ಮಹಾರಾಷ್ಟ್ರದ ಮೈತ್ರಿ ಲೆಕ್ಕಾಚಾರ ಬಿಚ್ಚಿಟ್ಟ ಕಾಂಗ್ರೆಸ್!
ಬೆಂಗಳೂರು, ನವೆಂಬರ್ 23 : ಮಹಾರಾಷ್ಟ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ ನಡೆದಿದೆ. ಎನ್ಸಿಪಿ-ಬಿಜೆಪಿ ಮೈತ್ರಿಯಾಗಿದ್ದು ದೇವೇಂದ್ರ ಫಡ್ನವೀಸ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕ ಕಾಂಗ್ರೆಸ್ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. 'ಸ್ವಾಯತ್ತ ಸಂಸ್ಥೆಗಳು + ಬಿಜೆಪಿ = ಸರ್ಕಾರ' ಎಂದು ಮಹಾರಾಷ್ಟ್ರದ ಮೈತ್ರಿ ಲೆಕ್ಕಾಚಾರವನ್ನು ಬಿಚ್ಚಿಟ್ಟಿದೆ.
'ಬಿಜೆಪಿಯೊಂದಿಗಿದ್ದರೆ ಅಪವಿತ್ರ ಪವಿತ್ರವಾಗುತ್ತದೆ' ಎಂದು ಅಧಿಕಾರಕ್ಕಾಗಿ ಎರಡೂ ಪಕ್ಷಗಳು ರಾತ್ರೋರಾತ್ರಿ ಒಂದಾಗಿದ್ದನ್ನು ಟೀಕಿಸಿದೆ. ಕಾಂಗ್ರೆಸ್-ಶಿವಸೇನೆ-ಎನ್ಸಿಪಿ ಮೈತ್ರಿ ಸರ್ಕಾರದ ಬಗ್ಗೆ ಮಾತುಕತೆ ನಡೆದಿತ್ತು. ಆದರೆ, ಯಾರೂ ಊಹಿಸದ ರೀತಿ ಮುಂಜಾನೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದರು.

ಕರ್ನಾಟಕ ಕಾಂಗ್ರೆಸ್ "ಬಿಜೆಪಿಯೊಂದಿಗಿದ್ದರೆ ಅಪವಿತ್ರ ಪವಿತ್ರವಾಗುತ್ತದೆ. ಅತ್ಯಂತ ಗೌಪ್ಯವಾಗಿ ಮಧ್ಯರಾತ್ರಿಯಲ್ಲೂ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲಾಗುತ್ತದೆ. ರಾಜಭವನವು @BJP4Indiaಗಾಗಿ ರಾತ್ರಿಯೆಲ್ಲ ಕೆಲಸ ಮಾಡುತ್ತದೆ. ರಾತ್ರೋರಾತ್ರಿ ಸಮೀಕರಣಗಳು ಬದಲಾಗಿ ಶಾಸಕರು ಪಕ್ಷಗಳು ತಮ್ಮ ನಿಲುವನ್ನು ಬದಲಾಯಿಸುತ್ತಾರೆ. ಸ್ವಾಯತ್ತ ಸಂಸ್ಥೆಗಳು+ಬಿಜೆಪಿ =ಸರ್ಕಾರ" ಎಂದು ಟ್ವೀಟರ್ನಲ್ಲಿ ಟೀಕಿಸಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿದ್ದವು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಚುನಾವಣೆ ಬಳಿಕ ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ.
ಕಾಂಗ್ರೆಸ್ 44 ಮತ್ತು ಎನ್ಸಿಪಿ 54 ಸ್ಥಾನಗಳಲ್ಲಿ ಜಯಗಳಿಸಿದ್ದವು.13 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು. ಬಿಜೆಪಿ-ಶಿವಸೇನೆ ಮೈತ್ರಿ ಮುರಿದು ಬಿದ್ದ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
ಕಾಂಗ್ರೆಸ್-ಎನ್ಸಿಪಿ-ಶಿವಸೇನೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಸರಣಿ ಸಭೆಗಳನ್ನು ನಡೆಸುತ್ತಿದ್ದವು. ಇದರ ನಡುವೆಯೇ ಬಿಜೆಪಿ ಮತ್ತು ಎನ್ಸಿಪಿಯ ಅಜಿತ್ ಪವಾರ್ ಒಂದಾಗಿ ಸರ್ಕಾರ ರಚನೆ ಮಾಡಿದ್ದಾರೆ.
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನವೆಂಬರ್ 30ರಂದು ಈ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದೆ.












Click it and Unblock the Notifications