ನೆಲಮಂಗಲ ಜೆಡಿಎಸ್ ಶಾಸಕರಿಂದ ಸುದೀಪ್ ಭೇಟಿ, ಪ್ರಚಾರಕ್ಕೆ ಆಹ್ವಾನ?
ಬೆಂಗಳೂರು, ಮಾರ್ಚ್ 23: ಜೆಡಿಎಸ್ ಪರ ನಟ ಸುದೀಪ್ ಪ್ರಚಾರಕ್ಕಿಳಿಯುತ್ತಾರೆಯೆ? ಹೀಗೊಂದು ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಟ ಸುದೀಪ್ ಮನೆಗೆ ಭೇಟಿ ನೀಡಿದ ಚಿತ್ರಗಳು ವೈರಲ್ ಆಗಿದ್ದಾಗ ಇದೇ ಪ್ರಶ್ನೆ ಹುಟ್ಟಿತ್ತು. ಆಗ ಸುದೀಪ್ ಇದನ್ನು ಅಲ್ಲಗಳೆದಿದ್ದರು.
ಈಗ ಮತ್ತೆ ಸುದೀಪ್-ಜೆಡಿಎಸ್ ಬಗ್ಗೆ ಊಹಾಪೋಹ ಏಳಲು ಕಾರಣ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಮೂರ್ತಿ. ಹೌದು, ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದು ತಮ್ಮ ಪರವಾಗಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಶಾಸಕ ಶ್ರೀನಿವಾಸಮೂರ್ತಿ ಮತ್ತು ಸುದೀಪ್ ಅವರು ಮಾತನಾಡುತ್ತಿರುವ ಚಿತ್ರಗಳು ಫೇಸ್ಬುಕ್ನ ಜೆಡಿಎಸ್ ಫ್ಯಾನ್ ಪೇಜ್ಗಳಲ್ಲಿ ಹರಿದಾಡುತ್ತಿದ್ದು, 'ಜೆಡಿಎಸ್ ಪರ ಪ್ರಚಾರಕ್ಕೆ ಸುದೀಪ್ ಒಪ್ಪಿಗೆ' ಎಂಬ ಅಡಿ ಬರಹದೊಂದಿಗೆ ವೈರಲ್ ಆಗುತ್ತಿದೆ.

ಆದರೆ ಈ ಬಗ್ಗೆ ಶಾಸಕ ಶ್ರೀನಿವಾಸಮೂರ್ತಿ ಆಗಲಿ, ಸುದೀಪ್ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ. ರಾಜಕೀಯಕ್ಕೆ ಬರುವುದಿಲ್ಲ ಎಂದ ಮಾತ್ರಕ್ಕೆ ಪ್ರಚಾರಕ್ಕೂ ಬರುವುದಿಲ್ಲ ಎಂದೇನು ಅಲ್ಲವಲ್ಲ, ಕಳೆದ ಬಾರಿ ಅಂಬರೀಷ್ ಪರ ಪ್ರಚಾರ ಮಾಡಿದ್ದ ಸುದೀಪ್ ಅವರು ಈ ಬಾರಿ ಯಾರ ಪರ ಪ್ರಚಾರ ಮಾಡುತ್ತಾರೆ ಎನ್ನುವ ಕುತೂಹಲವಂತೂ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ನೆನಪಿರಲಿ, ಸುದೀಪ್ ಅವರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದರು. ಮೊದಲ ಬಾರಿ ವಿಷ್ಣು ಸ್ಮಾರಕ ಕುರಿತಂತೆ ಚರ್ಚಿಸಲು ಮತ್ತು ಎರಡನೇ ಬಾರಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ಆಹ್ವಾನ ನೀಡಲು.












Click it and Unblock the Notifications