Onion Price: ಟೊಮೆಟೊ ಬಳಿಕ ಈರುಳ್ಳಿ ಸಖತ್ ಕಾಸ್ಟ್ಲಿ ಗುರೂ!
ಬೆಂಗಳೂರು: ಈರುಳ್ಳಿ ಅಡುಗೆ ಮನೆಯ ಡೈಮಂಡ್ ಇದ್ದಂತೆ. ಬಹುತೇಕರ ಮನೆಯಲ್ಲಿ ಈರುಳ್ಳಿ ಇಲ್ಲದೆ ಅಡುಗೆಯೇ ಅಪೂರ್ಣ. ಹೀಗಾಗಿ ಈರುಳ್ಳಿ ದಿನನಿತ್ಯ ಬಳಸುವ ವಸ್ತುಗಳ ಪೈಕಿ ಒಂದಾಗಿದೆ. ಆದ್ರೆ ಈರುಳ್ಳಿ ರೇಟ್ ಹೆಚ್ಚಾದಗಲೇ ಗೊತ್ತಾಗೋದು ಅದರ ನಿಜವಾದ ಬೆಲೆ ಏನು ಅಂತಾ. ಈಗಲೂ ಅಷ್ಟೇ ಟೊಮೆಟೊ ಬಳಿಕ ಈರುಳ್ಳಿ ಬೆಲೆ ಆಕಾಶ ಮುಟ್ಟಿ, ಶಾಕ್ ಮೇಲೆ ಶಾಕ್ ಕೊಡ್ತಾ ಇದೆ.
ಜುಲೈ ತನಕ ಸಾಮಾನ್ಯವಾಗೇ ಇದ್ದ ಈರುಳ್ಳಿ, ಈ ತಿಂಗಳ ಆರಂಭದಿಂದ ತನ್ನ ಆರ್ಭಟ ತೋರಿಸುತ್ತಿದೆ. ಆಗಸ್ಟ್ ಮೊದಲ ವಾರದಿಂದಲೇ ಈರುಳ್ಳಿ ಬೆಲೆ ಏರಿಕೆ ಶುರುವಾಗಿತ್ತು. ಈ ನಡುವೆ ಗ್ರಾಹಕರು ಕೂಡ ಈರುಳ್ಳಿ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಈಗ ಕೇವಲ ಒಂದೇ ವಾರದ ಅಂತರದಲ್ಲಿ ಬರೋಬ್ಬರಿ ಶೇಕಡಾ 60ರಷ್ಟು ಬೆಲೆ ಹೆಚ್ಚಿಸಿಕೊಂಡಿದೆ ಈ ಈರುಳ್ಳಿ. ಹೀಗೆ ಟೊಮೆಟೊ ಬಳಿಕ ಅಡುಗೆ ಮನೆಯಲ್ಲಿ ಮತ್ತೊಂದು ಮಹಾಯುದ್ಧ ಆರಂಭವಾಗಿ, ಮಧ್ಯಮ ವರ್ಗದ ಜನರು ಈರುಳ್ಳಿ ಬಳಸಲು ಹಿಂದೆ-ಮುಂದೆ ನೋಡುವ ಸ್ಥಿತಿ ನಿರ್ಮಾಣ ಆಗಿದೆ.

ಮಳೆ ತಂದ ಈರುಳ್ಳಿ ಸಂಕಷ್ಟ!
ತರಕಾರಿ ಬೆಲೆ ಏರಿಕೆ ಕುಟುಂಬ ನಿರ್ವಹಣೆಗೆ ಸಮಸ್ಯೆ ಮಾಡುತ್ತಿದೆ. ಅದ್ರಲ್ಲೂ ನಿತ್ಯ ಬಳಸುವ ಈರುಳ್ಳಿ ಹಾಗೂ ಟೊಮೆಟೊ ಬೆಲೆ ಏರಿಕೆ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಕರ್ನಾಟಕ ಸೇರಿ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಆಕಾಶದತ್ತ ಮುಖಮಾಡಿದೆ. ಟೊಮೆಟೊ ಇನ್ನೇನು ಹಿಡಿತಕ್ಕೆ ಸಿಕ್ಕಿದೆ ಅಂತಾ ಖುಷಿಯಾಗುವ ವೇಳೆ, ಈರುಳ್ಳಿ ಬೆಲೆ ಗಗನಮುಖಿ ಆಗಿದೆ. ಸಗಟು ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಭಾರಿ ಕುಸಿತ ಕಂಡಿದ್ದು, ಹೀಗಾಗಿ ಸಹಜವಾಗಿ ಬೆಲೆ ಏರಿಕೆ ಕಾಣುತ್ತಿದೆ. ಚಂಡಮಾರುತದ ಎಫೆಕ್ಟ್ ಹಾಗೂ ಅಕಾಲಿಕ ಮಳೆ ಈರುಳ್ಳಿ ಬೆಲೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗ್ತಿದೆ.
ಈರುಳ್ಳಿ ಬೆಲೆಯಲ್ಲಿ 40% ಏರಿಕೆ!
ದಿಢೀರ್ ಈರುಳ್ಳಿ ಬೆಲೆ ಆಕಾಶ ಮುಟ್ಟಿದೆ. ದೇಶದ ವಿವಿಧೆಡೆ ಈಗ ಈರುಳ್ಳಿ ಶಾಕ್ ಕೊಟ್ಟಿದ್ದು, ಹಲವು ಪ್ರಮುಖ ನಗರಗಳಲ್ಲಿ ಈರುಳ್ಳಿ ಈಗಾಗಲೇ ಶೇ.60ರಷ್ಟು ಏರಿಕೆ ಕಂಡಿದೆ. 30 ರೂ. ಆಸುಪಾಸಿನಲ್ಲಿ ಸಿಗುತ್ತಿದ್ದ ಉತ್ತಮ ಗುಣಮಟ್ಟ ಈರುಳ್ಳಿ ಈಗ ಅರ್ಧ ಶತಕ ಭಾರಿಸಿದೆ. ಹೀಗೆ ದೇಶದ ಜನ ಟೊಮೆಟೊ ಬಳಿಕ ಮತ್ತೊಂದು ತರಕಾರಿ ಬೆಲೆಗೆ ಪರದಾಡುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಇದೆಲ್ಲಾ ನೋಡುತ್ತಿದ್ರೆ ಈಗ ಅಡುಗೆ ಮನೆಯಲ್ಲಿ ಟೆನ್ಷನ್ ಶುರುವಾಗಿದೆ, ಹಂಗೋ ಹಿಂಗೋ ಟೊಮೆಟೊ ಹಿಡಿತಕ್ಕೆ ಸಿಕ್ಕಿದೆ. ಆದ್ರೆ ಈಗ ಈರುಳ್ಳಿ ಮಧ್ಯಮ ಮತ್ತು ಬಡ ವರ್ಗದ ಬಿಪಿ ಹೆಚ್ಚಿಸುತ್ತಿದೆ.

ಈರುಳ್ಳಿ ಬೆಲೆ ಏರಿಕೆಗೆ ಕಾರಣಗಳು
ಲಾಸಲ್ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಕುಸಿತ ಕಂಡಿದೆ. ಸಾಮಾನ್ಯವಾಗಿ ನಿತ್ಯ 20,000ದಿಂದ 25,000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್ಗಾಂವ್ಗೆ ಬರ್ತಿತ್ತು. ಆದ್ರೆ ಈಗ ಸುಮಾರು 15,000 ಕ್ವಿಂಟಲ್ ಬರುತ್ತಿದ್ದು ಬೆಲೆ ಭಾರಿ ಏರುತ್ತಿದೆ. ಇನ್ನೊಂದು ಕಡೆ ಬಾಂಗ್ಲಾದಲ್ಲಿ ಈರುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ಇದರ ಜೊತೆಗೆ ಏಪ್ರಿಲ್ನಲ್ಲಿ ಸುರಿದ ಭಾರಿ ಮಳೆ ರಾಜಸ್ತಾನ, ಮಹಾರಾಷ್ಟ್ರ ಸೇರಿದಂತೆ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಹಿನ್ನಡೆಗೆ ಕಾರಣವಾಗಿದೆ. ಬೆಳೆ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ತಿಕ್ಕಾಟ ಶುರುವಾಗಿದೆ. ಈ ಹಿನ್ನೆಲೆ ದೇಶದಲ್ಲಿ ಈರುಳ್ಳಿಯ ಬೆಲೆ ಮುಗಿಲು ಮುಟ್ಟುತ್ತಿದೆ ಎನ್ನಲಾಗಿದೆ.

ಒಟ್ನಲ್ಲಿ ಈರುಳ್ಳಿ ಬೆಲೆ ಏರಿಕೆ ಮಧ್ಯಮ ವರ್ಗಕ್ಕೆ ಮತ್ತೊಂದು ಶಾಕ್ ಕೊಟ್ಟಿದೆ. ಮೊದಲೇ ಬೆಲೆ ಏರಿಕೆಯ ಬಲೆಯಲ್ಲಿ ನರಳುತ್ತಿರುವ ಜನರಿಗೆ ಈರುಳ್ಳಿ ಕೂಡ ಆಘಾತ ಕೊಟ್ಟಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದೆ. ಆದ್ರೆ ಇದು ವರ್ಕೌಟ್ ಆದಂತೆ ಕಾಣುತ್ತಿಲ್ಲ. ಹೀಗಾಗಿ ಬೆಲೆ ಆಕಾಶಕ್ಕೆ ತಲುಪುತ್ತಿದ್ದು, ಮುಂದಿನ ದಿನಗಳಲ್ಲಿ ಭಾರಿ ಏರಿಕೆ ಕಾಣುವ ನಿರೀಕ್ಷೆ ಇದೆ. ಬೆಲೆ ಹೀಗೆ ಹೆಚ್ಚಾದರೆ ಈರುಳ್ಳಿಯ ಬೆಲೆ ಶತಕ ಬಾರಿಸುವುದು ಗ್ಯಾರಂಟಿ.












Click it and Unblock the Notifications