ಕಾಂಗ್ರೆಸ್ ಶಾಸಕರಲ್ಲಿ ನಡುಕ ಹುಟ್ಟಿಸಿದ ಮೋದಿ ಅಲೆ
ಬೆಳಗಾವಿ, ನ. 27 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಶಾದಿ ಭಾಗ್ಯ, ರೈತರ ಕಬ್ಬಿಗೆ ಬೆಂಬಲ ಬೆಲೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ಚಳಿ ಬಿಡಿಸುತ್ತಿದ್ದರೆ, ಆಂತರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ನರೇಂದ್ರ ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ನಡುಕ ಆರಂಭವಾಗಿದೆ.
ಬುಧವಾರ ಬೆಳಿಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಸಚಿವರ ನಡುವೆ ಭಾರೀ ವಾದ, ವಾಗ್ವಾದ, ಮಾತಿನ ಚಕಮಕಿಗಳು ನಡೆದಿದೆ. ರಾಜ್ಯದಲ್ಲಿ ಮೋದಿ ಬಲ ಹೆಚ್ಚಾಗುತ್ತಿದ್ದರೆ ಕಾಂಗ್ರೆಸ್ ನಾಯಕರು ನಿದ್ದೆ ಹೊಡೆಯುತ್ತಿದ್ದಾರೆ ಎಂದು ಕೆಲವರು ಕೆಂಡ ಕಾರಿದ್ದಾರೆ.
ರಾಜ್ಯದಲ್ಲಿ ನರೇಂದ್ರ ಮೋದಿ ಅಲೆ ಬಲವಾಗಿ ಆರಂಭವಾಗಿದೆ. ಆದರೂ ಕೂಡ ಸಚಿವರು ಕಣ್ಣುಮುಚ್ಚಿ ಕುಳಿತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಲ ವರ್ಧಿಸಲು ಸಚಿವರು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಎದುರಿಸುವುದು ಹೇಗೆ ಎಂದು ಕೆಲ ಶಾಸಕರು ಹರಿಹಾಯ್ದಿದ್ದಾರೆ. [ಸದನದಲ್ಲಿ ಬುಧವಾರ]
ರಾಜ್ಯದಲ್ಲಿ ಕಾಂಗ್ರೆಸ್ ಬಲ ಕುಸಿಯುತ್ತಿದೆ, ಮಂತ್ರಿಗಳು ನಿದ್ದೆ ಮಾಡುತ್ತಿದ್ದಾರೆ, ಕಾಂಗ್ರೆಸ್ ಸಾಧನೆಯನ್ನು ಜನರಿಗೆ ತಲುಪಿಸಲು ಸಚಿವರು ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿರುವ ಡಜನ್ ಶಾಸಕರು, ಇನ್ನೆರಡು ದಿನಗಳಲ್ಲಿ ರಾಜ್ಯದ ಎಲ್ಲ ವಿದ್ಯಮಾನ, ಮಂತ್ರಿಗಳ ವೈಫಲ್ಯವನ್ನು ವಿವರಿಸಿ ಕಾಂಗ್ರೆಸ್ ಹೈಕಮಾಂಡಿಗೆ ಪತ್ರ ಬರೆಯುವ ಬೆದರಿಕೆ ಹಾಕಿದ್ದಾರೆ.
ಕೆಲ ನಿಷ್ಕ್ರಿಯ ಸಚಿವರಿಂದಾಗಿ ಜನರಿಗೆ ನಾವು ಮುಖ ತೋರಿಸದಂತಾಗಿದೆ. ಲೋಕಸಭೆ ಚುನಾವಣೆ ಸಮಯದಲ್ಲಿ ತೊಂದರೆಯಾಗುವುದು ಶಾಸಕರಿಗೇ ಹೊರತು ಸಚಿವರಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೆಲಸ ಶಾಸಕರು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರೀ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ಇದೇ ರೀತಿಯ ವಾಗ್ವಾದ ನಡೆದಿತ್ತು. ಸದನದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳು ಹರಿಯಾಯುತ್ತಿದ್ದರೆ ಯಾವ ಮಂತ್ರಿಗಳೂ ಅವರ ಬೆಂಬಲಕ್ಕೆ ಬರುತ್ತಿಲ್ಲ ಎಂದು ಕೆಲ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು.