ಲೊಕಸಭಾ ಚುನಾವಣೆ: ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್, ಜೈಶಂಕರ್ ಸ್ಪರ್ಧೆ?
ಹುಬ್ಬಳ್ಳಿ, ಫೆಬ್ರವರಿ 27: ಲೋಕಸಭಾ ಚುನಾವಣೆ 2024ಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕಸರತ್ತು ನಡೆಯುತ್ತಿದೆ. ಈ ಮಧ್ಯೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಅವರು ಎಲ್ಲಿಂದ ಸ್ಪರ್ಧಿಸುತ್ತಾರೆ? ಎಂಬ ಪ್ರಶ್ನೆಗೆ ಸುಳಿವು ಸಿಕ್ಕಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಇವರಿಬ್ಬರು ಕರ್ನಾಟಕದಿಂದಲೇ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿ ಬಂದಿವೆ.

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಂತಹ ಸಚಿವರಾದ ನಿರ್ಮಲಾ ಸೀತಾಮಾನ್ ಹಾಗೂ ಜೈಶಂಕರ್ ಅವರು ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿವೆ. ಚುನಾವಣೆಗೂ ಮೊದಲು ಜೈಶಂಕರ್ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇಂತಹ ಚರ್ಚೆಗಳನ್ನು ಹುಟ್ಟು ಹಾಕಿದೆ. ಇವರಿಬ್ಬರು ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬ ಮಾತಿಗೆ ಸಾಕಷ್ಟು ಪುಷ್ಟಿ ಸಿಕ್ಕಿದೆ.
ಕರ್ನಾಟಕದಿಂದ ಸ್ಪರ್ಧೆ ಸಾಧ್ಯತೆ: ಜೋಶಿ
ಈ ಕುರಿತು ಸ್ವತಃ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿಯವರು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಭಾವಿ ಸಚಿವರು ಚುನಾವಣೆಗೆ ಸ್ಪರ್ಧಿಸುವುದು ಗ್ಯಾರಂಟಿಯಾಗಿದೆ. ಆದರೆ ಎಲ್ಲಿಂದ ಎಂದು ನಿರ್ಧರಿಸಲಾಗಿಲ್ಲ. ಇಬ್ಬರೂ ಕರ್ನಾಟಕ ಅಥವಾ ಇತರ ರಾಜ್ಯಗಳಿಂದ ಸ್ಪರ್ಧಿಸಬಹುದು ಎಂದಿದ್ದಾರೆ. ಈ ಮೂಲಕ ಸ್ಪರ್ಧೆಗೆ ಕರ್ನಾಟಕದಲ್ಲಿ ಸಾಧ್ಯತೆ ಇದೆ ಎಂಬ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಕಾಲ್ಪನಿಕ ಪ್ರಶ್ನೆಗೆ ಉತ್ತರಿಸಲ್ಲ
ಕರ್ನಾಟಕದಿಂದ ಸ್ಪರ್ಧಿಸಿದರೆ ಹಾಲಿ ಸಂಸದರು ಅವಕಾಶ ಕಳೆದುಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗೆ ಪ್ರಹ್ಲಾದ್ ಜೋಶಿಯವರು, ಇಬ್ಬರು ಸಚಿವರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ನಿರ್ಧರಿಸದ ಕಾರಣ ಕಾಲ್ಪನಿಕ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದರು.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಾಳೆ ಬುಧವಾರ ಹುಬ್ಬಳ್ಳಿಗೆ ಭೇಟಿ ಕೊಡಲಿದ್ದಾರೆ. ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಸಾಧನೆ ಕುರಿತು ಬುದ್ಧಿಜೀವಿಗಳು, ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮುಖ್ಯವಾಗಿ ಧಾರವಾಡದಿಂದ ನಾಲ್ಕು ಬಾರಿ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಅವರ ಸಾಧನೆಗಳ ಕುರಿತು ಕಿರುಪುಸ್ತಕವನ್ನು ಅವರು ಇದೇ ವೇಳೆ ಬಿಡುಗಡೆ ಮಾಡಲಿದ್ದಾರೆ.
ಮಂಡ್ಯ ಸ್ಪರ್ಧೆ ಗೊಂದಲ ಶೀಘ್ರ ನಿವಾರಣೆ
ಇನ್ನೂ ರಾಜ್ಯದಲ್ಲಿ ಹೆಚ್ಚು ಚರ್ಚೆಗೆ ಬರುವ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ, ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಸ್ಪರ್ಧಿಸುವಂತೆ ಪ್ರಹ್ಲಾದ್ ಜೋಶಿಯವರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸುಮಲತಾ ಅವರದ್ದು ಎಲ್ಲಿಂದ ಸ್ಪರ್ಧೆ ಎಂಬ ಬಗ್ಗೆ ಕೇಂದ್ರ ನಾಯಕತ್ವ ಶೀಘ್ರದಲ್ಲಿಯೇ ಎಲ್ಲ ಗೊಂದಲಗಳನ್ನು ನಿವಾರಿಸಲಿದೆ ಎಂದು ಜೋಶಿ ತಿಳಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮೈತ್ರಿಕೂಟದ ಪಾಲುದಾರ ಜೆಡಿಎಸ್ನಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಾಮಾನ್ಯವಾದರು ಸಹ ಅವೆಲ್ಲವನ್ನು ಬಗೆಹರಿಸಕುದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications