ಮೈತ್ರಿ ಮಾಡಿಕೊಳ್ಳೋ ದಾರಿದ್ರ್ಯ ನಮಗಿಲ್ಲ ಅಂದ್ರು ಕುಮಾರಣ್ಣ: ಮಾತು ಮಾತಾಗಿರ್ಲಿ!
ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ, ವಿಶ್ರಾಂತಿಯ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರ ' ಕುಮಾರಪರ್ವ - 2018, ಹೊಸ ಮನ್ವಂತರದ ಶುಭಾರಂಭ' ಯಾತ್ರೆ ಮೈಸೂರಿನಲ್ಲಿ ಮಂಗಳವಾರ (ನ 7) ಆರಂಭಗೊಳ್ಳಲಿದೆ. ಜೊತೆಗೆ, ಕುಮಾರಸ್ವಾಮಿಯವರ ರಾಜಕೀಯ ಜೀವನದಲ್ಲಿ ಅವರಿಗೆ ಉತ್ತಮ ಹೆಸರು ತಂದುಕೊಟ್ಟ ಗ್ರಾಮವಾಸ್ತವ್ಯವೂ ಜೊತೆಜೊತೆಯಾಗಿ ಸಾಗಲಿದೆ.
ಮಂಗಳವಾರದಂದು ಯಾವುದೇ ಒಳ್ಳೆಯ ಕೆಲಸವನ್ನು ಆರಂಭಿಸುವ ಪದ್ದತಿ ಹಿಂದೂಗಳಲ್ಲಿಲ್ಲ. ಅಪ್ರತಿಮ ದೈವಭಕ್ತ ಕುಟುಂಬವಾದ ದೇವೇಗೌಡರ, ಪುತ್ರ ಕುಮಾರಸ್ವಾಮಿ ಮಂಗಳವಾರದಂದೇ ಯಾತ್ರೆ ಆರಂಭಿಸುತ್ತಿದ್ದಾರೆ. ಇದರ ಹಿಂದೆ ಇನ್ನೇನಾದರೂ ರಾಜಕೀಯ ಲೆಕ್ಕಾಚಾರವಿದೆಯಾ? ಗೊತ್ತಿಲ್ಲ..
ತಿರುಗಿಬಿದ್ದ ಬಿಜೆಪಿ ಕಾರ್ಯಕರ್ತ : ಅಡ್ಡ ಹೊಡೆಯುತ್ತಿರುವುದೆಲ್ಲಿ
ಯಾತ್ರೆಯ ಮುಂಚೆ ಕುಮಾರಸ್ವಾಮಿಯವರು ಮಗುದೊಮ್ಮೆ ತಮ್ಮ ಹಿಂದಿನ ಹೇಳಿಕೆಯನ್ನು ಪುನರಾವರ್ತಿಸಿದ್ದು, ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಅಂತಹ ದಾರಿದ್ರ್ಯ ನಮಗೆ ಬಂದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಈ ಹಿಂದೆಯೂ ತಮ್ಮ ಹೇಳಿಕೆಗೆ "ಬದ್ದವಾಗದ" ಹಲವು ರಾಜಕೀಯ ನಿರ್ಧಾರ ದೇವೇಗೌಡರ ಕುಟುಂಬ ತೆಗೆದುಕೊಂಡುರುವುದರಿಂದ 'ಮೈತ್ರಿಯ ದಾರಿದ್ರ್ಯ' ನಮಗಿಲ್ಲ ಎನ್ನುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ, ಜೆಡಿಎಸ್ ಇದೇ ಗಟ್ಟಿನಿಲುವನ್ನು ತಾಳಲಿದೆಯೇ ಎನ್ನುವುದು ಇಲ್ಲಿ ಪ್ರಶ್ನೆ.
ನ.7ರಿಂದ ಎಚ್ಡಿಕೆ ರಾಜ್ಯ ಪ್ರವಾಸ, ಗ್ರಾಮ ವಾಸ್ತವ್ಯ ಆರಂಭ
ನವೆಂಬರ್ ಏಳರಂದು ಆರಂಭವಾಗಲಿರುವ ಕುಮಾರಸ್ವಾಮಿಯವರ ರಾಜ್ಯ ಪ್ರವಾಸಕ್ಕಾಗಿ ಸಿದ್ದಪಡಿಸಲಾಗಿರುವ ಬಸ್ಸಿಗೆ 'ಕರ್ನಾಟಕ ವಿಕಾಸ ವಾಹಿನಿ' ಎಂದು ಹೆಸರಿಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಇಲವಾಲದ ಲಿಂಗದೇವರಕೊಪ್ಪಲಿನಲ್ಲಿ ನಡೆಯುವ ಸಮಾವೇಶಕ್ಕೆ, ದೇವೇಗೌಡರು ಮತ್ತು ಎಚ್ಡಿಕೆ ಚಾಲನೆ ನೀಡಲಿದ್ದಾರೆ. ಈ ಹಿಂದೆ ಮಾತು ತಪ್ಪಿದ ಕುಮಾರ, ಮುಂದೆ ಓದಿ..
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅವಶ್ಯಕತೆಯಿದೆ ಎಂದು ಹೇಳಿಕೆ ನೀಡಿರುವ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ನಾವು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳುವುದಿಲ್ಲ, ಅಂತಹ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆ ಕೈಜೋಡಿಸಿ ಸಿಎಂ ಆಗಿದ್ದ ಕುಮಾರಸ್ವಾಮಿ
2004ರ ಅಸೆಂಬ್ಲಿ ಚುನಾವಣೆಯ ವೇಳೆ ಜೆಡಿಎಸ್ ಪಕ್ಷ, ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಹುಮತ ಸಿಗದಿದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ, ನಾವು ಅಧಿಕಾರದ ಹಿಂದೆ ಬಿದ್ದಿಲ್ಲ ಎನ್ನುವ ಹೇಳಿಕೆಯನ್ನು ಗೌಡ್ರು ಮತ್ತು ಎಚ್ಡಿಕೆ ನೀಡಿದ್ದರು. ಆದರೆ, ಜೆಡಿಎಸ್, ಧರಂಸಿಂಗ್ ಸರಕಾರಕ್ಕೆ ಬೆಂಬಲ ನೀಡಿತ್ತು, ಇದಾದ ನಂತರ ಕುಮಾರಸ್ವಾಮಿ, ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾಗಿದ್ದರು.
ಚನ್ನಪಟ್ಟಣದಿಂದ ಸ್ಪರ್ಧಿಸಿ, ಸೋತ ಅನಿತಾ ಕುಮಾರಸ್ವಾಮಿ
ತಮ್ಮ ಕುಟುಂಬದಿಂದ ಇಬ್ಬರೇ (ಎಚ್ಡಿಕೆ, ರೇವಣ್ಣ) ಸ್ಪರ್ಧಿಸುವುದು ಎಂದು ಕುಮಾರಸ್ವಾಮಿ ಈ ಹಿಂದೆ ಹಲವು ಬಾರಿ ಹೇಳಿದ್ದರು. ಆದರೆ, 2013ರ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸಿ, ಸಿ ಪಿ ಯೋಗೀಶ್ವರ್ ವಿರುದ್ದ ಸೋಲು ಅನುಭವಿಸಿದ್ದರು. ಕುಟುಂಬದಿಂದ ಇಬ್ಬರೇ ಅನ್ನುತ್ತಿದ್ದ ಕುಮಾರಸ್ವಾಮಿ, ಸ್ಥಳೀಯ ಮುಖಂಡರ ಒತ್ತಾಯಕ್ಕೆ ಮಣಿದು, ಅನಿತಾ ಅವರನ್ನು ಕಣಕ್ಕಿಳಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.
ಕಾಂಗ್ರೆಸ್ ಬಿಬಿಎಂಪಿ ಚುಕ್ಕಾಣಿ ಹಿಡಿಯಲು ಎಚ್ಡಿಕೆ ಸಹಾಯ
ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಚುನಾವಣೆಯ ಸಂದರ್ಭದಲ್ಲೂ ಹೊಂದಾಣಿಕೆಯಿಲ್ಲ ಎನ್ನುವ ಮಾತನ್ನಾಡಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ಜೊತೆ ಎರಡೆರಡು ಬಾರಿ ಕೈಜೋಡಿಸಿ, ಕಾಂಗ್ರೆಸ್ ಬಿಬಿಎಂಪಿ ಚುಕ್ಕಾಣಿ ಹಿಡಿಯಲು ಸಹಾಯ ಮಾಡಿದ್ದರು.
ಕುಟುಂಬದಿಂದ ಐವರು ಸ್ಪರ್ಧಿಸಿದರೆ ಆಶ್ಚರ್ಯವಿಲ್ಲ
ಇನ್ನು ಮುಂದಿನ ಚುನಾವಣೆಯಲ್ಲಿ (2018) ಗೌಡ್ರು ಒಂದು ಹೇಳಿಕೆ ನೀಡುತ್ತಿದ್ದರೆ, ಕುಮಾರಸ್ವಾಮಿ ಮತ್ತದೇ ಕುಟುಂಬದಿಂದ ಇಬ್ಬರು ಮಾತ್ರ. ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎನ್ನುವ ಹೆಸರಿನಿಂದ ಹೊರಬರಬೇಕಾಗಿದೆ ಎಂದು ಎರಡು ದಿನದ ಹಿಂದೆ ಹೇಳಿಕೆ ನೀಡಿದ್ದಾರೆ. ಆದರೆ ಕೆಲವೊಂದು ಮಾಹಿತಿಯ ಪ್ರಕಾರ, ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎನ್ನುವ ಮಾಹಿತಿಯಿದೆ.