ಕಾಂಗ್ರೆಸ್ಸಿಗರಿಗೆ ಡಿಕೆಶಿ ಹೊರಡಿಸಿದ ಫರ್ಮಾನು: ಸಿದ್ದರಾಮಯ್ಯ ಏಕಾಂಗಿ?
ಚುನಾವಣಾ ವರ್ಷದಲ್ಲಿ ಬಿಜೆಪಿ ಧಾರ್ಮಿಕ, ಸೆಂಟಿಮೆಂಟ್ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸುತ್ತಿದೆ. ಕಾಂಗ್ರೆಸ್ ನಿಧಾನವಾಗಿ ಬಿಜೆಪಿಯ ಈ ಬಲೆಯೊಳಗೆ ಬೀಳುತ್ತಿದೆ, ಹೇಗೆ ಪ್ರತಿಕ್ರಿಯಿಸುವುದು ಎನ್ನುವ ಗೊಂದಲದಲ್ಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ವ್ಯಾಖ್ಯಾನ. ಹಾಗಾಗಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಹೊರಡಿಸಿದ್ದಾರೆ ಎನ್ನಲಾಗುತ್ತಿರುವ ಮೌಕಿಕ ಫರ್ಮಾನು ಚರ್ಚೆಯ ವಿಷಯವಾಗಿದೆ.
ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳುವಂತೆ ಬಿಜೆಪಿಯವರಿಗೆ ಅಭಿವೃದ್ದಿ ವಿಚಾರವನ್ನು ಮುಂದಿಟ್ಟುಕೊಂಡು ಹೋಗಲು ವಿಷಯ ಇಲ್ಲದಿರುವುದರಿಂದ ಇಂತಹ ವಿಚಾರವನ್ನು ಮುನ್ನಲೆಗೆ ತರುತ್ತಿದೆ ಎನ್ನುವುದು. ಯಾಕೆಂದರೆ, ಲಿಂಗಾಯತ ಧರ್ಮವನ್ನು ಬೇರ್ಪಡಿಸಲು ಹೋಗಿ, ಕಳೆದ ಚುನಾವಣೆಯಲ್ಲಿ ಆಗಿರುವಂತಹ ಸೋಲು ಇವರಿಗೆ ಪಾಠ ಕಲಿಸಿರಬಹುದು.
ಬಿಜೆಪಿ ಬತ್ತಳಿಕೆಯಿಂದ ಹೊರಬಿದ್ದಿರುವ ಐದು ವಿಚಾರಗಳೆಂದರೆ, ಹಿಜಾಬ್, ಕಾಶ್ಮೀರ್ ಫೈಲ್ಸ್, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ನಿರ್ಬಂಧ, ಶಾಲಾಪಠ್ಯ ಪುಸ್ತಕದಲ್ಲಿ ಭಗವದ್ಗೀತೆ, ಮದರಸ ಶಿಕ್ಷಣ. ಈ ಎಲ್ಲಾ ಅಂಶಗಳು ಸುಖಾಂತ್ಯ ಕಾಣುವುದು, ಮುಂದಿನ ಚುನಾವಣೆಯವರೆಗೆ ಬಿಜೆಪಿಗೆ ಬೇಕಾಗಿಲ್ಲವೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ಇದನ್ನರಿತಿರುವ ರಾಜ್ಯ ಬಿಜೆಪಿಗರು ಮತ್ತು ಹೈಕಮಾಂಡ್ ನಿರ್ದೇಶನದಂತೆ ಇದೇ ವಿಚಾರವನ್ನು ಪ್ರಸ್ತಾವಿಸುತ್ತಿದ್ದಾರೆ. ಸ್ವಾಭಾವಿಕವಾಗಿ, ಮಾಧ್ಯಮದವರು ಇದನ್ನೇ ರಾಜಕೀಯ ಮುಖಂಡರ ಮುಂದೆ ಇಡುತ್ತಿದ್ದಾರೆ. ಆದರೆ, ಉತ್ತರ ಕೊಡುವ ಧಾವಂತದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕಾಂಗ್ರೆಸ್ಸಿಗೆ ಹಿನ್ನಡೆ ತರುತ್ತಿದ್ದಾರಾ? ಈ ಪ್ರಶ್ನೆ ಸದ್ಯ ಟಾಕ್ ಆಪ್ ದಿ ಟೌನ್.

ಬಿಜೆಪಿ ಇಟ್ಟಿರುವ ಐದು ವಿಚಾರಗಳು ಹಿಂದೂ ಮತಬ್ಯಾಂಕ್ ಅನ್ನು ಕ್ರೋಢೀಕರಿಸುವ ಉದ್ದೇಶ
ಬಿಜೆಪಿ ಈಗ ಇಟ್ಟಿರುವ ಐದು ವಿಚಾರಗಳು ಹಿಂದೂ ಮತಬ್ಯಾಂಕ್ ಅನ್ನು ಕ್ರೋಢೀಕರಿಸುವ ಅತ್ಯಂತ ಸ್ಪಷ್ಟ ಉದ್ದೇಶವನ್ನು ಹೊಂದಿದೆ, ಬಿಜೆಪಿ ನಂಬಿರುವುದೇ ಅದನ್ನು. ಚುನಾವಣೆ ಗೆಲ್ಲಲು ಅದು ಸಾಕು ಎನ್ನುವುದು ನಿರ್ವಿವಾದ, ಇದು ರಾಜ್ಯದ ವಿಚಾರದಲ್ಲಾಗಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣದ ವಿಚಾರದಲ್ಲಿ ಕೂಡಾ. ತುಂಬಾ ಸೂಕ್ಷ್ಮ ವಿಚಾರವಾಗಿರುವುದರಿಂದ ಅಳೆದು ತೂಗಿ, ಕಾಂಗ್ರೆಸ್ ಈ ವಿಚಾರದಲ್ಲಿ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ. ಇದೇ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಹೋಗಿ ಸಿದ್ದರಾಮಯ್ಯನವರು ಸ್ವಾಮೀಜಿ ಸಮುದಾಯವನ್ನು ಎಳೆದು ತಂದಿದ್ದರು.

ಸ್ವಾಮೀಜಿಗಳು ತಲೆಯ ಮೇಲೆ ಕೇಸರಿ ಶಾಲನ್ನು ಹಾಕಿಕೊಳ್ಳುವುದಿಲ್ಲವಾ
ಹಿಜಾಬ್ ವಿಚಾರದ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಮುಸ್ಲಿಂ ಹೆಣ್ಣುಮಕ್ಕಳು ಯೂನಿಫಾರಂ ಹಾಕಿಕೊಳ್ಳಲು ಸಿದ್ದರಿದ್ದಾರೆ, ಅದರೆ ಜೊತೆಗೆ ಒಂದು ದುಪ್ಪಟ್ಟಾ ಹಾಕಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ಹಿಂದೂ ಹೆಣ್ಣು ಮಕ್ಕಳೂ ಸೆರಗನ್ನು ತಲೆಗೆ ಹಾಕಿಕೊಳ್ಳುವುದಿಲ್ಲವಾ, ಸ್ವಾಮೀಜಿಗಳು ತಲೆಯ ಮೇಲೆ ಕೇಸರಿ ಶಾಲನ್ನು ಹಾಕಿಕೊಳ್ಳುವುದಿಲ್ಲವಾ. ಹಾಕಿಕೊಳ್ಳಲಿ ಬಿಡಿ, ಸರಕಾರಕ್ಕೆ ಇದರಿಂದ ಆಗುವ ತೊಂದರೆಯಾದರೂ ಏನು?" ಎಂದು ಸಿದ್ದರಾಮಯ್ಯ ಹೇಳಿದ್ದರು. ಇದು, ನಾಡಿನ ಪೀಠಾಧಿಪತಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದ ಸಿದ್ದರಾಮಯ್ಯ
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಟ್ವೀಟ್ ಮೂಲಕ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಆಗಲೇ ಅವರ ಹೇಳಿಕೆ ಸಾಕಷ್ಟು ಡ್ಯಾಮೇಜ್ ಅನ್ನು ಮಾಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಯಾವ ಕಾಂಗ್ರೆಸ್ ಮುಖಂಡರೂ ಸಿದ್ದರಾಮಯ್ಯನವರ ಪರ ವಕಾಲತ್ತಿಗೆ ಬರುತ್ತಿಲ್ಲ. ಡಿಕೆಶಿ ಕೂಡಾ ಸಿದ್ದರಾಮಯ್ಯನವರ ಹೇಳಿಕೆಗೆ ಅಸಮಾಧಾನ ವ್ಯಕ್ತ ಪಡಿಸಿ, "ಅವರ ಹೇಳಿಕೆಗೆ ಅವರೇ ಸಮರ್ಥನೆ ಕೊಡುತ್ತಾರೆ" ಎಂದು ಹೇಳಿ ಪ್ರಶ್ನೆಗೆ ಉತ್ತರಿಸದೇ ನುಣುಚಿಕೊಂಡಿದ್ದಾರೆ.
Recommended Video

ಯಾರೂ ಪ್ರತಿಕ್ರಿಯಿಸಬಾರದು ಎನ್ನುವ ಆದೇಶವನ್ನು ಡಿಕೆಶಿ ಹೊರಡಿಸಿದ್ದಾರೆ
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಕೂಡಾ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕಾಂಗ್ರೆಸ್ಸಿನ ಮತ್ತೋರ್ವ ಮುಖಂಡ ಪ್ರಿಯಾಂಕ್ ಖರ್ಗೆ, "ಸಿದ್ದರಾಮಯ್ಯನವರನ್ನೇ ಕೇಳಿ, ಹೇಗೂ ನಿಮಗೆ ಅವರು ಸಿಗುತ್ತಾರಲ್ವಾ"ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ, ಸಿದ್ದರಾಮಯ್ಯನವರ ಸ್ವಾಮೀಜಿ ಹೇಳಿಕೆಯ ವಿಚಾರದಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಯಾರೂ ಪ್ರತಿಕ್ರಿಯಿಸಬಾರದು ಎನ್ನುವ ಆದೇಶವನ್ನು ಡಿ.ಕೆ.ಶಿವಕುಮಾರ್ ಹೊರಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications