ಇಬ್ಬರು ಪಕ್ಷೇತರರಲ್ಲಿ ಒಬ್ಬರು ಮಾತ್ರ ಸದನಕ್ಕೆ ಹಾಜರು ಸಾಧ್ಯತೆ
ಬೆಂಗಳೂರು, ಜುಲೈ 23: ಇಬ್ಬರು ಪಕ್ಷೇತರ ಶಾಸಕರಲ್ಲಿ ಒಬ್ಬರು ಮಾತ್ರವೇ ಇಂದು ವಿಶ್ವಾಸಮತ ಯಾಚನೆ ಸಂದರ್ಭ ಹಾಜರಾಗುತ್ತಾರೆ ಎನ್ನಲಾಗಿದೆ.
ಮುಳಬಾಗಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಮಾತ್ರವೇ ಇಂದು ವಿಶ್ವಾಸಮತ ಯಾಚನೆ ಸಂದರ್ಭ ಸದನಕ್ಕೆ ಬರುತ್ತಾರೆ, ಮತ್ತೊಬ್ಬ ಶಾಸಕ ಆರ್.ಶಂಕರ್ ಅವರು ಇಂದು ಸದನಕ್ಕೆ ಬರುವುದಿಲ್ಲ.
ಈಗಾಗಲೇ ಶಾಸಕರ ಎಚ್.ನಾಗೇಶ್ ಅವರನ್ನು ವಿಧಾನಸೌಧದ ಬಳಿಯ ಸಮೀಪದ ಹೊಟೆಲ್ನಲ್ಲಿ ತಂದು ಇರಿಸಲಾಗಿದ್ದು, ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗುವುದಕ್ಕೆ ಹತ್ತು ನಿಮಿಷ ಮೊದಲು ಅವರನ್ನು ಸದನಕ್ಕೆ ಕರೆದುಕೊಂಡು ಬರಲು ಬಿಜೆಪಿಯವರು ಯೋಜನೆ ಹಾಕಿಕೊಂಡಿದ್ದಾರೆ.

ವಿಶ್ವಾಸಮತ ಆರಂಭವಾದ ದಿನ ಗುರುವಾರವೇ ಬಿಜೆಪಿಯ ಆರ್.ಅಶೋಕ್ ಹಾಗೂ ಅಶ್ವಥ್ನಾರಾಯಣ ಅವರ ಜೊತೆ ಎಚ್.ನಾಗೇಶ್ ಒಬ್ಬರೇ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು. ಅಂದು ಬೆಳಂಬೆಳಿಗ್ಗೆ ಎಚ್.ನಾಗೇಶ್ ಅವರನ್ನು ಆರ್.ಅಶೋಕ್ ಅವರು ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಅವರು ಅಂದಿನಿಂದಲೂ ಬೆಂಗಳೂರಿನ ಹೊಟೆಲ್ ಒಂದರಲ್ಲಿ ಇದ್ದಾರೆ ಎನ್ನಲಾಗಿದೆ.
ಪಕ್ಷೇತರ ಎಂದೇ ಗುರುತಿಸಲಾಗುತ್ತಿರುವ ಆರ್.ಶಂಕರ್ ಅವರು ಕೆಪಿಜೆಪಿ ಪಕ್ಷದಿಂದ ಗೆದ್ದಿದ್ದರು. ಆದರೆ ಕೆಲವು ದಿನಗಳ ಹಿಂದೆ ಅವರಿಗೆ ಎರಡನೇ ಬಾರಿ ಸಚಿವ ಸ್ಥಾನ ನೀಡಿದಾಗ ಅವರು ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನ ಮಾಡಿದ್ದರು. ಹಾಗಾಗಿ ಅವರಿಗೆ ವ್ಹಿಪ್ ಜಾರಿ ಆಗಿದ್ದು ಹಾಗಾಗಿ ಅವರು ಬರುವುದಿಲ್ಲ ಎನ್ನಲಾಗುತ್ತಿದೆ.
ಪಕ್ಷೇತರ ಶಾಸಕರನ್ನು ಕರೆದುಕೊಂಡು ಬಂದಿದ್ದಾರೆ. ವಿಧಾನಸೌಧದಿಂದ ಒಂದೂವರೆ ಕಿ.ಮೀ ದೂರದಲ್ಲಿ ಅವರನ್ನು ಇರಿಸಿದ್ದಾರೆ. ಅವರು ಹೇಗೆ ಸರ್ಕಾರದ ವಿರುದ್ಧ ಮತ ಹಾಕುತ್ತಾರೋ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು.











Click it and Unblock the Notifications