ಮೀನು ತಿಂದು ದೇವಸ್ಥಾನಕ್ಕೆ ಬರಬೇಡ ಎಂದು ದೇವ್ರು ಹೇಳಿಲ್ಲ, ಆದ್ರೆ ಸ್ವಾಮೀ!
ನಾಡಿನ ಧರ್ಮದೇಗುಲ ಎಂದೇ ಹೆಸರಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿಗಳು ಮೀನೂಟ ಮಾಡಿಕೊಂಡು ಹೋದರು ಎನ್ನುವುದು ಸದ್ಯ ಸುದ್ದಿ. ಅಸಲಿಗೆ ಇದೊಂದು ಸುದ್ದಿಯಾಗಬೇಕಾದ ಸುದ್ದಿಯೋ ಅಥವಾ ಈ ವಿಚಾರವನ್ನು ಇಟ್ಟುಕೊಂಡು ಸಾಮಾಜಿಕ ತಾಣದಲ್ಲಿ ಕೆಸೆರೆರೆಚಾಟ ನಡೆಯುತ್ತಿರುವುದು ಸರಿಯೋ,ತಪ್ಪೋ.. ಧರ್ಮಸ್ಥಳ ಮಂಜುನಾಥ, ಅಣ್ಣಪ್ಪ ಪಂಜುರ್ಲಿಯೇ ಬಲ್ಲ.
ನಮ್ಮ ಊರು ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ, ಸಸ್ಯಾಹಾರಿ ಕುಟುಂಬ ಎಂದು ಸಿಗುವುದು ಅಬ್ಬಬ್ಬಾ ಅಂದ್ರೆ ಶೇ.25. ಮಿಕ್ಕ ಎಲ್ಲರಿಗೂ ಮಾಂಸ ಕಂಪಲ್ಸರಿ ಅಲ್ಲದಿದ್ದರೂ, ಮೀನು ಮಾತ್ರ ಒಂದು ಹೊತ್ತಿನ ಊಟಕ್ಕೆ ಬೇಕೇ ಬೇಕು. ಇದು ಇಲ್ಲಿನ ಆಹಾರ ಪದ್ದತಿ.

ದೇವಾಲಯಕ್ಕೆ ಈ ಭಾಗದಲ್ಲಿ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ದೈವಸ್ಥಾನಗಳಿಗೂ ಇದೆ. ಪ್ರಮುಖವಾಗಿ, ಇಲ್ಲಿನ ದೇವಸ್ಥಾನ, ದೈವಸ್ಥಾನಗಳಿಗೆ ಹೆಚ್ಚಿನ ಆದಾಯ, ಕಾಣಿಕೆ, ಸೇವೆ, ಕೋಲ, ನೇಮ ಮುಂತಾದ ರೂಪಗಳಲ್ಲಿ ಹರಿದು ಬರುವುದು ಸಸ್ಯಾಹಾರಿಗಳಿಂದ ಹೊರತಾಗಿ ಇರುವವರಿಂದಲೇ.
ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ಈ ಭಾಗದ ಹೆಚ್ಚಿನ ಮನೆಗಳಲ್ಲಿ ಕುಟುಂಬದ ದೈವ ಎಂದು ಪೂಜಿಸಿಕೊಂಡು ಬರಲಾಗುತ್ತದೆ (ಪಂಜುರ್ಲಿ, ಜುಮಾದಿ, ಗುಳಿಗ, ರಕ್ತೇಶ್ವರಿ, ಪಿಲಿಚಂಡಿ, ಬೊಬ್ಬರ್ಯ, ಬಬ್ಬುಸ್ವಾಮಿ ಇತ್ಯಾದಿ), ಜೊತೆಗೆ, ಕೆಲವೊಂದು ದೈವಗಳಿಗೆ ಮಾಂಸ ಮತ್ತು ಮದ್ಯ ನೈವೇದ್ಯ ರೂಪದಲ್ಲಿ ನೀಡುವ ಪದ್ದತಿಯೂ ಇದೆ.
ಯಾವ ದೇವಾಲಯಗಳಲ್ಲೂ, ಮಾಂಸ ತಿಂದು ಬರಬೇಡಿ ಎನ್ನುವ ನಿಯಮ ಇಲ್ಲಿಲ್ಲ. ಆದರೆ, ಗರ್ಭಗುಡಿ ಪ್ರವೇಶಿಸುವವರಿಗೆ ಕೆಲವೊಂದು ಕಟ್ಟುಪಾಡುಗಳು ಇದ್ದೇ ಇದೆ. ಆದರೆ, ದೇವಸ್ಥಾನಕ್ಕೆ ಹೋಗುವ ಅಥವಾ ಪೂಜೆಯಾಗುವ ಮೊದಲು, ಮಾಂಸ ತಿಂದು ಹೋಗುವವರ ಸಂಖ್ಯೆ ವಿರಳಾತೀತ ವಿರಳ.
ಸೋಮವಾರ, ಕಾರ್ತಿಕ ಮತ್ತು ಶ್ರಾವಣ ಮಾಸಗಳಲ್ಲಿ ಸಸ್ಯಾಹಾರಿ ಊಟವನ್ನೇ ಸೇವಿಸಿ ಕಟ್ಟುನಿಟ್ಟಾಗಿ ಪೂಜೆ, ಪುನಸ್ಕಾರ ನಡೆಸುವ ಲೆಕ್ಕವಿಲ್ಲದಷ್ಟು ಕುಟುಂಬಗಳಿವೆ. ಬೆಂಗಳೂರನ್ನೇ ತೆಗೆದುಕೊಳ್ಳಿ, ಅದೆಷ್ಟೋ, ಮಾಂಸದ ಅಂಗಡಿಗಳು ಸೋಮವಾರದಂದು ಬಾಗಿಲು ಹಾಕಿರುತ್ತವೆ.

ಕಾರ್ತಿಕ,ಸೋಮವಾರದಂದು ಮಾಂಸ ತಿನ್ನಬೇಡ ಎಂದು ದೇವರು ಇವರಿಗೆಲ್ಲಾ ಕನಸಿನಲ್ಲಿ ಬಂದು ಹೇಳಿದ್ದಲ್ಲ, ಇದು ಅನಾದಿ ಕಾಲದಿಂದಲೂ ಅವರ ವಂಶಸ್ಥರು ಪಾಲಿಸಿಕೊಂಡು ಬಂದಿರುವ ಪದ್ದತಿಯನ್ನು ಇಂದಿನ ಪೀಳಿಗೆಯವರೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇನ್ನು, ಮೀನೂಟ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿದ್ದಾನಾ ಎಂದು ಬೇಡರ ಕಣ್ಣಪ್ಪ, ಜಿಂಕೆ ಮಾಂಸದ ಉದಾಹರಣೆಯನ್ನು ಮುಖ್ಯಮಂತ್ರಿಗಳು ನೀಡಿದ್ದು, ಮೇಲ್ನೋಟಕ್ಕೆ ಸರಿ ಎನಿಸಿದರೂ, ಇದು ಇನ್ನೊಬ್ಬರ ಭಾವನೆಗಳನ್ನು ಅಣಕಿಸುವ ಕೆಲಸವಲ್ಲವೇ ಎನ್ನುವುದು ಬಹುಜನರ ಅಭಿಪ್ರಾಯ (ಪುರೋಹಿತಶಾಹಿಗಳದ್ದೂ ಸೇರಿ)
ಮಾಂಸ ತಿಂದು ದೇವಾಲಯಕ್ಕೆ ಬರಬಾರದು ಎಂದು ದೇವರು ಹೇಳಿಲ್ಲ, ಮದ್ಯಪಾನ ಮಾಡಿ ಬರಬೇಡಿ ಎಂದೂ ದೇವರು ಹೇಳಿಲ್ಲ. ಹಾಗಾಗಿ, ಮುಂದೊಂದು ದಿನ ಮದ್ಯಪಾನ ಮಾಡಿಕೊಂಡು ಹೋದರೆ ತಪ್ಪೇನು ಎಂದು ವಾದಿಸುವವರು ದೊಡ್ಡ ಮಟ್ಟದಲ್ಲಿ ಇರದೇ ಇರುತ್ತಾರಾ?
ಅಸಲಿಗೆ, ಇತ್ತೀಚಿನ ಎಲ್ಲಾ ವಿದ್ಯಮಾನಗಳು ಮತೀಯ ದ್ವೇಷ, ರಾಜಕೀಯ ಸ್ವರೂಪ ಪಡೆಯುತ್ತಿರುವುದಿಂದಲೇ, ಎಲ್ಲಾ ಸಣ್ಣಸಣ್ಣ ವಿಚಾರಗಳು ಅನಾವಶ್ಯಕವಾಗಿ ದೊಡ್ದದಾಗಿ ಬೇರೇ ಏನೋ ವಿಷಯದಿಂದ ಹೊರತಾದ ಚರ್ಚೆಗೆ ನಾಂದಿ ಹಾಡುತ್ತಿದೆ.
ಧರ್ಮಸ್ಥಳದ ದೇವಾಲಯ ಮಂಡಳಿ ಸ್ಪಷ್ಟ ಪಡಿಸಿದಂತೆ, ಮೀನು ಮತ್ತು ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಎಂದು ಯಾರೂ ಹೇಳಿಲ್ಲ. ಹಂದಿ ಮಾಂಸ ತಿಂದು ಅಲ್ಲಿಗೆ ಪ್ರಾರ್ಥನೆಗೆ ಹೋಗಿ ನೋಡೋಣ.. ಎನ್ನುವ ದ್ವೇಷದ ಮಾತೂ ಬೇಕಾಗಿಲ್ಲ. ದೇವಸ್ಥಾನಕ್ಕೆ ಶುಚಿಯಾಗಿ, ಶುಭ್ರವಾಗಿ, ಮಾಂಸಾಹಾರ ಸೇವಿಸದೇ ಹೋಗುವುದು ನಂಬಿಕೆ, ಶ್ರದ್ದೆ, ಭಕ್ತಿ, ನಡೆದುಕೊಂಡು ಬರುತ್ತಿರುವ ಪದ್ದತಿ.
ಕೊನೆಯದಾಗಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಲಕ್ಷಾಂತರ ಜನ ಭಕ್ತರಿದ್ದಾರೆ. ನಾಡಿನ ಧರ್ಮಕ್ಷೇತ್ರವೆಂದೇ ಹೆಸರಾಗಿರುವ ಇಲ್ಲಿ ಆಣೆಪ್ರಮಾಣ ಎನ್ನುವ ರಾಜಕೀಯ ಪ್ರಹಸನ ನಡೆದ ಉದಾಹರಣೆಯೂ ನಮ್ಮ ಮುಂದಿದೆ ಎಂದರೆ, ಅದು ಈ ದೇವಾಲಯದ ಮೇಲೆ ಜನರಿಗೆ ಇರುವ ನಂಬಿಕೆ. ಕೊನೇ ಪಕ್ಷ, ಭಕ್ತರ ನಂಬಿಕೆಗೆ ಘಾಸಿ ತರಬಾರದು ಎನ್ನುವ ಸೂಕ್ಷ್ಮತೆಯನ್ನು ಮುಖ್ಯಮಂತ್ರಿಗಳು ಅರಿಯಬೇಕಾಗಿತ್ತು. Any way..












Click it and Unblock the Notifications