ಬ್ರಿಟನ್ ರೂಪಾಂತರ ಕೊರೊನಾ ಸೋಂಕು: ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭ ಮುಂದಕ್ಕೆ?
ಬೆಂಗಳೂರು, ಡಿ 22: ಪರಿಸ್ಥಿತಿ ಸ್ಲೋ ಎಂಡ್ ಸ್ಟಡಿಯಾಗಿ ಎಲ್ಲಾ ಒಂದು ಹಂತಕ್ಕೆ ಸುಧಾರಿಸಿಕೊಂಡು ಬರುತ್ತಿದೆ ಎನ್ನುವಾಗಲೇ ಹೊಸ ಪ್ರಭೇದದ ಕೊರೊನಾ ಸೋಂಕು ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಬ್ರಿಟನ್ ದೇಶದ ಹಲವು ನಗರಗಳನ್ನು ಈ ವೈರಸ್ ಈಗಾಗಲೇ ಲಾಕ್ ಡೌನ್ ಗೆ ತಳ್ಳಿದೆ.
ಕಳೆದ ಕೆಲವು ದಿನಗಳಿಂದ ಬ್ರಿಟನ್ ನಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಪದ್ದತಿ ಜಾರಿಯಲ್ಲಿರಲಿಲ್ಲ. ಕಳೆದ ಭಾನುವಾರದಂದು (ಡಿ 20) ಸುಮಾರು 450 ಪ್ರಯಾಣಿಕರು ಇಂಗ್ಲೆಂಡ್ ನಿಂದ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಪೈಕಿ 138 ಮಂದಿ ನೆಗೆಟೀವ್ ವರದಿಯನ್ನು ತಂದಿಲ್ಲ. ಹಾಗಾಗಿ, ಈ ಸೋಂಕು ರಾಜ್ಯಕ್ಕೂ ವಕ್ಕರಿಸಿಕೊಂಡಿತೇ ಎನ್ನುವ ಭಯ ಕಾಡಲಾರಂಭಿಸಿದೆ.
ಶಾಲಾ, ಕಾಲೇಜು ಆರಂಭಿಸಲು ಸರಕಾರಕ್ಕೆ ಒತ್ತಡವಿದ್ದರೂ ಈ ವಿಚಾರದಲ್ಲಿ ಅವಸರ ಪಟ್ಟಿರಲಿಲ್ಲ. ಕೊನೆಗೆ, ಸಮಿತಿ ಅನುಮೋದನೆ ನೀಡಿದ್ದರಿಂದ, ಜನವರಿ ಆರಂಭದಲ್ಲಿ ಹತ್ತನೇ ತರಗತಿಯಿಂದ ಶಾಲಾ ಕಾಲೇಜು ಆರಂಭಿಸುವ ನಿರ್ಧಾರಕ್ಕೆ ಸಿಎಂ ಯಡಿಯೂರಪ್ಪನವರು ಬಂದಿದ್ದರು.
ಆದರೆ, ಈಗ ಈ ರೂಪಾಂತರಗೊಂಡ ವೈರಸ್ ಮತ್ತೆ ಪರಿಸ್ಥಿತಿಯನ್ನು ಅನಿಶ್ಚಿತೆತೆಗೆ ತಳ್ಳಿದೆ. ಮಹಾರಾಷ್ಟ್ರದಲ್ಲಿ ಇಂದಿನಿಂದ (ಡಿ 22) ಮುಂದಿನ ಎರಡು ವಾರ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ರಾಜ್ಯದಲ್ಲೂ ಲಾಕ್ ಡೌನ್ ಮತ್ತು ಕರ್ಫ್ಯೂ ಭೂತ ಮತ್ತೆ ಕಾಡಲಿದೆಯೇ ಎನ್ನುವ ಭಯ ಜನರಲ್ಲಿ ಕಾಡಲಾರಂಭಿಸಿದೆ.

ಶಾಲಾ ಕಾಲೇಜು ಆರಂಭದ ನಿರ್ಧಾರ
ಈ ಕಾರಣಗಳಿಂದಾಗಿ, ಶಾಲಾ ಕಾಲೇಜು ಆರಂಭದ ನಿರ್ಧಾರವನ್ನು ಸರಕಾರ ಹಿಂದಕ್ಕೆ ಪಡೆಯಲಿದೆಯೇ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ. ಜೊತೆಗೆ, ಸರಕಾರ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯದೇ ಇದ್ದಲ್ಲಿ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಸಾಧ್ಯತೆಯೂ ಇದೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್
ಹೊಸ ಸೋಂಕಿನ ಬಗ್ಗೆ ಮಾತನಾಡುತ್ತಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, "ತಾಂತ್ರಿಕ ಸಲಹಾ ಸಮಿತಿಯವರು ಇಂದು ಸಭೆಯನ್ನು ಸೇರಲಿದ್ದಾರೆ. ಇಂದೇ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ. ಯಾಕೆಂದರೆ, ಮುಖ್ಯಮಂತ್ರಿಗಳು ಶಾಲಾರಂಭದ ದಿನವನ್ನು ಘೋಷಿಸಿಯಾಗಿದೆ. ಹಾಗಾಗಿ ಯಾರಿಗೂ ಮುಜುಗರ ಆಗಬಾರದು"ಎಂದು ಸಚಿವರು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಒಬ್ಬರಿಗೆ ಸೋಂಕು ತಗಲಿದೆ ಎನ್ನುವ ಸುದ್ದಿಯಿದೆ
"ಇದುವರೆಗೂ ನಮಗೆ ನಮ್ಮ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ಬಂದಿಲ್ಲ. ಕೋಲ್ಕತ್ತಾದಲ್ಲಿ ಒಬ್ಬರಿಗೆ ಸೋಂಕು ತಗಲಿದೆ ಎನ್ನುವ ಸುದ್ದಿಯಿದೆ. ಸಮಿತಿಯವರ ರಿಪೋರ್ಟ್ ಆಧರಿಸಿ, ಯಾವ ರೀತಿಯ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬರಲಾಗುವುದು"ಎಂದು ಡಾ.ಸುಧಾಕರ್ ಹೇಳಿದ್ದಾರೆ.
Recommended Video

ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭ ಮುಂದಕ್ಕೆ
ಖಾಸಗಿ ಶಾಲೆಯವರಿಂದ ಶಾಲಾರಂಭಕ್ಕೆ ಭಾರೀ ಒತ್ತಡವಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದರೂ, ಸರಕಾರ ಈ ವಿಚಾರದಲ್ಲಿ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಈಗ ಅಂತಿಮವಾಗಿ ಮುಂದಿನ ವರ್ಷದ ಆರಂಭದಲ್ಲೇ ಹತ್ತನೇ ತರಗತಿಯಿಂದ ಶಾಲಾ, ಕಾಲೇಜು ಆರಂಭಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈಗ ಹೊಸ ವೈರಾಣುವಿನಿಂದಾಗಿ ಪರಿಸ್ಥಿತಿ ಯಾವ ರೀತಿ ತಿರುಗಲಿದೆ ಎಂದು ಕಾದು ನೋಡಬೇಕಿದೆ. ರಾಜ್ಯದಲ್ಲಿ ಶಾಲಾ, ಕಾಲೇಜು ಆರಂಭದ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.












Click it and Unblock the Notifications