'ರಾಷ್ಟ್ರಪತಿ ಚುನಾವಣೆಗೆ ದೇವೇಗೌಡ್ರ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇಲ್ಲ'
ಬೆಂಗಳೂರು, ಜೂನ್ 15: ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ಒಮ್ಮತದಿಂದ ಚರ್ಚಿಸಿ, ನಿರ್ಧರಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಪಕ್ಷಗಳ ಸಭೆಯನ್ನು ಇಂದು ಆಯೋಜಿಸಿದ್ದಾರೆ. ಮುಖಂಡರನ್ನು ಖುದ್ದಾಗಿ ಮಮತಾ ಸ್ವಾಗತಿಸುತ್ತಿದ್ದಾರೆ.
ಈ ಸಭೆಯಲ್ಲಿ ಭಾಗವಹಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ದೆಹಲಿಗೆ ಪಯಣಿಸಿದ್ದಾರೆ. ದೇವೇಗೌಡ್ರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುತ್ತಾರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉತ್ತರಿಸಿದ್ದಾರೆ.
"ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಮಮತಾ ಬ್ಯಾನರ್ಜಿ ಅವರು ಪ್ರಾದೇಶಿಕ ಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾಗಿಯಾಗಿದ್ದಾರೆ".

"ಕಳೆದ ಬಾರಿ ಕೆಸಿಆರ್ ಅವರ ಭೇಟಿ ವೇಳೆ ಕೂಡಾ ರಾಷ್ಟ್ರಮಟ್ಟದ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ರಾಷ್ಟ್ರಪತಿ ಚುನಾವಣೆಗೆ ಜೆಡಿಎಸ್ ವರಿಷ್ಠರಾದ ದೇವೇಗೌಡರ ಸ್ಫರ್ಧೆ ವಿಚಾರವಾಗಿ ನನಗೆ ಮಾಹಿತಿ ಇಲ್ಲ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹಿಂದಿ ಹೇರಿಕೆಯ ವಿಚಾರದಲ್ಲಿ ಮಾತನಾಡುತ್ತಾ," ರಾಜ್ಯದಲ್ಲಿ ನಡೆಯುವ ಬಿಜೆಪಿ ಕಾರ್ಯಕ್ರಮಗಳಲ್ಲಿ ಹಿಂದಿ ಭಾಷೆಯನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಕನ್ನಡಿಗರು ಮಣಿಯಬಾರದು. ಇದು ಮುಂದೆ ನಮ್ಮ ನೆಲ, ಜಲದ ಮೇಲೆ ಪರಿಣಾಮ ಬೀರುತ್ತದೆ"ಎಂದು ನಿಖಿಲ್ ಅಭಿಪ್ರಾಯ ಪಟ್ಟರು.

ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಾಮಾಜಿಕ ಜಾಲಾತಾಣ ಕಾರ್ಯಕರ್ತರ ಸಂಘಟನಾ ಸಭೆ ನಡೆಯಿತು. "ಮೈಸೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ. ಅಲ್ಲೂ ಕೂಡಾ ಹಿಂದಿಯ ಫ್ಲೆಕ್ಸ್ , ಬ್ಯಾನರ್ಸ್ ಬಳಸಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು" ಎಂದು ಎಚ್ಚರಿಸಿದರು.
"ಸೋಷಿಯಲ್ ಮಿಡಿಯಾ ಪ್ಲಾಟ್ ಫಾರ್ಮ್ ಅನ್ನು ಬಹಳ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು. ಪಾಸಿಟಿವ್ ಆಗಿ ಬಳಕೆ ಮಾಡಿಕೊಳ್ಳಬಹುದು, ನೆಗೆಟಿವ್ ಆಗಿ ಬಳಸಿಕೊಳ್ಳಬಹುದು. ಆದರೆ, ಎಲ್ಲೂ ಕೂಡ ನೆಗೆಟಿವಿಟಿಗೆ ಆಸ್ಪದ ಕೊಡದೆ ಪಾಸಿಟಿವ್ ಆಗಿ ಬಳಸಿಕೊಳ್ಳುವಂತೆ ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಬೇಕಿದೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.












Click it and Unblock the Notifications