ಕೊಡಗಿನಲ್ಲಿ ಕಾಫಿ ಘಮಲೂ ಇಲ್ಲ, ಜೇನಿನ ಝೇಂಕಾರವೂ ಇಲ್ಲ!
ಮಡಿಕೇರಿ, ಮಾರ್ಚ್ 26 : ಮೋಡಗಳ ಸುಳಿವಿಲ್ಲ, ಮಳೆಯ ಸೂಚನೆಯೂ ಇಲ್ಲ, ಕಾಫಿ ಗಿಡದಲ್ಲಿ ಹೂ ಅರಳಿಲ್ಲ, ಹೂಗಳ ಘಮಲು ಮೂಗಿಗೆ ಅಡರುತ್ತಿಲ್ಲ, ಹೀಗಾಗಿ ಜೇನ್ನೊಣಗಳ ಝೇಂಕಾರವೂ ಕೇಳಿಬರುತ್ತಿಲ್ಲ. ಇದು ಕೊಡಗಿನ ಕಾಫಿ ತೋಟಗಳಲ್ಲಿ ಕಂಡುಬರುತ್ತಿರುವ ದೃಶ್ಯ.
ಇದಕ್ಕೆಲ್ಲ ಕಾರಣ ಮಾರ್ಚ್ ತಿಂಗಳಲ್ಲಿ ಮಳೆ ಕೈಕೊಟ್ಟಿರುವುದು. ಇಷ್ಟರಲ್ಲೇ ಕೊಡಗಿನಲ್ಲಿ ಮಳೆ ಸುರಿಯಬೇಕಿತ್ತು. ಮಳೆ ಸುರಿದರೆ ಕಾಫಿ ಹೂ ಅರಳಿ ಫಸಲು ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ, ಈ ಬಾರಿ ಅದೇನು ಕಾದಿದೆಯೋ ಆ ಕಾವೇರಮ್ಮನೇ ಬಲ್ಲಳು.
ಮಳೆರಾಯನಿಗಾಗಿ ಪ್ರಾರ್ಥನೆ : ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್ ತಿಂಗಳ ಮೊದಲ ವಾರದಲ್ಲೇ ಮಳೆ ಸುರಿಯುತ್ತಿತ್ತು. ಆದರೆ ಈ ಬಾರಿ ಮಳೆ ಸುರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ನೀರಿನ ಸೌಲಭ್ಯ ಇರುವವರು ಸ್ಪಿಂಕ್ಲರ್ ಮೂಲಕ ನೀರು ಹಾಯಿಸಿ ಕಾಫಿ ಹೂ ಅರಳಿಸಿದ್ದರೆ, ಉಳಿದ ಬೆಳೆಗಾರರು ಮುಗಿಲತ್ತ ದೃಷ್ಟಿನೆಟ್ಟು ಮಳೆಗಾಗಿ ಕಾಯುತ್ತಿದ್ದಾರೆ. [ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ]
ಕಾಫಿ ಕೊಯ್ಲು ಮುಗಿದ ಬಳಿಕ ನೀರು ಹಾಯಿಸಿದರೆ ಹೂ ಅರಳುತ್ತದೆ. ಹೂವು ಅರಳಿದ ಕೆಲವು ದಿನಗಳಲ್ಲಿ ಮತ್ತೊಮ್ಮೆ ನೀರು ಹಾಯಿಸಬೇಕು, ಆಗ ಪರಾಗಸ್ಪರ್ಶವಾದ ಹೂ ಮಿಡಿಗಚ್ಚಲು ಸಾಧ್ಯವಾಗುತ್ತದೆ. ಆದರೆ ಒಮ್ಮೆ ನೀರು ಹಾಯಿಸಿದ ಬೆಳೆಗಾರರಿಗೆ ಎರಡನೇ ಬಾರಿಗೆ ಹಾಯಿಸಲು ನೀರಿನ ಕೊರತೆಯುಂಟಾಗಿದೆ.
ಕೊಡಗಿನ ನಾಪೋಕ್ಲು ಸೇರಿದಂತೆ ಕೆಲವೆಡೆ ಮಾತ್ರ ಅಲ್ಪಸ್ವಲ್ಪ ಮಳೆ ಸುರಿದಿದೆ. ಈ ವ್ಯಾಪ್ತಿಯಲ್ಲಿ ಕಾಫಿ ಹೂ ಅರಳಿ ಬೆಳೆಗಾರನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಉಳಿದಂತೆ ಮಳೆ ಬಾರದ ಕಾರಣ ಕಾಫಿ ಗಿಡಗಳಲ್ಲಿ ಬಂದಿರುವ ಮೊಗ್ಗುಗಳು ಬಿಸಿಲಿಗೆ ಒಣಗುತ್ತಿವೆ. ಒಂದು ವೇಳೆ ಮಳೆ ಬಾರದೆ ಹೋದರೆ ಸಣ್ಣಬೆಳೆಗಾರ ಭಾರೀ ತೊಂದರೆ ಅನುಭವಿಸಬೇಕಾಗಿ ಬರಬಹುದು. [ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]
ಘಮಲೂ ಇಲ್ಲ ಝೇಂಕಾರವೂ ಇಲ್ಲ : ಮೊದಲೆಲ್ಲ ಕಾಫಿ ಹೂ ಅರಳಿ ಘಮ್ಮೆನ್ನುತ್ತಿದ್ದರೆ, ಮತ್ತೊಂದೆಡೆ ಜೇನು ಹುಳುಗಳ ಝೇಂಕಾರ ಕೇಳಿ ಬರುತ್ತಿತ್ತು. ಹೂವಿಂದ ಹೂವಿಗೆ ಹಾರುವ, ಮಕರಂದ ಹೀರುವ ವಿವಿಧ ಬಗೆಯ ಜೇನುನೊಣಗಳನ್ನು ನೋಡುವುದೇ ಖುಷಿ ಕೊಡುತ್ತಿತ್ತು.
ಕಳೆದ ಕೆಲ ದಶಕಗಳಿಂದ ಜೇನುನೊಣಗಳಿಗೆ ಬಾಧಿಸುವ ರೋಗದಿಂದಾಗಿ ಅವುಗಳು ನಾಶವಾಗುತ್ತಿವೆ. ಜೇನುನೊಣಗಳ ಸಂಖ್ಯೆ ಕಡಿಮೆಯಾಗಿರುವುದು ಕಾಫಿ ಫಸಲಿನ ಮೇಲೆ ಪರಿಣಾಮ ಬೀರಿದೆ. ಕಾಫಿ ಗಿಡಗಳಲ್ಲಿ ಹೂ ಅರಳಿದರೂ ಪರಾಗಸ್ಪರ್ಶವಾಗದೆ ಕಾಯಿಕಚ್ಚುತ್ತಿಲ್ಲ.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಗಸದಲ್ಲಿ ಕಾರ್ಮೋಡ ಕಾಣಬರುತ್ತಿದೆ. ಬೆಳೆಗಾರರು ಆಗಸದತ್ತ ದೃಷ್ಟಿ ಹರಿಸುತ್ತಾ ತಮ್ಮ ಕಾಯಕದಲ್ಲಿ ತೊಡಗಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದ ಕೃಷಿಕನ ಜೊತೆ ಮಳೆರಾಯ ಜೂಜಾಡುತ್ತಿದ್ದಾನೆ ಎಂಬ ಮಾತು ಜಿಲ್ಲೆಯ ಕಾಫಿ ಬೆಳೆಗಾರರ ಪಾಲಿಗೆ ಅಕ್ಷರಶಃ ನಿಜವಾಗಿದೆ. [ಯಾತ್ರೆ ಮುಗಿಸಿ ಹೊರಟು ನಿಂತ 'ಸುಳಿಮನೆ"ಯ ಹೃದಯವಂತ]