ಏಪ್ರಿಲ್ 1ರಿಂದ ಮಾಸ್ಕ್ ತೆಗಿಬಹುದಾ? ಏನನ್ನುತ್ತೆ ಕೇಂದ್ರದ ಸುತ್ತೋಲೆ
ಏಪ್ರಿಲ್ ಒಂದು, ಹೊಸ ಆರ್ಥಿಕ ವರ್ಷ, ಹಲವು ಬದಲಾವಣೆಗಳು ಜಾರಿಗೆ ಬರಲಿದೆ. ಜನಸಾಮಾನ್ಯರ ಜೇಬು ಖಾಲಿಯಾಗುವ ಹೊಸ ರೂಲ್ಸುಗಳು, ಹುಚ್ಚು ಕುದುರೆಯಂತೆ ಓಡುತ್ತಿರುವ ತೈಲಬೆಲೆಗಳಿಂದಾಗಿ ಹಲವು ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ.
ಏಪ್ರಿಲ್ ನಾಲ್ಕರಂದು ಹೊಟೇಲ್ ಮಾಲೀಕರ ಸಂಘ ಸಭೆ ಸೇರಲಿದ್ದು, ತಿಂಡಿ, ಊಟಗಳ ಬೆಲೆಯೂ ಜಾಸ್ತಿಯಾಗುವುದೂ ನಿಶ್ಚಿತ. ಮುಂಬರುವ ಆಗಸ್ಟ್ ತಿಂಗಳಲ್ಲಿ ಕೊರೊನಾ ನಾಲ್ಕನೇ ಅಲೆ ಎದುರಾಗಬಹುದು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದರು.
ಕೊರೊನಾ ಇಳಿಕೆ: ಏಪ್ರಿಲ್ 02ರಿಂದ ಮಹಾರಾಷ್ಟ್ರದಲ್ಲಿ ಮಾಸ್ಕ್ ನಿರ್ಬಂಧ ತೆರವು
ಇದರ ಮಧ್ಯೆಯೇ ಕೇಂದ್ರ ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿಯಲ್ಲಿ ಹಲವು ಬದಲಾವಣೆಯನ್ನು ತಂದಿದೆ. ಇದು ಏಪ್ರಿಲ್ ಒಂದರಿಂದ ದೇಶಾದ್ಯಂತ ಜಾರಿಯಾಗಲಿದೆ. ಇದಕ್ಕೂ ಹೆಚ್ಚಿನದನ್ನು ಆಯಾಯ ರಾಜ್ಯ ಸರಕಾರ ಬೇಕಿದ್ದರೆ ಮಾಡಬಹುದು ಎನ್ನುವ ಫ್ರೀಹ್ಯಾಂಡ್ ಅನ್ನು ನೀಡಿದೆ.
ಕಳೆದ 24ತಿಂಗಳಿನಿಂದ ದೇಶದ ನಾಗರೀಕರ ಮುಖದಲ್ಲಿ ರಾರಾಜಿಸುತ್ತಿದ್ದ ಮಾಸ್ಕ್ ನಿಧಾನವಾಗಿ ಮೂಲೆಗುಂಪು ಆಗುತ್ತಿದೆ. ಮಾಸ್ಕ್ ಧರಿಸಬೇಕು ಎನ್ನುವ ಸರಕಾರದ ಆದೇಶವಿದ್ದರೂ, ಮಾರ್ಷಲ್ ಗಳ ದಂಡದ ಭಯದಿಂದಾಗಿ, ಎಲ್ಲೋ ಕಾಟಾಚಾರಕ್ಕೆ ಎನ್ನುವಂತೆ ಮುಖದ ಯಾವುದೋ ಒಂದು ಭಾಗದಲ್ಲಿ ಮಾಸ್ಕ್ ಅನ್ನು ಧರಿಸಿಕೊಳ್ಳುತ್ತಿದ್ದಾರೆ,ಅದೂ ನಗರ ಪ್ರದೇಶದಲ್ಲಿ. ಹಾಗಾದರೆ, ಕೇಂದ್ರದ ಲೇಟೆಸ್ಟ್ ಸುತ್ತೋಲೆ ಏನನ್ನುತ್ತೆ?
ಯಾರೂ ಊಹಿಸದ ಮಾಸ್ಕ್ ಎನ್ನುವ ಉಸಿರುಗಟ್ಟಿಸುವ ವಸ್ತು
ಎರಡು ವರ್ಷದ ಹಿಂದೆ ಯಾರೂ ಊಹಿಸದ ಮಾಸ್ಕ್ ಎನ್ನುವ ಉಸಿರುಗಟ್ಟಿಸುವ ವಸ್ತುವೊಂದು ಜನರನ್ನು ಆವರಿಸಿಕೊಂಡಿತ್ತು. ಕಳೆದ ಕೆಲವು ತಿಂಗಳಿನಿಂದ ಮಾಸ್ಕ್ ಧರಿಸಲೇಬೆಕು ಎನ್ನುವ ನಿಯಮವಿದ್ದರೂ, ಜನರು ಹೆಚ್ಚಿಗೆ ತಲೆಕೆಡಿಸಿಕೊಳ್ಳಲು ಹೋಗುತ್ತಿರಲಿಲ್ಲ. ಅದರಲ್ಲೂ, ಟೈರ್ 2 ನಗರ/ಪಟ್ಟಣದ ಭಾಗದಲ್ಲಂತೂ ಮಾಸ್ಕ್ ಧರಿಸಿಕೊಂಡಿದ್ದರೆ, ನೀವು ಬೆಂಗಳೂರಿನವರಾ ಎಂದು ಪ್ರಶ್ನಿಸುತ್ತಿದ್ದರು ಇಲ್ಲವೇ ಮೇಲಿಂದ ಕೆಳಗೆ ನೋಡುತ್ತಿದ್ದರು. ಈಗ, ಏಪ್ರಿಲ್ 1, 2022ರಿಂದ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.
ಮಹಾರಾಷ್ಟ್ರದಲ್ಲಿ ಮುಂದಿನ ಆದೇಶದವರೆಗೆ ಮಾಸ್ಕ್ ಕಡ್ಡಾಯವಲ್ಲ
ಮಹಾರಾಷ್ಟ್ರದಲ್ಲಿ ಇನ್ನು ಮುಂದಿನ ಆದೇಶದವರೆಗೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಅಲ್ಲಿನ ಸರಕಾರ ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದಿಲ್ಲ ಎಂದು ಅಲ್ಲಿನ ಸರಕಾರಾ ಹೇಳಿದೆ. ಆದರೆ, ಇದು ದೇಶದ ಇತರ ಭಾಗಗಳಿಗೆ ಅನ್ವಯವಾಗುವುದಿಲ್ಲ. ಯಾಕೆಂದರೆ, ಮಾಸ್ಕ್ ಧರಿಸುವ ವಿಚಾರದಲ್ಲಿ ಹಿಂದಿನ ನಿಯಮಗಳನ್ನೇ ಪಾಲಿಸಬೇಕೆಂದು ಕೇಂದ್ರದ ಸುತ್ತೋಲೆಯಲ್ಲಿದೆ. ಆದಾಗ್ಯೂ, ಆಯಾಯ ರಾಜ್ಯಗಳು ಈ ವಿಚಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಕೇಂದ್ರದ ಸುತ್ತೋಲೆಯ ಸಾರಾಂಶ ಮುಂದಿನ ಸ್ಲೈಡಿನಲ್ಲಿ..
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹೊರಡಿಸಿರುವ ಆದೇಶ
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಮುಖ್ಯ ಕಾರ್ಯದರ್ಶಿಗಳಿಗೆ ದಿನಾಂಕ 22.03.2022ರಂದು ಹೊರಡಿಸಿದ ಆದೇಶದ ಪ್ರಕಾರ, ಕೋವಿಡ್ ಪ್ರಕರಣಗಳು ಕಮ್ಮಿಯಾಗುತ್ತಿರುವುದರಿಂದ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಜನರು ಲಸಿಕೆಯನ್ನು ತೆಗೆದುಕೊಂಡಿರುವುದರಿಂದ, ಫೆಬ್ರವರಿ 25, 2022ರಂದು ಹೊರಡಿಸಲಾಗಿದ್ದ ಸುತ್ತೋಲೆಯ ನಿರ್ಬಂಧವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೂ, ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕೆಂದು ಸರ್ಕ್ಯೂಲರ್ ನಲ್ಲಿ ಹೇಳಲಾಗಿದೆ.
ವಿಪತ್ತು ನಿರ್ವಹಣಾ ಕಾಯಿದೆ 2005
ಮದುವೆಗೆ, ತಿಥಿಗೆ, ಸ್ಮಶಾನಕ್ಕೆ ಹೋಗಲು ಇದ್ದ ಎಲ್ಲಾ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ, ಮಾಸ್ಕ್ ಧರಿಸುವುದನ್ನು ಸುತ್ತೋಲೆಯ ಪ್ರಕಾರ ಹಿಂದಕ್ಕೆ ಪಡೆಯಲಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಪ್ರದೇಶಗಳಲ್ಲಿ ಕಂಟೇನ್ಮೆಂಟ್ ಝೋನ್ ಎಂದು ನಿರ್ಬಂಧಿಸುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಶರ್ ಬಳಸುವುದನ್ನು ಮುಂದುವರಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯಿದೆ 2005ರ ಪ್ರಕಾರ, ಆಯಾಯ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಲಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
Recommended Video