖ್ಯಮಂತಿಗಳಾಗಿದ್ದಾರೆ. ರಾಜ್ಯದ ಮೊದಲ ಡಿಸಿಎಂ ಆದವರು ಎಸ್.ಎಂ. ಕೃಷ್ಣ. ಅವರು 1993ರಲ್ಲಿ ವೀರಪ್ಪ ಮೊಹ್ಲಿ ಅವರ ಅಧಿಕಾರವಧಿಯಲ್ಲಿ ಡಿಸಿಎಂ ಆಗಿದ್ದರು. ನಾಯಕರ ಪ್ರಭಾವ, ಚುನಾವಣಾ ಫಲಿತಾಂಶ, ಶಾಸಕರ ಬೆಂಬಲದ ಮೇಲೆ ಈ ಹುದ್ದೆ ಸೃಷ್ಟಿಯಾಗುತ್ತದೆ.
ಇದುವರೆಗೆ ರಾಜ್ಯದಲ್ಲಿ 11 ಜನ ಡಿಸಿಎಂ ಆದವರ ಪೈಕಿ ಕೇವಲ ನಾಲ್ವರಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆಗೆ ಏರುವ ಅದೃಷ್ಟ ಒಲಿದು ಬಂದಿದೆ. ಅವರಲ್ಲಿ ಎಸ್.ಎಂ. ಕೃಷ್ಣ, ಜೆಎಚ್. ಪಟೇಲ್, ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸೇರಿದ್ದಾರೆ.
ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜೆ.ಎಚ್. ಪಟೇಲ್ ಹಾಗೂ ಸಿದ್ದರಾಮಯ್ಯ ತೀವ್ರ ಪೈಪೋಟಿ ನಡೆಸಿದ್ದರು. ಡಿಸಿಎಂ ಆಗಿದ್ದ ಜೆ.ಎಚ್. ಪಟೇಲ್ ಅವರು ಲಿಂಗಾಯತ ಕೋಟಾದಡಿ ಮುಖ್ಯಮಂತ್ರಿ ಹುದ್ದೆಗೇರಿದರು.

ಈ ವೇಳೆ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಕುರುಬ ಸಮುದಾಯದ ಸಿದ್ದರಾಮಯ್ಯರನ್ನು ಸಮಾಧಾನಪಡಿಸಲು ಉಪ ಮುಖ್ಯಮಂತ್ರಿ ಮಾಡಲಾಗಿತ್ತು. 1996ರಿಂದ 1999ರ ವರೆಗೆ ಡಿಸಿಎಂ ಆಗಿ ಕಾರ್ಯನಿರ್ವಹಿಸಿದರು.
ಆ ಬಳಿಕ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದಾಗ, ಸಿಎಂ ಹುದ್ದೆ ಬೇಕೆಂದು ಜೆಡಿಎಸ್ನಲ್ಲಿದ್ದ ಸಿದ್ದರಾಮಯ್ಯ ಹಠ ಹಿಡಿದಿದ್ದರು. ಕಾಂಗ್ರೆಸ್ಗೆ ಸಿಎಂ ಹುದ್ದೆ ಬಿಟ್ಟಕೊಟ್ಟ ಕಾರಣ ಧರಂ ಸಿಂಗ್ ಅಧಿಕಾರವಧಿಯಲ್ಲಿ ಮತ್ತೆ ಸಿದ್ದರಾಮಯ್ಯಗೆ ಡಿಸಿಎಂ ಪಟ್ಟ ಒಲಿದು ಬಂತು.
ನಂತರ, ಸಿದ್ದರಾಮಯ್ಯ ಅವರು ಡಿಸಿಎಂ ಜೊತೆಗೆ ಜೆಡಿಎಸ್ ಪಕ್ಷ ತೊರೆದಾಗ ಎಂ.ಪಿ. ಪ್ರಕಾಶ್ ಅವರನ್ನು ಡಿಸಿಎಂ ಮಾಡಲಾಯಿತು. ಸಿದ್ದರಾಮಯ್ಯ 2006ರಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮುರಿದು ಬಿದ್ದು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಬಿ.ಎಸ್. ಯಡಿಯೂರಪ್ಪ ಡಿಸಿಎಂ ಆಗಿದ್ದರು.
ನಂತರ, ಬಿಜೆಪಿ-ಜೆಡಿಎಸ್ ಅಮ್ಮಿಶ್ರ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಕೇವಲ 7 ದಿನಗಳ ಕಾಲ ಮುಖ್ಯಮಂತ್ರಿಯಾದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಬಿ.ಎಸ್. ಯಡಿಯೂರಪ್ಪ ಮತ್ತೆ ಸಿಎಂ ಆದರು. 2018ರಲ್ಲಿ ಆರು ದಿನ ಮತ್ತು 2019ರಿಂದ 2021ರವರೆಗೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದರು.
ಇನ್ನು 2013ರಲ್ಲಿ ಕಾಂಗ್ರೆಸ್ಗೆ ಪೂರ್ಣ ಬಹುಮತ ಬಂದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಿದರು. 2018ರ ವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು. ಈ ವೇಳೆ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿಸಿರಲಿಲ್ಲ.
2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಜಿ. ಪರಮೇಶ್ವರ್ ಡಿಸಿಎಂ ಆದರು. ಆದರೆ ಇವರಿಗೆ ಇನ್ನೂ ಸಿಎಂ ಹುದ್ದೆ ಲಭಿಸಿಲ್ಲ.
2023ರಲ್ಲಿ ಕಾಂಗ್ರೆಸ್ಗೆ ಪೂರ್ಣ ಬಹುಮತ ಬಂದ ಕಾರಣ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಎರಡು ಬಾರಿ ಡಿಸಿಎಂ ಹಾಗೂ ಎರಡು ಬಾರಿ ಸಿಎಂ ಹುದ್ದೆಗೇರಿದ್ದಾರೆ. ಸದ್ಯ ಡಿ.ಕೆ. ಶಿವಕುಮಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರುವ ಅದೃಷ್ಟ ಲಭಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಈವರೆಗೆ ಕರ್ನಾಟಕದಲ್ಲಿ ಡಿಸಿಎಂ ಆದವರ ಪಟ್ಟಿ
* ಎಸ್.ಎಂ. ಕೃಷ್ಣ - 1993-1994
* ಜೆ.ಎಚ್. ಪಟೇಲ್ - 1994-1996
* ಸಿದ್ದರಾಮಯ್ಯ - 1996-1999
* ಸಿದ್ದರಾಮಯ್ಯ - 2004-2005
* ಎಂ.ಪಿ. ಪ್ರಕಾಶ್ - 2005- 2006
* ಬಿ.ಎಸ್. ಯಡಿಯೂರಪ್ಪ - 2006-2007
* ಆರ್. ಅಶೋಕ್ - 2012-2013
* ಕೆ.ಎಸ್. ಈಶ್ವರಪ್ಪ - 2012-2013
* ಜಿ. ಪರಮೇಶ್ವರ್ - 2018-2019
* ಡಾ. ಸಿ.ಎನ್ ಅಶ್ವಥ್ ನಾರಾಯಣ - 2019-2021
* ಗೋವಿಂದ ಕಾರಜೋಳ - 2019-2021
* ಲಕ್ಷ್ಮಣ ಸವದಿ - 2019-2021
* ಡಿ.ಕೆ. ಶಿವಕುಮಾರ್ - 2023ರಿಂದ












Click it and Unblock the Notifications