ಪರಿಷತ್ನಲ್ಲಿ ದೋಸೆ, ಮುದ್ದೆ, ದೊನ್ನೆ ಬಿರಿಯಾನಿ!
ಬೆಂಗಳೂರು, ಫೆ.13 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯರಿಗೆ ಗುರುವಾರ ಸೆಟ್ ದೋಸೆ, ನಾಟಿ ಕೋಳಿ, ಮುದ್ದೆ, ಕಾಲುಸೂಪು ಹಾಗೂ ದೊನ್ನೆ ಬಿರಿಯಾನಿಯನ್ನು ನೆನಪು ಮಾಡಿಕೊಟ್ಟರು. ಸ್ವಾರಸ್ಯಕರವಾದ ಚರ್ಚೆಯಲ್ಲಿ ಸಿಎಂ ಮೈಸೂರಿನಲ್ಲಿ ದೊರೆಯುವ ತಿಂಡಿಗಳನ್ನು ನೆನಪು ಮಾಡಿಕೊಂಡರು.
ಬಿಜೆಪಿ ಸದಸ್ಯ ರಾಮಚಂದ್ರಗೌಡರ ಗಮನ ಸೆಳೆಯುವ ವಿಷಯದ ಕುರಿತು ಉತ್ತರಿಸಲು ನಿಂತ ಮುಖ್ಯಮಂತ್ರಿಗಳು ರಾಮಚಂದ್ರೇಗೌಡರಿಗೆ ಬೆಂಗಳೂರಿನ ಗಲ್ಲಿ ಗಲ್ಲಿಗಳ ಪರಿಚಯವಿದೆಯೆಂದು ಪ್ರಸ್ತಾಪಿಸಿದರು. ಅದೇ ರೀತಿ ಮೈಸೂರಿನ ಗಲ್ಲಿ ಗಲ್ಲಿಯೂ ತಮಗೆ ಪರಿಚಯವಿದೆ ಎಂದು ಮಾತು ಆರಂಭಿಸಿದರು.

ಮೈಸೂರಿನಲ್ಲಿ ಒಂದೂವರೆ ಅಣೆ ಎಂಬ ಗಲ್ಲಿಯಿತ್ತು. ಅಲ್ಲಿ ಯಾವುದೇ ವಸ್ತುಗಳೂ ತಿಂಡಿ ತಿನಿಸುಗಳು ಒಂದೂವರೆ ಆಣೆಗೆ ಸಿಗುತ್ತಿದ್ದುದರಿಂದ ಆ ಗಲ್ಲಿಗೇ ಒಂದೂವರೆ ಆಣೆ ಎಂಬ ಹೆಸರು ಬಂದಿತ್ತು ಎಂದು ಪರಿಷತ್ ಸದಸ್ಯರಿಗೆ ತಿಳಿಸಿದರು. [ಕಲಾಪಕ್ಕೆ ಶಾಸಕರು ಚಕ್ಕರ್ ಆದರೂ ಪೂರ್ಣ ಸಂಬಳ]
ಆಹಾ ಸೆಟ್ ದೋಸೆ : ಆ ದಿನಗಳಲ್ಲಿ 12 ಪೈಸಗೆ ಸೆಟ್ ದೋಸೆ ಸಿಗುತಿತ್ತು ಎಂದಾಗ ಮೈಸೂರಿನವರಾದ ಗೋ ಮಧುಸೂಧನ್ ಅವರು ಅಗ್ರಹಾರದಲ್ಲಿದ್ದ ಹೋಟೆಲ್ನ ಸೆಟ್ದೋಸೆಯನ್ನು ನೆನಪುಮಾಡಿಕೊಟ್ಟರು. ಮೈಸೂರಿನ ಮೈಲಾರಿ, ಚೆಡ್ಡಿ ಹೋಟೆಲ್, ಗುರುಮಲ್ಲು ಚಪಾತಿ ಸೆಂಟರ್ ನಲ್ಲಿ ಸಿಗುತ್ತಿದ್ದ ಮದುವೆ ಊಟದ ರುಚಿಯನ್ನು ಸಿಎಂ ಸದಸ್ಯರಿಗೆ ವರ್ಣಿಸಿದರು.
ಗೋ ಮಧುಸೂಧನ್ ಅವರು ಶ್ರೀ ಹೋಟೆಲ್ ಬಗ್ಗೆ ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ಅವರು ಶ್ರೀ ಹೋಟೆಲ್ ನಾಟಿ ಕೋಳಿ, ಮುದ್ದೆ, ಕಾಲುಸೂಪು ಹಾಗೂ ದೊನ್ನೆ ಬಿರಿಯಾನಿಯನ್ನು ನೆನಪಿಸಿಕೊಂಡು, ಗೋ ಮಧುಸೂಧನ್ ಕೂಡ ಇದರ ರುಚಿ ನೋಡಿದ್ದಾರೆನೋ? ಎಂದು ಕಿಚಾಯಿಸಿದರು.
ಒಂದು ಮೊಟ್ಟೆ ಕೂಡಾ ತಿಂದಿಲ್ಲ : ಮುಖ್ಯಮಂತ್ರಿಯವರ ಮಾತಿಗೆ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಗೋ ಮಧುಸೂಧನ್ ಅವರು ಇದುವರೆವಿಗೂ ಒಂದು ಮೊಟ್ಟೆ ಕೂಡ ತಿಂದಿಲ್ಲ ಎಂದು ಹೇಳಿದರು.
ಭೂಮಿಗೆ ವಾಪಸ್ ಕಳುಸುತ್ತಾರೆ : ಈಶ್ವರಪ್ಪ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಈಗ ತಿಂದಿಲ್ಲದಿದ್ದರೆ ಮೇಲೆ ಹೋದಾಗ ನೀನು ಏನೇನು ತಿಂದಿದ್ದೀ ಎಂದು ಕೇಳುತ್ತಾರೆ? ನೀವು ಏನೂ ತಿಂದಿಲ್ಲ ಎಂದು ಹೇಳಿದರೆ ಮತ್ತೆ ಅವರನ್ನು ಭೂಮಿಗೆ ವಾಪಸ್ ಕಳುಹಿಸುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಮುಖ್ಯಮಂತ್ರಿಯವರು ಮೈಸೂರಿನ ತಿಂಡಿ ತಿನಿಸುಗಳ ಬಗ್ಗೆ ಬರೀ ವರ್ಣನೆ ಕೊಡುತ್ತೀರಿ ನಮಗೂ ರುಚಿ ತೋರಿಸುತ್ತೀರೋ? ಎಂದು ಈಶ್ವರಪ್ಪ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಿಎಂ ಖಂಡಿತವಾಗಿ ತಮ್ಮನ್ನು ಮೈಸೂರಿಗೆ ಆಹ್ವಾನಿಸುವುದಾಗಿ ತಿಳಿಸಿದರು.












Click it and Unblock the Notifications