ಜ್ಞಾನ ಇಲ್ಲದವರು ನಮಗೆ ಪಾಠ ಮಾಡುತ್ತಾರೆ: ಡಿಕೆಶಿ ವಿರುದ್ದ ಗಂಭೀರ ಆರೋಪ ಮಾಡಿದ ಆರ್.ಅಶೋಕ್
ಬೆಂಗಳೂರು, ಮೇ 4: ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ಮುಖಂಡರು ನಡೆದ ಕೊಂಡ ರೀತಿ, "ದೊಡ್ಡ ನಾಟಕ" ಎಂದು ಕಂದಾಯ ಸಚಿವ ಆರ್.ಅಶೋಕ್ ಗೇಲಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಶೋಕ್, "ಖಾತೆ ಬದಲಾಯಿಸುವ ಜ್ಞಾನ ಇಲ್ಲದವರು ನಮಗೆ ಸರಕಾರ ಹೇಗೆ ನಡೆಸಬೇಕೆಂದು ಪಾಠ ಮಾಡುತ್ತಾರೆ" ಎಂದು, ಕೆಪಿಸಿಸಿ ಮುಖಂಡರ ಬಗ್ಗೆ ಸಚಿವರು ಲೇವಡಿ ಮಾಡಿದ್ದಾರೆ.
ರಾಜಧಾನಿಯಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಸರಿಯಾಗಿ ನಿಭಾಯಿಸದೇ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಪ್ರಬಲ ಅಸ್ತ್ರವನ್ನು ತಾನಾಗಿಯೇ ಉಡುಗೊರೆ ನೀಡಿತ್ತು.
"ದುಡ್ಡು ಬೇಕಿದ್ದರೆ ಕೇಳಿ, ಭಿಕ್ಷೆ ಎತ್ತಿಯಾದರೂ ಕೊಡುತ್ತೇನೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಅದರಂತೇ, ಹಿರಿಯ ಮುಖಂಡರ ಜೊತೆ ಆಗಮಿಸಿದ್ದ ಡಿಕೆಶಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದು ಕೋಟಿಯ ಚೆಕ್ ಅನ್ನು ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ, ಅಶೋಕ್ ಗಂಭೀರ ಆರೋಪ ಮಾಡಿದ್ದು ಹೀಗೆ..

ಎಂ.ಡಿ, ಕೆಎಸ್ಆರ್ ಟಿಸಿ ಹೆಸರಿನಲ್ಲಿ ಒಂದು ಕೋಟಿ ರೂಪಾಯಿಯ ಚೆಕ್
ಎಂ.ಡಿ, ಕೆಎಸ್ಆರ್ ಟಿಸಿ ಹೆಸರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್, ಒಂದು ಕೋಟಿ ರೂಪಾಯಿಯ ಚೆಕ್ ಅನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಚೇರಿಗೆ ಕಳುಹಿಸಿತ್ತು. ಈ ಚೆಕ್ ನಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಹಿಯಿತ್ತು. ಈ ವಿಚಾರದಲ್ಲಿ, ಸಚಿವ ಅಶೋಕ್, ಡಿಕೆಶಿಯವರ ವಿರುದ್ದ ಗುಡುಗಿದ್ದಾರೆ.

ಬ್ಯಾಂಕ್ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲದವರು
ಡಿ.ಕೆ.ಶಿವಕುಮಾರ್, ನಿನ್ನೆ ನೀಡಿದ್ದ ಚೆಕ್ ಮೇಲೆ ದಿನೇಶ್ ಗುಂಡುರಾವ್ ಅವರ ಸಹಿ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರು ಡಿಕೆಶಿ ತಾನೇ" ಎಂದು ಪ್ರಶ್ನಿಸಿರುವ ಅಶೋಕ್, ಚೆಕ್ ಮೇಲೆ ಡಿಕೆಶಿ ಸಹಿ ಇಲ್ಲ. ಹೀಗಾಗಿ ಈ ಚೆಕ್ ಅಸಲಿ ಹೇಗಾಗುತ್ತದೆ. ಬ್ಯಾಂಕ್ ಖಾತೆ ಬದಲಾವಣೆ ಮಾಡುವ ಜ್ಞಾನ ಇಲ್ಲದವರು, ಬಸ್ ಬಿಡುವ ವಿಚಾರದಲ್ಲಿ ನಮಗೆ ಸಲಹೆ ನೀಡಲು ಬರುತ್ತಾರೆ" ಎಂದು ಅಶೋಕ್, ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಅಂತರವನ್ನು ಕಾಯ್ಡುಕೊಳ್ಳದ ಕಾಂಗ್ರೆಸ್ ಮುಖಂಡರು
"ಯಾವುದೇ ಸಾಮಾಜಿಕ ಅಂತರವನ್ನು ಕಾಯ್ಡುಕೊಳ್ಳದೇ ಕಾಂಗ್ರೆಸ್ ಮುಖಂಡರು ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದರು. ಸೋಂಕು ತಗಲುವ ಸಾಧ್ಯತೆ ಇದೆ ಎನ್ನುವ ಪರಿಜ್ಞಾನ ಇವರಿಗೆ ಬೇಡವೇ. ಇವರೆಲ್ಲರನ್ನೂ ಕ್ವಾರಂಟೈನ್ ಮಾಡುವ ಸಾಧ್ಯತೆ ಮುಂದೆ ಬರಬಹುದು" ಎಂದು ಅಶೋಕ್ ಹೇಳಿದ್ದಾರೆ.

ಡಿಕೆಶಿ ವಿರುದ್ದ ಗಂಭೀರ ಆರೋಪ ಮಾಡಿದ ಆರ್.ಅಶೋಕ್
"ದಿನೇಶ್ ಗುಂಡೂರಾವ್ ಅವರಿದ್ದಾಗ ಯಾವುದೇ ದೇಣಿಗೆ ಯಾರಿಗೂ ಕೊಟ್ಟ ಬಗ್ಗೆ ಮಾಹಿತಿಯಿಲ್ಲ. ಈಗ, ಡಿಕೆಶಿ ಅಧ್ಯಕ್ಷರಾದ ಕೂಡಲೇ ಅಷ್ಟು ದುಡ್ಡು ಎಲ್ಲಿಂದ ಬಂತು. ಕೊಡುವುದಿದ್ದರೆ, ನಿಮ್ಮ ಪಕ್ಷಕ್ಕೆ ಎಷ್ಟು ವರ್ಷದ ಇತಿಹಾಸ ಇದೆಯೋ, ಅಷ್ಟು ಕೋಟಿ ಕೊಡಿ" ಎಂದು, ಅಶೋಕ್, ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದ್ದಾರೆ.












Click it and Unblock the Notifications