ಪರಿವರ್ತನಾ ಯಾತ್ರೆ : 17ದಿನದಲ್ಲಿ ಬಿಜೆಪಿ ಸಾಧಿಸಿದ್ದೇನು?
Recommended Video

ಬೆಂಗಳೂರು, ನವೆಂಬರ್ 24 : ಕರ್ನಾಟಕ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ' ಹದಿನೇಳು ದಿನಗಳನ್ನು ಪೂರೈಸಿದೆ. ಮೂರು ದಿನಗಳ ವಿಶ್ರಾಂತಿ ಬಳಿಕ ನಾಯಕರು ನ.27ರಂದು ಯಾತ್ರೆ ಮತ್ತೆ ಆರಂಭಿಸಲಿದ್ದಾರೆ.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿ ಪರಿವರ್ತನಾ ಯಾತ್ರೆ ಮೂಲಕ ಒಂದು ಹಂತದ ಪ್ರಚಾರ ಕಾರ್ಯವನ್ನು ಮುಕ್ತಾಯ ಮಾಡಲಿದೆ. ಜನವರಿಯಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.
2018ರ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬ ಗುರಿಯನ್ನು ಕರ್ನಾಟಕ ಬಿಜೆಪಿ ಹೊಂದಿದೆ. ಇದಕ್ಕಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳನ್ನು ನಡೆಸುವ ಮೂಲಕ ಪ್ರಚಾರ ನಡೆಸುತ್ತಿದೆ.
ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ 'ಮನೆ-ಮನೆಗೆ ಕಾಂಗ್ರೆಸ್' ಎಂಬ ಅಭಿಯಾನ ನಡೆಸುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು 'ಕುಮಾರಪರ್ವ' ಎಂಬ ಹೆಸರಿನಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆಯಿಂದ ಪಕ್ಷಕ್ಕೆ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ...

ರಾಜ್ಯ ಸರ್ಕಾರದ ವಿರುದ್ಧ ಹೋರಾಟ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಜನರ ಮುಂದಿಡಲಾಗುತ್ತಿದೆ. ಈ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಆಡಳಿತ ವಿರೋಧಿ ಅಲೆ ಎಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಪ್ರತಿಪಕ್ಷ ಬಿಜೆಪಿಗೆ ಚುನಾವಣೆಯಲ್ಲಿ ಸಹಾಯಕವಾಗಿದೆ.

ಚುನಾವಣಾ ಪ್ರಚಾರ
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಜನವರಿ ಅಥವ ಫೆಬ್ರವರಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಪಕ್ಷ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿರುತ್ತದೆ. ದಿನಾಂಕ ಘೋಷಣೆಯಾದ ಬಳಿಕ ರಾಷ್ಟ್ರೀಯ ನಾಯಕರನ್ನು ಕರೆಸಿ ಮತ್ತೊಂದು ಸುತ್ತಿನ ಪ್ರಚಾರ ನಡೆಸಲಾಗುತ್ತದೆ.

ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದು
ಚುನಾವಣೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವುದು ಪಕ್ಷದ ಕಾರ್ಯಕರ್ತರು. ಬಿಜೆಪಿ ಯಾತ್ರೆಯ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದೆ. ಚುನಾವಣೆ ಎದುರಾಗಲಿದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದೆ. ಯಾತ್ರೆ ಎಲ್ಲಾ ಕ್ಷೇತ್ರದಲ್ಲೂ ಸಂಚಾರ ನಡೆಸುವುದರಿಂದ ಕಾರ್ಯರ್ತರು ಉತ್ಸಾಹದಿಂದ ಕೆಲಸ ಆರಂಭಿಸಲಿದ್ದಾರೆ.

ಆಡಳಿತ ಪಕ್ಷಕ್ಕಿಂತ ಮನ್ನಡೆ
ಪರಿವರ್ತನಾ ಯಾತ್ರೆ ಮೂಲಕ ಬಿಜೆಪಿ ನಾವು ಕಾಂಗ್ರೆಸ್ಗಿಂತ ಮುಂದಿದ್ದೇವೆ ಎಂಬ ಸಂದೇಶ ಸಾರುತ್ತಿದೆ. ಆಡಳಿತ ಪಕ್ಷ ಕಾಂಗ್ರೆಸ್ನ ನಾಯಕರು ಡಿಸೆಂಬರ್ 15ರ ನಂತರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಅದಕ್ಕೂ ಮೊದಲು ಬಿಜೆಪಿ ಒಂದು ಸುತ್ತಿನ ಪ್ರಚಾರವನ್ನು ಎಲ್ಲಾ ಕ್ಷೇತ್ರಗಳಲ್ಲಿ ಮುಗಿಸಿರುತ್ತದೆ.

ಯಡಿಯೂರಪ್ಪ ವರ್ಚಸ್ಸು ವೃದ್ಧಿ
ಬಿಜೆಪಿ 2018ರ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಿದೆ. ಯಡಿಯೂರಪ್ಪ ನೇತೃತ್ವದಲ್ಲಿಯಾತ್ರೆ ಮೂಲಕ ರಾಜ್ಯ ಪ್ರವಾಸ ಮಾಡುತ್ತಿರುವುದರಿಂದ ಯಡಿಯೂರಪ್ಪ ಅವರ ವರ್ಚಸ್ಸು ವೃದ್ಧಿಯಾಗಲಿದೆ.

ಪರಿವರ್ತನಾ ಯಾತ್ರೆ ಎಲ್ಲಿದೆ?
ನವೆಂಬರ್ 2ರಂದು ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದರು. ನವೆಂಬರ್ 22ರಂದು ಕಾಗವಾಡದಲ್ಲಿ ಯಾತ್ರೆ ಮುಕ್ತಾಯಗೊಂಡಿದೆ. ನ. 27ರಂದು ಅಥಣಿಯಿಂದ ಯಾತ್ರೆ ಪುನಃ ಆರಂಭವಾಗಲಿದೆ.

ಧರ್ಮ ಸಂಸತ್ನಲ್ಲಿ ಭಾಗಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನ.24, 25, 26ರಂದು ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ ಸಂತರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications