ರಾಜ್ಯೋತ್ಸವದ ದಿನದಂದು ಬಿಎಸ್ವೈ ಸರಕಾರದ ಅಪಚಾರ: ಟ್ವಿಟ್ಟರ್ ಅಭಿಯಾನ
ಬೆಂಗಳೂರು, ನ 2: ಕನ್ನಡ ರಾಜ್ಯೋತ್ಸವದ ದಿನ, ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಹಲವಾರು ಜಿಲ್ಲಾ ಉಸ್ತುವಾರಿ ಸಚಿವರುಗಳು ಕನ್ನಡ ಧ್ವಜ ಅನಾವರಣಗೊಳಿಸದೇ ಅಪಚಾರವೆಸಗಿಸಿದ್ದಾರೆಂದು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.
ಈ ಸಂಬಂಧ, ಸಾಮಾಜಿಕ ತಾಣದಲ್ಲಿ ಅಭಿಯಾನ ನಡೆಸಲು ಕರೆ ನೀಡಲಾಗಿದೆ. ಇಂದು (ನ 2) ಸಂಜೆ ಐದು ಗಂಟೆಯಿಂದ #ನಮ್ಮಧ್ವಜ_ನಮ್ಮಹೆಮ್ಮೆ ಹ್ಯಾಷ್ ಟ್ಯಾಗ್ ಅಡಿಯಲಿ ಟ್ವಿಟ್ಟರ್ ಅಭಿಯಾನ ನಡೆಯಲಿದೆ.
ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡ ಧ್ವಜಾರೋಹಣ ನಡೆಸಿರುವಾಗ ಸಚಿವರುಗಳು ಜಿಲ್ಲಾ ಕೇಂದ್ರಗಳಲ್ಲಿ ಬಾವುಟ ಹಾರಿಸದೇ ಇರುವ ಹಿಂದಿನ ಕುತಂತ್ರ ಶಕ್ತಿಗಳು ಯಾವುವು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಶ್ನಿಸಿದೆ.

"ಬಾವುಟ ಹಾರಿಸದೇ ಸಚಿವರುಗಳು ಕನ್ನಡ ಧ್ವಜ, ಕನ್ನಡತನ, ಕನ್ನಡ ಅಸ್ಮಿತೆಯನ್ನು ಅವಮಾನಿಸಿದ್ದಾರೆ. ಕನ್ನಡ ಬಾವುಟವನ್ನು ಕನ್ನಡಿಗರು ತಮ್ಮ ಎದೆಯಲ್ಲಿಟ್ಟುಕೊಂಡು ಪೂಜಿಸುತ್ತ ಬಂದಿದ್ದಾರೆ. ನಮಗೆ ರಾಷ್ಟ್ರಪ್ರೇಮ ಎಷ್ಟು ಮುಖ್ಯವೋ ನಾಡಪ್ರೇಮವೂ ಅಷ್ಟೇ ಮುಖ್ಯ. ಕರ್ನಾಟಕದಿಂದ ಭಾರತ ಎಂಬುದನ್ನು ಮರೆಯಬಾರದು" ಎಂದು ಕರವೇ ಆಕ್ರೋಶ ವ್ಯಕ್ತ ಪಡಿಸಿದೆ .
ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಯಾವುದೇ ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಕನ್ನಡ ಧ್ವಜಾರೋಹಣ ಮಾಡದೇ ಕನ್ನಡಿಗರನ್ನು ಅಪಮಾನಿಸಿರುವ ಎಲ್ಲ ಸಚಿವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಬೇಕು. ಉಂಡ ಮನೆಗೆ ಕೇಡು ಬಯಸುವ ಇಂಥ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ. ಹೆತ್ತ ತಾಯಿಯನ್ನೇ ಗೌರವಿಸದವರು ಜನರ ಹಿತ ಕಾಪಾಡಲು ಹೇಗೆ ಸಾಧ್ಯ ಎಂದು ಕರವೇ ಕಿಡಿಕಾರಿದೆ.
ಕರ್ನಾಟಕ ತನ್ನ ಎಲ್ಲ ಸಾಂಸ್ಕೃತಿಕ ಅನನ್ಯತೆಯೊಂದಿಗೆ ಭಾರತ ಒಕ್ಕೂಟದ ಭಾಗವಾಗಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಒಕ್ಕೂಟದ ಮೂಲಮಂತ್ರ. ರಾಷ್ಟ್ರೀಯತೆಯ ಮೆರವಣಿಗಾಗಿ ನಾವು ನಮ್ಮತನಗಳನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದ ಗೌರವ, ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಯಾವುದೇ ಶಕ್ತಿಯನ್ನು ನಾವು ಸಹಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ.












Click it and Unblock the Notifications