ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಜನವರಿ 13 : 'ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸಲು ರಾಕೇಶ್ ಬಯಸಿದ್ದ. ಆದರೆ, ಆತನ ಸಕ್ರಿಯ ರಾಜಕೀಯ ಪ್ರವೇಶದ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, 'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ' ಎಂದು ಹೇಳಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು. [ಚಾಮುಂಡೇಶ್ವರಿ : ಜಿಟಿ ದೇವೇಗೌಡರ ಸತ್ವ ಪರೀಕ್ಷೆ]
ವರುಣಾ ಕ್ಷೇತ್ರವನ್ನು ಪುತ್ರ ರಾಕೇಶ್ಗೆ ಬಿಟ್ಟು ಕೊಡಲಿರುವ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು ರಾಕೇಶ್ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. [ಪುತ್ರ ಪಟ್ಟಾಭಿಷೇಕದ ಸುಳಿವು ನೀಡಿದ ಸಿದ್ದರಾಮಯ್ಯ]
'ನನಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಅನ್ನಿಸಿದ ಮಾತ್ರಕ್ಕೆ ವರುಣಾ ಕ್ಷೇತ್ರವನ್ನು ತೊರೆಯುತ್ತೇನೆ ಎಂದು ಅರ್ಥವಲ್ಲ. ಏಳು ಸಲ ಆಯ್ಕೆಯಾಗಿರುವ ಕ್ಷೇತ್ರದ ಬಗ್ಗೆ ಒಲವು ಸ್ವಾಭಾವಿಕ. ಅಂದ ಮಾತ್ರಕ್ಕೆ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಅಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ....
'ಯಾವುದೇ ನಿರ್ಧಾರ ಕೈಗೊಂಡಿಲ್ಲ'
'ತಮ್ಮ ಮಗ ರಾಕೇಶ್ ಸಕ್ರಿಯ ರಾಜಕೀಯ ಪ್ರವೇಶ ಮಾಡುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ನಾನು ಸಕ್ರಿಯ ರಾಜಕಾರಣದಲ್ಲಿರುವ ತನಕ ಮಗನನ್ನು ರಾಜಕಾರಣಕ್ಕೆ ಇಳಿಸಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
'ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ'
'ಕಳೆದ ಎರಡು ಚುನಾವಣೆಗಳಿಂದಲೂ ವಿಧಾನಸಭೆಗೆ ಸ್ಪರ್ಧಿಸಲು ರಾಕೇಶ್ ಬಯಸಿದ್ದಾನೆ. ಆದರೆ, ಈ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
'ಜನರ ನಡುವಿನಿಂದ ಆರಿಸಿ ಬರಬೇಕು'
'ಯಾವುದೇ ರಾಜಕಾರಣಿಯನ್ನು ಮೇಲಿನಿಂದ ಹೇರಬಾರದು. ಜನರ ನಡುವಿನಿಂದ ಆರಿಸಿಬರಬೇಕು. ಜನರೇ ಆರಿಸಿ ಕಳುಹಿಸಬೇಕು. ರಾಕೇಶ್ ರಾಜಕೀಯ ಪ್ರವೇಶವನ್ನೂ ಜನರೇ ನಿರ್ಧರಿಸಲಿದ್ದಾರೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
'ವರುಣಾ ಕ್ಷೇತ್ರ ಬಿಡುತ್ತೇನೆ ಎಂದು ಅರ್ಥವಲ್ಲ'
'ನನಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನಿಸಿದರೆ ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುತ್ತೇನೆ ಎಂದು ಅರ್ಥವಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು ತುಂಬಾ ಒಳ್ಳೆಯವರು. ನನ್ನನ್ನು ಗೆಲ್ಲಿಸಿ ರಾಜಕೀಯ ಪುರ್ನಜನ್ಮ ನೀಡಿದವರು. ಆದ್ದರಿಂದ, ಸ್ವಾಭಾವಿಕವಾಗಿ ಕ್ಷೇತ್ರದ ಮೇಲೆ ಒಲವಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
'ಕ್ಷೇತ್ರದಲ್ಲಿ 7 ಸಲ ಗೆದ್ದಿದ್ದೇನೆ'
'ಚಾಮುಂಡೇಶ್ವರಿ ಕ್ಷೇತ್ರದಲ್ಲಿ 7 ಸಲ ಜಯಗಳಿಸಿದ್ದೇನೆ. ಆದ್ದರಿಂದ ಕ್ಷೇತ್ರದ ಮೇಲೆ ಹೆಚ್ಚು ಪ್ರೀತಿ ಇದೆ. ಇದರ ಅರ್ಥ ನಾನು ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದಲ್ಲ' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ರಾಕೇಶ್ ರಾಜಕೀಯದ ಚರ್ಚೆ ಏಕೆ ಬಂತು?
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, 'ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು' ಇದರಿಂದಾಗಿ ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿತ್ತು.