ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕೋವಿಡ್ ರೂಪಾಂತರ ತಳಿ 'ಒಮಿಕ್ರೋನ್' ಬಗ್ಗೆ ಏನು ಹೇಳಿದ್ದಾರೆ
ಬೆಂಗಳೂರು, ನ.27: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ 19 ರೂಪಾಂತರ ತಳಿ B.1.1529 (ಒಮಿಕ್ರೋನ್) ಬಗ್ಗೆ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದಾರೆ.
ಆಫ್ರಿಕನ್ ದೇಶಗಳಲ್ಲಿ ಕಂಡುಬಂದಿರುವ ಹೊಸ ತಳಿಯಿಂದ ಸದ್ಯಕ್ಕೆ ನಮ್ಮ ರಾಜ್ಯಕ್ಕೆ ಯಾವುದೇ ಆತಂಕ ಇಲ್ಲ. ಹಾಗಂತ ನಿರ್ಲಕ್ಷ್ಯವನ್ನೂ ಮಾಡುವಂತಿಲ್ಲ ಎಂದು ಅವರು ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಈಗಾಗಲೇ ಕಂಡುಬಂದಿದ್ದ ರೂಪಾಂತರ ತಳಿ ಡೆಲ್ಟಾ ವೈರಸ್ಗಿಂತ ಈಗ ಆಫ್ರಿಕನ್ ದೇಶಗಳಲ್ಲಿ ಕಂಡುಬಂದಿರುವ 'ಒಮಿಕ್ರಾನ್' ಪರಿಣಾಮಕಾರಿಯೇ ಎಂಬುದು ಇನ್ನು ಸಂಶೋಧನೆ ನಡೆಯುತ್ತಿದೆ. ಒಮಿಕ್ರಾನ್ ಬಹಳ ಬೇಗ ಹರಡುತ್ತದೆ ಎಂದು ಹೇಳಲಾಗಿದೆ. ಆದರೆ, ಇದರ ಲಕ್ಷಣಗಳ ಬಗ್ಗೆ ಸಂಪೂರ್ಣ ವರದಿ ಬಂದಿಲ್ಲ ಎಂದು ಅವರು ಹೇಳಿದರು.

'ಒಮಿಕ್ರಾನ್' ಎಂಬ ರೂಪಾಂತರ ತಳಿಯ ಬಗ್ಗೆ ರಾಜ್ಯದ ಆರೋಗ್ಯ ಅಧಿಕಾರಿಗಳು ಈಗಾಗಲೇ ಚರ್ಚಿಸಿ, ರಾಜ್ಯದಲ್ಲಿ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಇರುವ ವರದಿಯ ಪ್ರಕಾರ ಜನರು ಯಾವುದೇ ಆತಂಕಪಡುವ ಅಗ್ಯವಿಲ್ಲ ಎಂದು ಹೇಳಿದರು.
ವಿದೇಶಗಳಿಂದ ಮುಖ್ಯವಾಗಿ ಆಫ್ರಿಕನ್ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರ ಮೇಲೆ ತೀವ್ರ ನಿಗಾವಹಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡಲಾಗುತ್ತದೆ. ಯಾರಲ್ಲಿಯಾದರೂ ರೋಗದ ಲಕ್ಷಗಳು ಇರುವುದು ಕಂಡುಬಂದರೆ ಅವರನ್ನು ಪ್ರತ್ಯೇಕವಾಗಿ ಇರಿಸಿ, ನಿಗಾ ವಹಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರವೂ ಸಹ ಈ ಬಗ್ಗೆ ಚರ್ಚಿಸಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬಹುದು. ಅದರಂತೆ ರಾಜ್ಯದಲ್ಲಿ ಮತ್ತೆ ಬದಲಾವಣೆ ಮಾಡಲಾಗುವುದು ಎಂದೂ ಸಚಿವರು ಹೇಳಿದರು.
45 ಲಕ್ಷ ಜನರಿಗೆ ಎರಡನೇ ಡೋಸ್ ಬಾಕಿ
ಲಸಿಕೆ ಲಭ್ಯವಿಲ್ಲದ ಸಂದರ್ಭದಲ್ಲಿ ಲಸಿಕೆ ಕೊಡಿ ಎಂಬ ಆಹಾಕಾರ ಕೇಳಿಬರುತ್ತಿತ್ತು. ಆದರೆ, ಈಗ ಲಸಿಕೆ ಲಭ್ಯವಿದೆ. ಎಲ್ಲ ಆಸ್ಪತ್ರೆಗಳು ಸೇರಿ ರಾಜ್ಯದಲ್ಲಿ 70 ಲಕ್ಷ ಡೋಸ್ ಲಸಿಕೆ ಉಳಿದಿದೆ. ಜನರು ಕೂಡಲೇ ಲಸಿಕೆ ಪಡೆಯಬೇಕು ಎಂದರು.
ಒಂದನೇ ಡೋಸ್ ಪಡೆದು, ಎರಡನೇ ಡೋಸ್ಗೆ ಬಾಕಿ ಇರುವಂತಹ ಸುಮಾರು 45 ಲಕ್ಷ ಜನ ಇದ್ದಾರೆ. ಅವರು ಯಾವುದೇ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಸಮೀಪದ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಬೇಕು. ಎರಡೂ ಡೋಸ್ ಲಸಿಕೆ ಪಡೆದರೆ ಮಾತ್ರ ಕೋವಿಡ್ ಸಂಬಂಧಿತ ಯಾವುದೇ ಹೊಸ ತಳಿಯ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ವರದಿಗೆ ಕಳುಹಿಸಲಾಗಿದೆ
ಧಾರವಾಡದ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದು, ಬೆಂಗಳೂರಿನ ಬೊಮ್ಮಸಂದ್ರ ಶಾಲೆ, ಮೈಸೂರಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಇರುವುದು ಪತ್ತೆಯಾಗಿದೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.
ಈ ಎಲ್ಲಾ ವಿದ್ಯಾರ್ಥಿಗ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಯಾವ ವಿದ್ಯಾರ್ಥಿಗಳಲ್ಲಿಯೂ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ ಎಂಬುದು ಸಮಾಧಾನದ ವಿಷಯ. ಈ ಬಗ್ಗೆ ನಿಗಾ ವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.












Click it and Unblock the Notifications