ಕೊರೊನಾಕ್ಕಿಂತ ಭೀಕರ ಈ ರೋಗ, ಎಚ್ಚರಿಕೆ ಅಗತ್ಯ!
ಬೆಂಗಳೂರು, ಅ. 29: ರಾಜ್ಯದಲ್ಲಿ ಪ್ರತಿ ವರ್ಷ 70 ರಿಂದ 80 ಸಾವಿರ ಜನರು ಪಾರ್ಶ್ವವಾಯು (ಸ್ಟ್ರೋಕ್) ಪೀಡಿತರಾಗುತ್ತಿದ್ದು, ಈ ಪೈಕಿ 35,000 ಜನರು ಸಾವಿಗೀಡಾಗುತ್ತಿದ್ದಾರೆ ಎಂಬ ಕಳವಳಕಾರಿ ಮಾಹಿತಿಯನ್ನು ನಿಮ್ಹಾನ್ಸ್ ನಿರ್ದೇಶಕ ಡಾ.ಡಿ. ಗುರುರಾಜ್ ನೀಡಿದರು. ವಿಧಾನ ಸೌಧದ ಸಮಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 'ವಿಶ್ವ ಪಾರ್ಶ್ವವಾಯು ದಿನ'ದ ನಿಮಿತ್ತ ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ನಿರ್ವಹಣೆ ಕುರಿತು ವೈದ್ಯರು ಹಾಗೂ ನರ್ಸ್ಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ, ಅತಿಯಾದ ತೂಕ ಇತ್ಯಾದಿ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿದ್ದು, ಇವು ಲಕ್ವ ರೋಗ ಉಲ್ಬಣಕ್ಕೂ ಎಡೆಮಾಡಿಕೊಟ್ಟಿವೆ. ಅಪಾಯಕಾರಿ ಬೆಳವಣಿಗೆ ಕಾಣುತ್ತಿರುವ ಸ್ಟ್ರೋಕ್ ಹತೋಟಿಗೆ ಜನರಲ್ಲಿ ಜಾಗೃತಿ, ತ್ವರಿತ ಚಿಕಿತ್ಸಾ ಕ್ರಮಗಳು ಅಗತ್ಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸದ್ಯದ ಅಂಕಿ-ಅಂಶಗಳ ಪ್ರಕಾರ 6 ಲಕ್ಷ ಪಾರ್ಶ್ವವಾಯು ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ 1 ಲಕ್ಷ ಜನರಿಗೆ 119 ರಿಂದ 145 ಜನರು ಲಕ್ವ ಬಾಧಿತರಾಗುತ್ತಿದ್ದಾರೆ. ವಾರ್ಷಿಕ 1 ಲಕ್ಷ ಪಾರ್ಶ್ವ ವಾಯು ರೋಗಿಗಳ ಪೈಕಿ 73 ಜನರು ಮರಣ ಹೊಂದುತ್ತಿದ್ದಾರೆ. 6 ಜನರಲ್ಲಿ ಒಬ್ಬರು ಸ್ಟ್ರೋಕ್ ಗೆ ಈಡಾಗುತ್ತಾರೆ ಎಂದರು ವಿವರಿಸಿದರು.
ಲಕ್ವ ಅಥವಾ ಪಾರ್ಶ್ವವಾಯು ರೋಗದಿಂದ ಬಚಾವಾಗಲು ನಿಮ್ಹಾನ್ಸ್ ನಿರ್ದೇಶಕ ಡಾ. ಡಿ. ಗುರುರಾಜ್ ಅವರು ಸಲಹೆಗಳನ್ನು ಕೂಡ ಅವರು ವಿವರಿಸಿದ್ದಾರೆ.

ಪಾರ್ಶ್ವವಾಯು ಹೇಗೆ ಸಂಭವಿಸುತ್ತಿದೆ?
ರಕ್ತನಾಳಗಳ ಅಡಚಣೆಯಿಂದಾಗಿ ಮೆದುಳಿಗೆ ಹಠಾತ್ ರಕ್ತದ ಹರಿವು ಸ್ಥಗಿತವಾಗುವುದರಿಂದ ಪಾರ್ಶ್ವವಾಯು ಸಂಭವಿಸುತ್ತಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯದಿದ್ದರೆ ಸಾವು ಸಂಭವಿಸುತ್ತದೆ. ಅದರಲ್ಲೂ ಬಡವರು ಈ ರೋಗ ಪೀಡಿತರಾದರೆ ಚಿಕಿತ್ಸೆ, ಪುನರ್ವಸತಿ ಕಡು ಕಷ್ಟವಾಗಲಿದೆ.
ವ್ಯಾಯಾಮ, ದೈಹಿಕ ಚಟುವಟಿಕೆಗಳ ಕೊರತೆ, ಸರಿಯಾದ ವೇಳೆಗೆ ಊಟ-ಉಪಾಹಾರ ಮಾಡದಿರುವುದು, ಧೂಮಪಾನ, ಮದ್ಯಪಾನ ಮುಂತಾದ ದುಷ್ಚಟಗಳಿಂದಾಗಿ ಲಕ್ವ ಬಾಧಿತರು ಹೆಚ್ಚುತ್ತಿದ್ದಾರೆ ಎಂದು ಡಾ. ಗುರುರಾಜ್ ಆತಂಕ ವ್ಯಕ್ತಪಡಿಸಿದರು.

ವಿನೂತನ ಕಾರ್ಯಕ್ರಮ
ಪರಿಸ್ಥಿತಿ ಗಂಭೀರತೆ ಅರಿತ ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಪಾರ್ಶ್ವವಾಯು ನಿಯಂತ್ರಣ ಮತ್ತು ನಿರ್ವಹಣೆಗಾಗಿ ವಿನೂತನ ಕಾರ್ಯಕ್ರಮ ರೂಪಿಸಿದೆ. 2 ವರ್ಷಗಳ ನಿರಂತರ ಪ್ರಯತ್ನದ ಬಳಿಕ ವಿಶಿಷ್ಟ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಭಾಗಶಃ ಒಪ್ಪಿಗೆ ನೀಡಿದೆ ಎಂದರು.
ಸಕಾಲಕ್ಕೆ ರೋಗ ಗುರುತಿಸುವುದು, ಸ್ಟ್ರೋಕ್ ಆರೈಕೆ ಕೇಂದ್ರ ತೆರೆಯುವುದು, ತ್ವರಿತ ಮತ್ತು ಉತ್ತಮ ಚಿಕಿತ್ಸೆ, ಮುಂಜಾಗ್ರತೆ, ಸಾಮರ್ಥ್ಯ ವೃದ್ಧಿ ಇತ್ಯಾದಿ ಚಟುವಟಿಕೆಗಳನ್ನು ವಿನೂತನ ಕಾರ್ಯಕ್ರಮ ಒಳಗೊಂಡಿದೆ ಎಂದು ತಿಳಿಸಿದರು.

ಜನ ಜಾಗೃತಿ ಕಾರ್ಯಕ್ರಮ
ಗುರುತಿಸಿವಿಕೆ, ಆರೈಕೆ ಮತ್ತು ಸಾಮರ್ಥ್ಯ ವೃದ್ಧಿಯ ಭಾಗವಾಗಿ ಮೊದಲ ಹಂತದಲ್ಲಿ ಬೆಂಗಳೂರಿನ 16 ಆಸ್ಪತ್ರೆಗಳ ವೈದ್ಯರು, ನರ್ಸ್ಗಳಿಗೆ ತರಬೇತಿ ನೀಡಲಾಗುತ್ತದೆ. ಹಂತ ಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲಾಗುವುದು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ನಿಮ್ಹಾನ್ಸ್ ಹಾಗೂ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ತರಬೇತಿ, ಸಾಮರ್ಥ್ಯ, ಚಿಕಿತ್ಸಾ ಸವಲತ್ತುಗಳ ವೃದ್ಧಿ, ತ್ವರಿತ ಕ್ರಮ ಹಾಗೂ ಜನ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಡಾ.ಡಿ.ಗುರುರಾಜ್ ಹೇಳಿದರು.
Recommended Video

ತೀವ್ರತರ ಸ್ಟ್ರೋಕ್ ಸಂಹಿತೆ ಪುಸ್ತಕ
ಇದೇ ಸಂದರ್ಭದಲ್ಲಿ ತೀವ್ರತರ ಸ್ಟ್ರೋಕ್ ಸಂಹಿತೆ ಪುಸ್ತಕ, ಜಾಗೃತಿ ಮೂಡಿಸುವ ಕೈಪಿಡಿ, ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಿದರು. ನಿಮ್ಹಾನ್ಸ್ ರಜಿಸ್ಟ್ರಾರ್ ಶಂಕರ ನಾರಾಯಣ, ಡಾ. ಗಿರೀಶ್ ರಾವ್, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ಹಾಜರಿದ್ದರು.












Click it and Unblock the Notifications