ಡಿ.23ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ
ಬೆಂಗಳೂರು, ಡಿಸೆಂಬರ್ 23: ವಿಶ್ವದಲ್ಲಿ ರೂಪಾಂತರ ಕೊರೊನಾ ವೈರಸ್ ಅಲೆ ಪ್ರಾರಂಭವಾಗಿದ್ದರಿಂದ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ (ಡಿ.23) ಜಾರಿಯಾಗಲಿದೆ.
Recommended Video
ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದು, ರಾತ್ರಿ ಕರ್ಫ್ಯೂ (ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ) ವಿಧಿಸುತ್ತದೆ. ಇದು ಜನವರಿ 2 ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಜನರು ಅಧಿಕ ಸಂಖ್ಯೆಯಲ್ಲಿ ಒಂದೆಡೆ ಪಾರ್ಟಿಗೆ ಸೇರುವುದು ಸಾಮಾನ್ಯವಾಗಿದ್ದು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚು ಜನರು ರಾತ್ರಿ ಹೊತ್ತು ಒಂದೆಡೆ ಸೇರುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂನಂತಹ ನಿರ್ಧಾರ ಕೈಗೊಂಡಿದೆ.

ತುರ್ತು ಸೇವೆಗಳಿಗೆ ಮಾತ್ರ ಅವಕಾಶ
ಬ್ರಿಟನ್ ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಅಲೆ ಇದ್ದು, ಅಲ್ಲಿಂದ ಭಾರತಕ್ಕೆ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಈಗಾಗಲೇ ಸುಮಾರು ಜನರು ಬಂದಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕಾವೇರಿ ನಿವಾಸದಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಜೊತೆ ಮಾತುಕತೆ ನಡೆಸಿ ನಂತರ ಮಾಧ್ಯಮಗಳ ಎದುರು ನೈಟ್ ಕರ್ಫ್ಯೂ ಜಾರಿ ವಿಷಯ ತಿಳಿಸಿದರು. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಇರಲಿದ್ದು, ಉಳಿದ ಎಲ್ಲ ಸೇವೆಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ ಎಂದರು.

ನಿಗದಿಯಂತೆ ಶಾಲಾ-ಕಾಲೇಜುಗಳು ಆರಂಭ
ಇದೇ ವೇಳೆ ಮಾತು ಮುಂದುವರೆಸಿ, ನಿಗದಿಯಂತೆ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಮುಂದಿನ ದಿನಗಳಲ್ಲಿ ಬೇರೆ ಬೆಳವಣಿಗೆ ಕಂಡುಬಂದರೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು. ನಂತರ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್, ಇಡೀ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿದ್ದೇವೆ. ಅನಾವಶ್ಯಕ ಸಭೆ ಸೇರುವುದನ್ನು ನಿಷೇಧಿಸಿದ್ದು, ಹೊಸ ವರ್ಷಾಚರಣೆ ಇಲ್ಲ. ಬ್ರಿಟನ್ ಮೂಲದಿಂದ ನವೆಂಬರ್ 25 ರಿಂದ ಇಲ್ಲಿಯವರೆಗೆ ಬಂದಿರುವವರನ್ನು ಕಡ್ಡಾಯವಾಗಿ 28 ದಿನ ನಿಗಾ ಇರಿಸಲಾಗುತ್ತಿದ್ದು, ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಖ್ಯೆ ಮರೆಮಾಚುವುದು ಏನೂ ಇಲ್ಲ
ಈಗಾಗಲೇ ಬಂದು 14 ದಿನ ಆಗಿದ್ದರೆ ಅವರಿಗೆ ಅವರೇ ಸ್ವಯಂ 21 ದಿನ ನಿಗಾ ಇರಿಸಿಕೊಳ್ಳಬೇಕು, 14 ದಿನದಿಂದ ಈಗ ಬಂದಿರುವವರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಲಿದೆ. ರೋಗಲಕ್ಷಣ ಇರುವವರಿಗೆ ಆರ್.ಟಿ-ಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. 14 ಸಾವಿರ ಜನ ಬ್ರಿಟನ್ ನಿಂದ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದರು. ಆದರೆ ನಮ್ಮ ಸರ್ಕಾರಕ್ಕೆ ಸಾವು, ಸೋಂಕಿತರ ಸಂಖ್ಯೆ, ವಿದೇಶಿ ಪ್ರಯಾಣಿಕರ ಸಂಖ್ಯೆ ಮರೆಮಾಚಿ ಯಾವ ಸಾಧನೆ ಮಾಡುವ ಪ್ರಮೇಯ ಇಲ್ಲ. ಸಂಖ್ಯೆ ಮರೆಮಾಚುವುದು ಏನೂ ಇಲ್ಲ, ಹೇಳಿಕೆ ಕೊಡುವಾಗ ಸರಿಯಾಗಿ ಮಾಹಿತಿ ಕಲೆಹಾಕಿ ಎಂದು ತಿರುಗೇಟು ನೀಡಿದರು.

ಎರಡೇ ವಿಮಾನ ಮಾತ್ರ ದಿನ ನಿತ್ಯ ಸಂಚಾರ
2500 ಜನರು ಇಲ್ಲಿಯವರೆಗೆ ಬಂದಿದ್ದಾರೆ. ಎರಡೇ ವಿಮಾನ ಮಾತ್ರ ದಿನ ನಿತ್ಯ ಸಂಚಾರ ಮಾಡಿದ್ದು, ಏರ್ ಇಂಡಿಯಾ, ಬ್ರಿಟಿಷ್ ಏರ್ ವೇಸ್ ಎರಡು ವಿಮಾನ ಮಾತ್ರ ಸಂಚಾರ ಮಾಡಿವೆ. ಬಂದಿರುವ ಪ್ರಯಾಣಿಕರ ಮಾಹಿತಿ ಇದ್ದು, ಎಲ್ಲರ ತಪಾಸಣೆ ಮಾಡಲಿದ್ದೇವೆ ಎಂದರು.
ಎಸ್ ಜೀನ್ ಮಾಡುವ ವ್ಯವಸ್ಥೆ ಬೆಂಗಳೂರಿನಲ್ಲಿ ನಾಲ್ಕು ಕಡೆ ಇದೆ. ಎನ್ ಸಿಬಿಎಸ್, ನಿಮ್ಹಾನ್ಸ್, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಜನೆಟಿಕ್ ಸೀಕ್ವೆನ್ಸ್ ಪರೀಕ್ಷ ನಡೆಯಲಿದೆ ಎಂದು ಹೇಳಿದರು. ಕೊರೊನಾ ಪಾಸಿಟಿವ್ ಬಂದವರಿಗೆ ಮಾತ್ರ ಜನೆಟಿಕ್ ತಪಾಸಣೆ ಮಾಡಲಾಗುತ್ತದೆ. ಜೀನ್ ಸೀಲ್ವೆನ್ಸ್ ಪರೀಕ್ಷೆ ಉಚಿತವಾಗಿ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.












Click it and Unblock the Notifications