'ಕೊಡವರ ಕಾರ್ಯಕ್ರಮಕ್ಕೆ ಸಿಎಂ ಸಿದ್ದುಗೆ ಆಹ್ವಾನ ಬೇಡ'
ಕೊಡಗು, ಫೆಬ್ರವರಿ 27 : 'ಮೈಸೂರಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮೈಸೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆಯಲಿರುವ ಕೊಡವ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಬಾರದು' ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡವ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಯಾವುದೇ ಕೊಡವರು ಹಾಗೂ ಕೊಡವ ಸಮಾಜಗಳು ಈ ಸಮ್ಮೇಳನದಲ್ಲಿ ಭಾಗವಹಿಸಬಾರದು' ಎಂದು ಕರೆ ನೀಡಿದರು. [ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

'ಕೊಡಗು ಜಿಲ್ಲೆಯಲ್ಲಿ ಕೊಡವರ ನರಮೇಧ ಹಾಗೂ ಮತಾಂತರ ಮಾಡಿದ ಟಿಪ್ಪುವಿನ ಜನ್ಮ ದಿನವನ್ನು ಆಚರಿಸುವ ಮೂಲಕ ಕೊಡವರಿಗೆ ಸಿದ್ದರಾಮಯ್ಯ ಅವರು ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ಸ್ವಾಭಿಮಾನಿ ಕೊಡವರು ಭಾಗವಹಿಸಲಾರರು' ಎಂದು ಹೇಳಿದರು. ['ನವೆಂಬರ್ 10ರಂದು ಟಿಪ್ಪು ಜಯಂತಿ ಏಕೆ?']
'ಮೈಸೂರಿನಲ್ಲಿ ಅಕಾಡೆಮಿಯಿಂದ ಆಯೋಜಿಸಿರುವ ಸಮ್ಮೇಳನಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿಸುವ ಕ್ರಮವನ್ನು ಕೈಬಿಡಬೇಕು. ಮೈಸೂರು ಕೊಡವ ಸಮಾಜದವರು ಕೂಡ ಈ ಬಗ್ಗೆ ಚಿಂತನೆ ಮಾಡಬೇಕು' ಎಂದು ಕಿವಿಮಾತು ಹೇಳಿದರು. [ಮಡಿಕೇರಿ ಗಲಭೆ : ಕುಟ್ಟಪ್ಪ ಸಾವಿನ ಪ್ರತೀಕಾರಕ್ಕೆ ಹಮೀದ್ ಹತ್ಯೆ]
'ಕೊಡವರು ಹಾಗೂ ಕೊಡಗಿಗೆ ಟಿಪ್ಪು ಸುಲ್ತಾನ್ ಮಾಡಿರುವ ಅನ್ಯಾಯ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸುವ ಮೂಲಕ ಮತ್ತೊಮ್ಮೆ ಕೊಡವರ ಸ್ವಾಭಿಮಾನವನ್ನು ಕೆಣಕ್ಕಿದ ಹಿನ್ನೆಲೆಯಲ್ಲಿ ಕೊಡವರ ಯಾವುದೇ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಕೂಡದೆಂದು' ಅಪ್ಪಚ್ಚುರಂಜನ್ ತಿಳಿಸಿದರು.












Click it and Unblock the Notifications