ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಸುದ್ದಿ-ಗದ್ದಲ!
ನಂಜನಗೂಡಿನಲ್ಲಿ ಕಾಂಗ್ರೆಸ್ಸಿನಿಂದ ಸಿಡಿದೆದ್ದು ವಿ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಬಿಸಾಕಿದ್ದರಿಂದ ಮತ್ತು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಧುರೀಣ ಮಹದೇವ ಪ್ರಸಾದ್ ಅವರು ಅಸುನೀಗಿದ್ದರಿಂದ ಉಪಚುನಾವಣೆಗಳು ಎದುರಾಗಿವೆ.
ಬೆಂಗಳೂರು, ಏಪ್ರಿಲ್ 12 : ಯಡಿಯೂರಪ್ಪ, ಸಿದ್ದರಾಮಯ್ಯ, ಸುರೇಶ್ ಕುಮಾರ್, ಪರಮೇಶ್ವರ್, ಎಸ್ಎಂ ಕೃಷ್ಣ, ಡಿಕೆ ಶಿವಕುಮಾರ್, ವಿ ಶ್ರೀನಿವಾಸ್ ಪ್ರಸಾದ್, ಕಳಲೆ ಕೇಶವಮೂರ್ತಿ, ಗೀತಾ ಮಹದೇವ ಪ್ರಸಾದ್, ನಿರಂಜನ್ ಮುಂತಾದವರು ಉಸಿರು ಬಿಗಿಹಿಡಿದುಕೊಂಡು ಕುಳಿತಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ವಿಧಾನಸಭೆ ಕ್ಷೇತ್ರ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೊರಬಿದ್ದು, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಭವಿಷ್ಯವನ್ನು ಕೂಡ ಹೆಚ್ಚೂಕಡಿಮೆ ನಿರ್ಧರಿಸಲಿದೆ.[ಏ.13ರಂದು ಮತ ಎಣಿಕೆ, ನಂಜನಗೂಡಿನಾದ್ಯಂತ ನಿಷೇದಾಜ್ಞೆ ಜಾರಿ]
ನಂಜನಗೂಡಿನಲ್ಲಿ ಕಾಂಗ್ರೆಸ್ಸಿನಿಂದ ಸಿಡಿದೆದ್ದು ವಿ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಬಿಸಾಕಿದ್ದರಿಂದ ಮತ್ತು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಧುರೀಣ ಮಹದೇವ ಪ್ರಸಾದ್ ಅವರು ಅಸುನೀಗಿದ್ದರಿಂದ ಉಪಚುನಾವಣೆಗಳು ಎದುರಾಗಿವೆ. ಕಾರಣಗಳು ಏನೇ ಇದ್ದರೂ ಎರಡೂ ಕ್ಷೇತ್ರಗಳು ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣವಾಗಿದೆ.
ನಂಜನಗೂಡಿನಲ್ಲಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಅವರಿಗೆ ಕಾಂಗ್ರೆಸ್ಸಿನ ಕಳಲೆ ಕೇಳವಮೂರ್ತಿ ಸೆಡ್ಡು ಹೊಡೆದಿದ್ದರೆ, ಗುಂಡ್ಲುಪೇಟೆಯಲ್ಲಿ ಅನುಕಂಪದ ಅಲೆಯ ಮೇಲೆ ತೇಲುತ್ತಿರುವ ಗೀತಾ ಮಹದೇವ ಪ್ರಸಾದ್ ಅವರಿಗೆ ಬಿಜೆಪಿಯ ನಿರಂಜನ್ ಎಂಬುವವರು ಟಕ್ಕರ್ ನೀಡಿದ್ದಾರೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]
ನಾವೇ ಗೆಲ್ಲೋದು ಎಂದು ಬಿಜೆಪಿ ಕಾಂಗ್ರೆಸ್ ಗಳೆರಡೂ ಬೀಗುತ್ತಿವೆ. ಎರಡು ವಿಭಿನ್ನವಾದ ಎಕ್ಸಿಟ್ ಪೋಲ್ ಗಳು ಕೂಡ ಹರಿದಾಡುತ್ತಿವೆ. ಅಭ್ಯರ್ಥಿಗಳ ಹಣೆಬರಹ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ನಲ್ಲಿ ಅಡಗಿವೆ. ಬಿಜೆಪಿ ಗೆದ್ದರೆ ಇಲ್ಲೂ ವೋಟಿಂಗ್ ಮಷೀನ್ ಸರಿಯಿಲ್ಲ ಅಂತ ಕಾಂಗ್ರೆಸ್ ನವರು ತಗಾದೆ ಎತ್ತುತ್ತಾರಾ?
ಮತಎಣಿಕೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಕೆಲವೇ ಗಂಟೆಗಳಲ್ಲಿ ಫಲಿತಾಂಶವೂ ಹೊರಬೀಳಲಿದೆ. ಎಂದಿನಂತೆ ಒನ್ಇಂಡಿಯಾ ಕನ್ನಡದ ತಂಡ ಕ್ಷಣಕ್ಷಣದ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ, ಟ್ವಿಟ್ಟರ್ ನಲ್ಲಿ, ಫೇಸ್ ಬುಕ್ಕಿನಲ್ಲಿ ನೀಡಲು ಸಜ್ಜಾಗಿ ಕುಳಿತಿದೆ. ಓದುಗರೆ, ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ನಮಗೆ ತಿಳಿಸಿ.