15 ವರ್ಷಗಳ ಬಳಿಕ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನವಿಲ್ಲ!
Recommended Video
ಬೆಂಗಳೂರು, ಆಗಸ್ಟ್ 20 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. 17 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಜಾರಕಿಹೊಳಿ ಕುಟುಂಬದಿಂದ ಯಾರೂ ಸಚಿವರಾಗಿಲ್ಲ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಸಚಿವರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸೋಮವಾರ ಬಂದ ಪಟ್ಟಿಯಲ್ಲಿ ಅವರ ಹೆಸರು ಇತ್ತು. ಆದರೆ, ಮಂಗಳವಾರ ಬೆಳಗ್ಗೆ ಪಟ್ಟಿ ದಿಢೀರ್ ಬದಲಾಗಿದ್ದು, ಸಚಿವ ಸ್ಥಾನ ಕೈ ತಪ್ಪಿದೆ.
ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. "ನಮಗೆ ಶಾಕ್ ಆಗಿದೆ ಶಾಸಕರು ಮುತುವರ್ಜಿ ವಹಿಸಿ ಕ್ಷೇತ್ರದ ತುಂಬಾ ಓಡಾಡುತ್ತಿದ್ದರು. ಮೊದಲ ಪಟ್ಟಿಯಲ್ಲಿಯೇ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು" ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳಲ್ಲಿ ಜಾರಕಿಹೊಳಿ ಕುಟುಂಬದ ಒಬ್ಬರು ಸದಸ್ಯರು ಯಾವುದೇ ಸರ್ಕಾರವಿದ್ದರೂ ಸಚಿವರಾಗಿದ್ದರು. ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬದ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಯಡಿಯೂರಪ್ಪ 2ನೇ ಬಾರಿ ಸಂಪುಟ ವಿಸ್ತರಣೆ ಮಾಡುವಾಗ ರಮೇಶ್ ಅಥವ ಬಾಲಚಂದ್ರ ಜಾರಕಿಹೊಳಿ ಸಚಿವರಾಗುವುದು ಖಚಿತವಾಗಿದೆ.

ಮೂವರು ಶಾಸಕರು ಇದ್ದಾರೆ
ಜಾರಕಿಹೊಳಿ ಕುಟುಂಬದಲ್ಲಿ ಮೂವರು ಶಾಸಕರು ಇದ್ದಾರೆ. ಗೋಕಾಕ್ ರಮೇಶ್ ಜಾರಕಿಹೊಳಿ (ಅನರ್ಹ), ಯಮಕನಮರಡಿ ಸತೀಶ್ ಜಾರಕಿಹೊಳಿ (ಕಾಂಗ್ರೆಸ್), ಅರಭಾವಿ ಬಾಲಚಂದ್ರ ಜಾರಕಿಹೊಳಿ (ಬಿಜೆಪಿ) ಯಲ್ಲಿದ್ದಾರೆ. ಆದರೆ, ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ.

15 ವರ್ಷ ಕುಟುಂಬದ ಒಬ್ಬರು ಸಚಿವರು
ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜಾರಕಿಹೊಳಿ ಕುಟುಂಬದ ಒಬ್ಬರು ಸಚಿವರಾಗಿದ್ದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ, ಬಳಿಕ ಬಿಜೆಪಿ ಸರ್ಕಾರದಲ್ಲಿ ಪುನಃ ಬಾಲಚಂದ್ರ ಜಾರಕಿಹೊಳಿ, ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿಯೂ ಸಹ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಚಿವ ಸ್ಥಾನದಲ್ಲಿದ್ದರು.

ಉದ್ಯಮ ಮತ್ತು ರಾಜಕೀಯ
ಹಲವಾರು ಸಕ್ಕರೆ ಕಾರ್ಖನೆಗಳನ್ನು ಹೊಂದಿರುವ ಜಾರಕಿಹೊಳಿ ಕುಟುಂಬದವರು ದೊಡ್ಡ ಉದ್ಯಮಿಗಳು. ಉದ್ಯಮದ ಜೊತೆ ರಾಜಕೀಯವನ್ನು ಮಾಡುತ್ತಾ ಬಂದಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಸಹೋದರರು ಗುರುತಿಸಿಕೊಂಡಿದ್ದಾರೆ.

ಬೆಳಗಾವಿ ರಾಜಕೀಯವೇ ಬೇರೆ
ಕರ್ನಾಟಕದ ರಾಜಕೀಯದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯವೇ ವಿಭಿನ್ನವಾದದ್ದು. ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳು ದಶಕಗಳಿಂದ ರಾಜಕೀಯದ ಮೇಲೆ ಪ್ರಭಾವ ಬೀರಿವೆ. ಆದರೆ, ಯಡಿಯೂರಪ್ಪ ಸಂಪುಟದಲ್ಲಿ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.












Click it and Unblock the Notifications