ಶಿಶಿಲ- ಭೈರಾಪುರ ರಸ್ತೆ ವಿರೋಧಿಸಿ, 50 ಸಾವಿರ ಮರ ಉಳಿಸಿ, ಬೆಂಬಲಿಸಿ
ಮೂಡಿಗೆರೆ, ಆಗಸ್ಟ್ 10: ಕೇಂದ್ರ ಸರ್ಕಾರದ ಉದ್ದೇಶಿತ ಚಿತ್ರದುರ್ಗ ಹಾಗೂ ಮಂಗಳೂರು ನಡುವಿನ ಸೂಪರ್ ಹೆದ್ದಾರಿ ಯೋಜನೆಯಡಿಯಲ್ಲಿ ಬರುವ ಶಿಶಿಲ- ಭೈರಾಪುರ ಲಿಂಕ್ ರಸ್ತೆ ಪರಿಸರಕ್ಕೆ ಮಾರಕವಾಗಿದೆ ಎಂದು ವಿರೋಧಿಸಿ ಪ್ರತಿಭಟನೆ, ಅಭಿಯಾನ ನಡೆಯುತ್ತಲೇ ಇದೆ. ಈಗ ಇದರ ಬಗ್ಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಲು ಆನ್ ಲೈನ್ ಪಿಟೀಷನ್ ಆರಂಭಿಸಲಾಗಿದೆ.
ಉದ್ದೇಶಿತ ಈ ಯೋಜನೆಯಿಂದ ಸರಿ ಸುಮಾರು 50 ಸಾವಿರಕ್ಕೂ ಅಧಿಕ ಮರಗಳು ನಾಶವಾಗಲಿದೆ. ಭಾರತದಲ್ಲೆ ಅತಿ ಹೆಚ್ಚು ಆಮ್ಲಜನಕ ಉತ್ಪಾದನಾ ತಾಣ ಎನಿಸಿಕೊಂಡಿರುವ ನಿತ್ಯ ಹರಿದ್ವರ್ಣ ಕಾಡುಗಳು ಸಂಪೂರ್ಣವಾಗಿ ಕಣ್ಮರೆಯಾಗಲಿವೆ. ಜೀವ ವೈವಿಧ್ಯತೆ ಎಂಬುದು ಪುಸ್ತಕಕ್ಕೆ ಸೀಮಿತವಾಗುತ್ತದೆ.
ಹೇಮಾವತಿ, ನೇತ್ರಾವತಿ, ಪಯಸ್ವಿನಿ ನದಿಪಾತ್ರಕ್ಕೂ ತೀವ್ರ ಹಾನಿಯಾಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಬೈರಾಪುರದಿಂದ ಶಿಶಿಲಕ್ಕೆ ರಸ್ತೆ ನಿರ್ಮಾಣ ಅನಗತ್ಯವಾಗಿದೆ. ಆದರೂ, ಈಗ ಇರುವ ಚಾರ್ಮಾಡಿ ಘಾಟಿನ ಮಾರ್ಗಕ್ಕೆ ಬದಲಾಗಿ ನಿರ್ಮಿಸಲು ಉದ್ದೇಶಿಸಿರುವ ಈ ರಸ್ತೆ ಯೋಜನೆಯಿಂದ ರಸ್ತೆ ಗುತ್ತಿಗೆದಾರರು ಹಾಗೂ ಟಿಂಬರ್ ಲಾಬಿಕೋರರಿಗೆ ಮಾತ್ರ ಲಾಭವಾಗಲಿದೆ.

ಭೈರಾಪುರ ಹಾಗೂ ಶಿಶಿಲ ಅರಣ್ಯ ಪ್ರದೇಶವು ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಬಂದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಡೆಸಿದ ಸಮೀಕ್ಷೆಯಲ್ಲಿ ಇದನ್ನು ಮುಚ್ಚಿಡಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ರಸ್ತೆ ನಿರ್ಮಾಣ ಮಾಡಿ ಅದು ಪ್ರಧಾನಿ ಮಂತ್ರಿ ಅವರ ಸುವರ್ಣ ಚತುಷ್ಪಥವಾದರೂ ಸರಿ, ಮತ್ತೊಂದಾರೂ ಸರಿ, ನಮಗೆ ಬೇಡ ಎಂದು ಮೂಡಿಗೆರೆಯ ನೇಚರ್ ಕ್ಲಬ್ ನ ಧನಂಜಯ ಜೀವಾಳ ಅವರು ಹೇಳಿದ್ದಾರೆ.
ಶಿಶಿಲ -ಭೈರಾಪುರ ರಸ್ತೆ ನಿರ್ಮಾಣ ವಿರೋಧಿಸಿ ನಡೆಸಿರುವ ಈ ಆನ್ ಲೈನ್ ಅಭಿಯಾನಕ್ಕೆ ಗುಲಗಂಜಿ ತಂಡ, ಹಕ್ಕಿಪುಕ್ಕ.ಕಾಂ, ಪೂರ್ಣಚಂದ್ರತೇಜಸ್ವಿ ಫೇಸ್ಬುಕ್ ಪುಟ ಮುಂತಾದ ಸಮಾನ ಮನಸ್ಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ನೀವು ಅಭಿಯಾನದಲ್ಲಿ ಪಾಲ್ಗೊಳ್ಳಲು ಕ್ಲಿಕ್ ಮಾಡಿ.












Click it and Unblock the Notifications