ರುದ್ರೇಗೌಡಗೆ ಶಿವಮೊಗ್ಗ ಟಿಕೆಟ್ ನೀಡಲಿ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಮಾರ್ಚ್ 28: ವಿಧಾನಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪ ಅವರ ಮನೆಯಲ್ಲಿ ಇತ್ತೀಚೆಗಷ್ಟೆ ಅಮಿತ್ ಷಾ ಮತ್ತು ಯಡಿಯೂರಪ್ಪ ಅವರಿಗೆ ಆಯೋಜಿಸಿದ್ದ ಭೋಜನ ಕೂಟ ಕಮ್ 'ಸಂಧಾನ ಸಭೆ' ಫಲ ನೀಡಿದಂತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಷ್ಟು ದಿನ ಒಬ್ಬರಿಗೊಬ್ಬರ ತಲೆ ಕಂಡರೆ ಹಾವು ಮೆಟ್ಟಿದವರಂತೆ ಆಡುತ್ತಿದ್ದ ಕೆ.ಎಸ್.ಈಶ್ವರಪ್ಪ ಹಾಗೂ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರ ನಡುವಿನ ವೈಷಮ್ಯ ಶಮನವಾದಂತಿದೆ. ಇದಕ್ಕೆ ಪುಷ್ಟಿ ನೀಡುತ್ತಿದೆ ಈಶ್ವರಪ್ಪ ಅವರು ಇಂದು ನೀಡಿರುವ ಹೇಳಿಕೆ.
ಇಂದು ಶಿವಮೊಗ್ಗದಲ್ಲಿ ಮಾತನಾಡಿರುವ ಈಶ್ವರಪ್ಪ ಅವರು, 'ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ರುದ್ರೇಗೌಡ ಅವರಿಗೇ ನೀಡಲಿ, ನನ್ನ ಅಭ್ಯಂತರವಿಲ್ಲ' ಎಂದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ರುದ್ರೇಗೌಡ ಅವರ ವಿರುದ್ಧ ಬಹಿರಂಗವಾಗಿ ಅಸಹನೆ ಹೊರಹಾಕಿದ್ದ ಈಶ್ವರಪ್ಪ ಇಂದು 'ಅವರಿಗೇ ಟಿಕೆಟ್ ನೀಡಲಿ' ಎಂದಿರುವುದು ಆಶ್ಚರ್ಯ ಹುಟ್ಟಿಸಿದೆ. ಅಷ್ಟೆ ಅಲ್ಲ ಇನ್ನೂ ಮುಂದುವರೆದು 'ರುದ್ರೇಗೌಡ ಅವರ ಗೆಲುವಿಗೆ ನಾನೂ ಶ್ರಮವಹಿಸುತ್ತೇನೆ' ಎಂದಿದ್ದಾರೆ.
ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ಆಪ್ತ ರುದ್ರೇಗೌಡ ಅವರ ನಡುವೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆದಿತ್ತು.
ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಸಿದ್ದರಾಮಯ್ಯ ಅವರೇ ಕಾರಣ ಎಂದಿದ್ದಾರೆ.
'ಪರಮೇಶ್ವರ್ ಅವರ ಸೋಲಿನಲ್ಲಿ ತಮ್ಮ ಕೈವಾಡ ಇಲ್ಲವೆಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ತಾಯಿ ಮೇಲೆ ಪ್ರಮಾಣ ಮಾಡಿ ಹೇಳಲಿ ನೋಡೋಣ' ಎಂದು ಸವಾಲು ಹಾಕಿದ್ದಾರೆ.
ಈಶ್ವರಪ್ಪ ಅವರಿಗೆ ಶಿವಮೊಗ್ಗ ನಗರ ಟಿಕೆಟ್ ಮತ್ತು ಯಡಿಯೂರಪ್ಪ ಅವರ ಬಲಗೈ ಭಂಟ ರುದ್ರೇಗೌಡ ಅವರಿಗೆ ಭದ್ರಾವತಿ ಕ್ಷೇತ್ರದ ಟಕೆಟ್ ನೀಡಲಾಗುತ್ತದೆ ಎಂಬ ಊಹಾಪೋಹ ಹರಿದಾಡುತ್ತಿದ್ದು, ಆದರೆ ಇದೀಗ ಈಶ್ವರಪ್ಪ ಅವರೇ 'ಶಿವಮೊಗ್ಗ ನಗರ ಟಿಕೆಟ್ ರುದ್ರೇಗೌಡ ಅವರಿಗೆ ನೀಡಲಿ' ಎಂದಿರುವುದು ಗೊಂದಲ ಮೂಡಿಸಿದೆ.












Click it and Unblock the Notifications