ಜೆಡಿಎಸ್ ನಲ್ಲೂ "ಸಮಾನ ಮನಸ್ಕ ಅತೃಪ್ತ ಶಾಸಕರು": 2ನೇ ವಿಕೆಟ್ ಡೌನ್?
'ಸಮಾನ ಮನಸ್ಕರು' ಎನ್ನುವ ಪದದ ಕಾಪಿರೈಟ್ ಬರೀ ಕಾಂಗ್ರೆಸ್ಸಿಗೆ ಸೀಮಿತವಾದದಲ್ಲ. ಜೆಡಿಎಸ್ ನಲ್ಲೂ ಆ ರೀತಿಯ ಬೆಳವಣಿಗೆಗೆ ದೂರದ ಮಲೇಷ್ಯಾ ಇತ್ತೀಚೆಗೆ ಸಾಕ್ಷಿಯಾಗಿತ್ತು.
ಕುಮಾರಸ್ವಾಮಿ ಸರಕಾರದ ವೇಳೆ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಸೇರಿದಂತೆ ಕೆಲವು ಸಮಾನ ಮನಸ್ಕ ಶಾಸಕರು ಸಭೆ ನಡೆಸಿದ್ದೇ ನಡೆಸಿದ್ದು. ಆದರೆ, ಇವರು ನಡೆಸಿದ ಸಭೆಯ ಬಿಸಿ, ಎಚ್ಡಿಕೆ ಸರಕಾರಕ್ಕ ತಟ್ಟಿರಲೇ ಇಲ್ಲ.
ಕೊನೆಗೂ, ಕಾಂಗ್ರೆಸ್ಸಿನ ಸಮಾನ ಮನಸ್ಕರೆಲ್ಲಾ ರಾಜೀನಾಮೆ ನೀಡಿದರು. ಅಲ್ಲಿಗೆ, ಕುಮಾರಸ್ವಾಮಿ ಸರಕಾರ ಪತನಗೊಳ್ಳಲು, ತಮ್ಮ ದೇಣಿಗೆಯನ್ನು ಅವರೆಲ್ಲಾ ನೀಡಿದಂತಾಯಿತು. ಇದು ಒಂದು ಆಯಾಮ, ಇನ್ನೊಂದು ಆಯಾಮ, ಜೆಡಿಎಸ್ ನಲ್ಲೂ ಈ ರೀತಿಯ 'ಬಣ ರಾಜಕೀಯ' ಆರಂಭವಾಗಿದೆ ಮತ್ತು ಸಕ್ರಿಯವಾಗಿದೆ.
ಜೆಡಿಎಸ್ಸಿನಲ್ಲಿ 'ಕುಟುಂಬ ರಾಜಕಾರಣ' ಎನ್ನುವ ಪದವನ್ನು ಬಳಸಿ ಬಳಸಿ, ಹೈರಾಣವಾಗಿರುವ ಈ ಹೊತ್ತಿನಲ್ಲಿ, ದೇವೇಗೌಡ್ರ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಎಚ್ಡಿಕೆ ಸರಕಾರದಲ್ಲಿ ಸಚಿವರಾಗಿದ್ದ, ಜೆಡಿಎಸ್ ಶಾಸಕರೊಬ್ಬರು, ಬಹುತೇಕ ಪಕ್ಷದಿಂದ ಹೊರನಡೆಯಲು ಎರಡೂ ಕಾಲನ್ನು ಹೊರಗಿಟ್ಟಿದ್ದಾರೆ.

ದೇವೇಗೌಡ್ರಿಗೆ, ರಾಜ್ಯ ರಾಜಕೀಯದ ಸೂಕ್ಷ್ಮತೆಯ ಅರಿವಾಗಿರಬಹುದು
ಖುದ್ದು ತಾವೇ ತುಮಕೂರಿನಲ್ಲಿ ಪರಾಭವಗೊಂಡ ನಂತರ, ದೇವೇಗೌಡ್ರಿಗೆ, ರಾಜ್ಯ ರಾಜಕೀಯದ ಸೂಕ್ಷ್ಮತೆಯ ಅರಿವಾಗಿರಬಹುದು. ಅದಕ್ಕೋ ಏನೋ, ಪಕ್ಷದ ಮುಖಂಡರ, ಪದಾಧಿಕಾರಿಗಳ ಸಾಲುಸಾಲು ಸಭೆಯನ್ನು ನಡೆಸಿದ್ದರು. ಪಕ್ಷದಿಂದ ಯಾರೂ ಹೊರನಡೆಯಬಾರದು ಎನ್ನುವುದು ಗೌಡ್ರ ಉದ್ದೇಶ ಎನ್ನುವುದು ಅತ್ಯಂತ ಸ್ಪಷ್ಟವಾಗಿತ್ತು.

ಅಮೆರಿಕಾಗೆ ಒಕ್ಕಲಿಗ ಸಮುದಾಯದ ಉದ್ಘಾಟನಾ ಕಾರ್ಯಕ್ರಮ
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಆರಂಭದ ದಿನಗಳಲ್ಲಿ (ಜುಲೈ 2019) ಕುಮಾರಸ್ವಾಮಿ, ಅಮೆರಿಕಾಗೆ ಒಕ್ಕಲಿಗ ಸಮುದಾಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಿದ್ದರು. ಅದಾದ ನಂತರ, ಮಲೇಷ್ಯಾಗೂ ಹೋಗಿದ್ದರು. ಆವೇಳೆ, ಜೆಡಿಎಸ್ ಶಾಸಕರೂ ಅಲ್ಲಿಗೆ ಪ್ರಯಾಣ ಬೆಳೆಸಿದ್ದರು. ಬಹುತೇಕ ಹಳೇ ಮೈಸೂರು ಭಾಗದ ಶಾಸಕರಾಗಿದ್ದ ಇವರುಗಳೇ, 'ಜೆಡಿಎಸ್ಸಿನ ಸಮಾನ ಮನಸ್ಕ ಶಾಸಕರು' ಎನ್ನುವ ಮಾತಿದೆ.

ಸಿದ್ದರಾಮಯ್ಯನವರನ್ನು ಸೋಲಿಸಿದ ಜೆಡಿಎಸ್ ಶಾಸಕ
ಸಿದ್ದರಾಮಯ್ಯನವರನ್ನು ಸೋಲಿಸಿದ ಜೆಡಿಎಸ್ ಶಾಸಕ ಎನ್ನುವ ಗೌರವ, ಜಿ.ಟಿ.ದೇವೇಗೌಡರಿಗೆ, ಸಂಪುಟ ವಿಸ್ತರಣೆಯ ವೇಳೆ ಸಿಗಲಿಲ್ಲ. ತಮಗೆ ಬೇಡವಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಗೆ ಒಲ್ಲೆಯೆಂದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರೂ, ಅದೇ ಖಾತೆಯನ್ನು ನಿರ್ವಹಿಸದೇ ಅವರಿಗೆ ಬೇರೆ ದಾರಿಯಿರಲಿಲ್ಲ. ಮೋದಿ ಮೇಲೆ ಪ್ರೇಮ, ಗೌಡ್ರ ಮೇಲೆ ಸಿಟ್ಟಿಗೆ, ಕಾರಣವಾಗಿದ್ದು ಇದೇ ವೇದಿಕೆ.

ಮೋದಿ ಮೇಲೆ ಪ್ರೇಮ, ಗೌಡ್ರ ಮೇಲೆ ಜಿಟಿಡಿ ಸಿಟ್ಟು
ಅಲ್ಲಿಂದ, ಆರಂಭವಾದ ಜಿಟಿಡಿಯವರ ಹೊಸ ರಾಜಕೀಯ ಹೆಜ್ಜೆ, ಗೌಡ್ರ ಮನೆಬಾಗಿಲಿನಿಂದ ದೂರಸಾಗುತ್ತಲೇ ಬಂದು, ಬಿಜೆಪಿ ಹೊಸ್ತಿಲಿಗೆ ಬಂದು ನಿಂತಿದೆ. "ಜಿಟಿ ದೇವೇಗೌಡ ಅವರು ಜೆಡಿಎಸ್ ಸಖ್ಯ ಕಡಿದುಕೊಂಡಿದ್ದಾರೆಯೇ?" ಎನ್ನುವ ಪ್ರಶ್ನೆಯನ್ನು ಮಾಧ್ಯಮದವರು ಎತ್ತಿದ್ದರು. ಅದಕ್ಕೆ, "ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ, ಆಗ ನಿಮಗೆಲ್ಲರಿಗೂ ಹೋಳಿಗೆ ಊಟ ಹಾಕಿಸುತ್ತೇನೆ" ಎಂದು ಗೌಡ್ರು ಹೇಳಿದ್ದಾರೆ. ಸೂಚ್ಯವಾಗಿ ಹೋಗುವವರು ಹೋಗಲಿ ಎನ್ನುವಂತಿತ್ತು ಗೌಡ್ರ ಹೇಳಿಕೆ.

ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್
ಈಗ, ತುಮಕೂರು ಜಿಲ್ಲೆಯ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬಹುತೇಕ ಜೆಡಿಎಸ್ ನಿಂದ ಹೊರನಡೆಯುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯಿದೆ. ಡಿ.ಕೆ.ಶಿವಕುಮಾರ್ ಬಂಧನದ ವಿರುದ್ದ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಕುಮಾರಣ್ಣ ಭಾಗವಹಿಸಲಿಲ್ಲ ಎಂದು, ಬಹಿರಂಗವಾಗಿಯೇ ಗೌಡ್ರ ಕುಟುಂಬದ ವಿರುದ್ದ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದರು.

ಹಾಲೀ ಅಸೆಂಬ್ಲಿ ಮುಗಿಯುವವರೆಗೆ ನಾನು ಪಕ್ಷ ಬಿಡುವುದಿಲ್ಲ. ಮುಂದೆ, ನನ್ನ ನಿರ್ಧಾರ ನನಗೆ
ಮೂಲಗಳ ಪ್ರಕಾರ, ಶ್ರೀನಿವಾಸ್, ಜೆಡಿಎಸ್ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಇವರ ಪ್ರೀತಿ, ಬಿಜೆಪಿಯ ಮೇಲಲ್ಲ, ಬದಲಿಗೆ ಕಾಂಗ್ರೆಸ್ ಮೇಲೆ. " ಹಾಲೀ ಅಸೆಂಬ್ಲಿ ಮುಗಿಯುವವರೆಗೆ ನಾನು ಪಕ್ಷ ಬಿಡುವುದಿಲ್ಲ. ಮುಂದೆ, ನನ್ನ ನಿರ್ಧಾರ ನನಗೆ" ಎಂದು ಬಹಿರಂಗವಾಗಿಯೇ ಶ್ರೀನಿವಾಸ್ ಹೇಳಿಕೆಯನ್ನು ನೀಡಿದ್ದಾರೆ. ಹಾಗಾಗಿ, ಜಿ.ಟಿ.ದೇವೇಗೌಡ ನಂತರ ಎಸ್. ಆರ್.ಶ್ರೀನಿವಾಸ್ ಅವರ ವಿಕೆಟ್ ಪತನವಾದರೆ ಆಶ್ಚರ್ಯವಿಲ್ಲ.












Click it and Unblock the Notifications