ಶಾಸಕರೊಂದಿಗೆ ಮಾತನಾಡಿದರೆ ಪಕ್ಷ ಒಡೆದ ಹಾಗಾ?
ಬೆಂಗಳೂರು, ಆ, 20: ಜೆಡಿಎಸ್ ಒಡೆಯುವ ಅಥವಾ ಆ ಪಕ್ಷದ ಶಾಸಕರನ್ನು ಕಾಂಗ್ರೆಸ್ಗೆ ಸೆಳೆಯುವ ಯತ್ನ ಇಲ್ಲಿಯವರೆಗೆ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಗೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪ ಸುಳ್ಳು. ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳದೆ ಹತಾಶೆಗೆ ಒಳಗಾಗಿರುವ ದೇವೇಗೌಡರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಶಾಸಕರಾದ ಚೆಲುವರಾಯಸ್ವಾಮಿ, ಜಮೀರ್ ನನ್ನನ್ನು ಭೇಟಿಯಾಗಿದ್ದು ನಿಜ. ಆದರೆ, ಅವರಿಬ್ಬರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚಿಸಲು ಬಂದಿದ್ದರೇ ಹೊರತು ರಾಜಕೀಯ ಮಾತನಾಡಲು ಅಲ್ಲ. ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅವರಿಬ್ಬರೂ ಆಗಮಿಸಿದ ಕಾರಣ ಕಾರಿನಲ್ಲಿ ಮಾತಾಡಿಕೊಂಡೆ ತೆರಳಿದೆವು. ಇದರಲ್ಲಿ ಯಾವ ವಿಶೇಷ ಇಲ್ಲ. ಸುಮ್ಮನೆ ಬಣ್ಣ ಹಚ್ಚಬೇಡಿ ಎಂದು ಹೇಳಿದರು.(ಜೆಡಿಎಸ್ ತೊರೆಯಬೇಡಿ)
ಎಲ್ಲಾ 224 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಪಕ್ಷ ಬಿಟ್ಟು ಬನ್ನಿ ಎಂದು ಯಾರನ್ನು ಕರೆದಿಲ್ಲ. ಪಕ್ಷ ಒಡೆಯುವ ಕೆಲಸ ನನಗೆ ಬೇಕಾಗಿಲ್ಲ. ಅಭಿವೃದ್ಧಿ ಬಗ್ಗೆ ಶಾಸಕರು ನನ್ನೊಂದಿಗೆ ಚರ್ಚಿಸುವುದು ತಪ್ಪೇ? ಎಂದು ಪ್ರಶ್ನಿಸಿದರು.
ಅಕ್ಕಸಮ್ಮೇಳನಕ್ಕೆ ಉಮಾಶ್ರೀ ಮಾತ್ರ: ಅಕ್ಕ ಸಮ್ಮೇಳನಕ್ಕೆ ಯಾವ ಮಂತ್ರಿ, ಎಂಎಲ್ಎ ಹೋಗೋದಿಲ್ಲ. ಸಚಿವೆ ಉಮಾಶ್ರೀ ಹಾಗೂ ಕೆಲ ಕಲಾವಿದರನ್ನು ಮಾತ್ರ ಕಳುಹಿಸಲು ಸರ್ಕಾರ ನಿರ್ಧರಿಸಿದೆ. ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಆಂಜನೇಯ ಇಬ್ಬರೂ ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಣಾ ಜಾರ್ಜ್ ಪರಿಸರವಾದಿ! : ರಾಜ್ಯ ವನ್ಯಜೀವಿ ಮಂಡಳಿಯ ಗೌರವ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಅವರನ್ನು ಪದಚ್ಯುತಿಗೊಳಿಸಿ ಪುನಾರಚಿಸಿರುವ ತಂಡಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಪುತ್ರ ರಾಣಾ ಜಾರ್ಜ್ ಸೇರ್ಪಡೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ರಾಣಾ ಒಬ್ಬ ಪರಿಸರವಾದಿಯಾಗಿದ್ದು ಪರಿಸರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಅವರು ತೊಡಗಿಕೊಂಡಿರುವುದರಿಂದ ನೇಮಕ ಮಾಡಿಕೊಳ್ಳಲಾಗಿದೆ ಎಂದರು. ಅನಿಲ್ ಕುಂಬ್ಳೆ ಅಧಿಕಾರ ಮೊಟಕು ಕುರಿತು ಕೇಳಲಾದ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ನೀಡಲಿಲ್ಲ.












Click it and Unblock the Notifications