ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ
ಬೆಂಗಳೂರು, ಆಗಸ್ಟ್, 07: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ವಾಸನೆ ಎದ್ದಿದೆ. ಇಷ್ಟು ದಿನ ಅತೃಪ್ತರು ಒಂದು ಕಡೆ ಸದ್ದಿಲ್ಲದೆ ಕಾರ್ಯಾಚರಣೆ ಮಾಡುತ್ತಿದ್ದರೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಕರೆದ ಸಭೆಗೆ ಗೈರಾಗುವ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕದ ಬಳಿಕ ಅಸಮಾಧಾನ ಭುಗಿಲೆದ್ದಿರುವ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಕರೆದಿದ್ದ ಮಹತ್ವದ ಬಿಜೆಪಿ ಸಭೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಸೇರಿದಂತೆ ಅತೃಪ್ತರು ಗೈರಾಗಿದ್ದಾರೆ.[ಕರ್ನಾಟಕ ಬಿಜೆಪಿ ಕೋರ್ ಕಮಿಟಿಯಿಂದ ಶೋಭಾ ಔಟ್!]
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಈಶ್ವರಪ್ಪ, ರಘುನಾಥ್ ಮಲ್ಕಾಪುರೆ , ನಿರ್ಮಲ್ ಕುಮಾರ್ ಸುರಾನಾ , ಭಾನುಪ್ರಕಾಶ್ ಮತ್ತು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಗೈರಾಗಿ ಅಸಮಾಧಾನ ಹೊರಕ್ಕೆ ಹಾಕಿದ್ದಾರೆ. ಇಷ್ಟು ದಿನ ಹೊಗೆಯಾಡುತ್ತಿದ್ದ ಬೆಂಕಿ ಇದೀಗ ಮತ್ತೆ ಜ್ವಲಿಸಲು ಆರಂಭಿಸಿದೆ.
ಪದಾಧಿಕಾರಿ ನೇಮಕ
ರಾಜ್ಯ ಬಿಜೆಪಿಗೆ ಜಿಲ್ಲಾ ಅಧ್ಯಕ್ಷರು ಮತ್ತು ವಿವಿಧ ಪದಾಧಿಕಾರಿಗಳ ನೇಮಕವಾದಾಗಲೇ ಭಿನ್ನಮತ ಆರಂಭವಾಗಿತ್ತು. ಪದಾಧಿಕಾರಿಗಳ ನೇಮಕದಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬುದು ಭಿನ್ನರ ಪ್ರಮುಖ ಆರೋಪವಾಗಿತ್ತು.
ವಲಸೆ VS ಮೂಲ ಬಿಜೆಪಿ
ವಲಸೆ ಬಿಜೆಪಿ ಮತ್ತು ಮೂಲ ಬಿಜೆಪಿ ಎಂಬ ಆಧಾರದಲ್ಲಿ ಭಿನ್ನಮತ ಆರಂಭವಾಗಿ ದೂರುಗಳು ದೆಹಲಿ ಅಂಗಣವನ್ನು ತಲುಪಿದ್ದವು.
ಈಶ್ವರಪ್ಪ ದೂರು
ನಂತರ ದೆಹಲಿಗೆ ತೆರಳಿದ್ದ ಕೆ ಎಸ್ ಈಶ್ವರಪ್ಪ , ಬಿಎಸ್ ವೈ ಬಗ್ಗೆ ಹೈಕಮಾಂಡಿಗೆ ದೂರು ಸಲ್ಲಿಕೆ ಮಾಡಿ ಬಂದಿದ್ದರು.
ಈಶ್ವರಪ್ಪ ಏಕಾಂಗಿ
ಆದರೆ ನಂತರ ಬಿಎಸ್ ವೈ ಕರೆದ ಸಭೆಗೆ ಎಲ್ಲ ನಾಯಕರು ಹಾಜರಾಗಿ ಈಶ್ವರಪ್ಪ ಅವರನ್ನು ಏಕಾಂಗಿ ಯಾಗಿ ಮಾಡಿದ್ದರು. ಭಿನ್ನಮತೀಯ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇದೇ ವೇಳೆ ಗುಡುಗಿದ್ದರು.
ಶೋಭಾಗೆ ಸ್ಥಾನವಿಲ್ಲ
ಕರ್ನಾಟಕ ಬಿಜೆಪಿ ಕೋರ್ ಕಮಿಟಿಯನ್ನು ಪುನರ್ ರಚನೆ ಮಾಡಿದ ಬಿಜೆಪಿ ಹೈ ಕಮಾಂಡ್ 12 ಜನರ ಕೋರ್ ಕಮಿಟಿಯಿಂದ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಆಪ್ತರಾಗಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆಗೆ ಅವರನ್ನು ಹೊರಗಿಟ್ಟು ಶಾಕ್ ನೀಡಿತ್ತು.ಸ್ಥಾನ ನೀಡಲಾಗಿಲ್ಲ.
ಎಲ್ಲ ಸರಿಯಾಗಿತ್ತು
ವಿಧಾನಸಭೆ ಕಲಾಪಕ್ಕೂ ಮುನ್ನ ಜುಲೈ 04 ರಂದು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಎಸ್ ವೈ ಮತ್ತು ಮುನಿಸಿಕೊಂಡಿದ್ದ ಕೆ ಎಸ್ ಈಶ್ವರಪ್ಪ ಅಕ್ಕಪಕ್ಕದಲ್ಲೇ ಕುಳಿತು ಮುಂದಿನ ಹೋರಾಟ ಮತ್ತು ಪಕ್ಷ ಸಂಘಟನೆಗಳ ಕುರಿತು ಮಾತನಾಡಿದ್ದರು.
ಟೀಮ್ ಬದಲಾವಣೆ
ಹಿಂದಿನ ಬಾರಿ ಭಿನ್ನರ ಗುಂಪಲ್ಲಿ ಕಾಣಿಸಿಕೊಂಡಿದ್ದ ಸಿಟಿ ರವಿ ಮತ್ತು ಅರವಿಂದ ಲಿಂಬಾವಳಿ ಈ ಬಾರಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ನಿರ್ಮಲ್ ಕುಮಾರ್ ಸುರಾನಾ ,ಭಾನುಪ್ರಕಾಶ್ ಮತ್ತು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಈಶ್ವರಪ್ಪ ಕಡೆ ನಿಂತಿದ್ದಾರೆ ಎನ್ನಲಾಗಿದೆ.